ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಡಿ.ಕೆ. ಶಿವಕುಮಾರ್ ವ್ಯಂಗ್ಯ
ಕೆಪಿಎಸ್ಸಿ ಹಗರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ; ಬಿಜೆಪಿಯಲ್ಲಿ ಆಂತರಿಕ ಕಲಹ: ಮುಖ್ಯಮಂತ್ರಿ
ಮುಖ್ಯಮಂತ್ರಿ


ಬೆಂಗಳೂರು, 31 ಆಗಸ್ಟ್ (ಹಿ.ಸ.):

ಆ್ಯಂಕರ್:ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಬಿಜೆಪಿ ಇರಬಾರದು ಎಂಬ ಉದ್ದೇಶದಿಂದ ಹೋರಾಟ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ನೆಹರು ತಾರಾಲಯದ ಬಳಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಅವರು ತಮ್ಮ ಕರ್ತವ್ಯ ಮಾಡಲಿ, ಏನೇ ಆರೋಪ ಮಾಡಬೇಕೆಂದರೂ ಮಾಡಲಿ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಶೀಘ್ರದಲ್ಲೇ ‘ಅಲ್ಲೋಲ ಕಲ್ಲೋಲವಾಗುವಂತಹ ದಾಖಲೆ’ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿರುವ ಕುರಿತು ಕೇಳಿದಾಗ, “ಬಹಳ ಸಂತೋಷ” ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

ಬಿಜೆಪಿ ಪಾದಯಾತ್ರೆಗೆ ತಿರುಗೇಟು

ಬಿಜೆಪಿ ಪಾದಯಾತ್ರೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಮೊದಲು ಪಾದಯಾತ್ರೆ ಆರಂಭಿಸಲಿ, ನಂತರ ತಮ್ಮ ಪಕ್ಷದ ಯಾತ್ರೆ ಕುರಿತು ತಿಳಿಸುವುದಾಗಿ ಹೇಳಿದರು.

“ನಾವು ರಾಜಕಾರಣಿಗಳಲ್ಲವೇ? ಅವರು ಶುರು ಮಾಡಲಿ. ನಾವು ಅವರಿಗೆ ಗೌರವ ಕೊಟ್ಟು ಅಧಿವೇಶನ ನಡೆಸಿದ್ದೆವು. ಆದರೆ ಯಾವುದೇ ವಿಚಾರ ಚರ್ಚೆಯಾಗಲಿಲ್ಲ. ಈಗ ಕಸ್ತೂರಿರಂಗನ್ ವರದಿ ಹಾಗೂ ರೈತರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯ ಪಡೆಯಲಾಗುವುದು” ಎಂದು ತಿಳಿಸಿದರು.

ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ

ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಬಂಧನದ ಕುರಿತು ಕೇಳಿದಾಗ, ತನಿಖೆಯಲ್ಲಿ ತಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

“ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮಾಹಿತಿ ಪಡೆಯುತ್ತೇನೆ. ಬಿಜೆಪಿಯಲ್ಲಿ ಆಂತರಿಕ ಕಲಹ ನಡೆಯುತ್ತಿದೆ. ಕೆಪಿಎಸ್‌ಸಿಗೆ ನೇಮಕ ಮಾಡಿದವರು ಯಾರು ಎಂಬುದು ಸೇರಿದಂತೆ ಸಂಪೂರ್ಣ ವರದಿ ಬರಬೇಕು. ವರದಿ ಬರುವವರೆಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾರು ಏನೇ ಮಾತನಾಡುತ್ತಾರೋ ಮಾತನಾಡಲಿ. ಅವರಿಗೆ ಕಾಲವೇ ಉತ್ತರ ನೀಡಲಿದೆ” ಎಂದರು.

ಕಾನೂನುಬದ್ಧ ದಾಖಲೆ ಇದ್ದವರಿಗೆ ಭೂ ಗ್ಯಾರಂಟಿ

ಸರ್ಕಾರದ ಆರನೇ ಗ್ಯಾರಂಟಿಯಾಗಿ ಘೋಷಿಸಲಾಗುತ್ತಿರುವ ಭೂ ಗ್ಯಾರಂಟಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

“ಸರ್ಕಾರಕ್ಕಾಗಿ ತಮ್ಮ ಆಸ್ತಿಯನ್ನು ತ್ಯಾಗ ಮಾಡುವ ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ. ಅವರ ಹೆಸರುಗಳನ್ನು ಶಾಶ್ವತವಾಗಿ ದಾಖಲಿಸಬೇಕು. ಸೂಕ್ತ ಪರಿಹಾರ ನೀಡಬೇಕು. ಅವರು ಹೊಂದಿರುವ ಭೂಮಿಯಲ್ಲಿಯೇ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಬೇಕು. ಇದು ರಾಜ್ಯದ ಎಲ್ಲ ಭೂ ಮಾಲೀಕರಿಗೂ ಅನ್ವಯವಾಗಬೇಕು” ಎಂದು ವಿವರಿಸಿದರು.

ಫಲಾನುಭವಿಗಳ ಭಾವಚಿತ್ರ ಸೇರಿದಂತೆ ಅಗತ್ಯ ವಿವರಗಳನ್ನು ಒಳಗೊಂಡ ಸೂಕ್ತ ದಾಖಲೆಗಳನ್ನು ನೀಡಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಆದರೆ ದಾಖಲೆಗಳು ಕಾನೂನುಬದ್ಧವಾಗಿ ಮಾನ್ಯವಾಗಿರಬೇಕು ಎಂದು ಸ್ಪಷ್ಟಪಡಿಸಿದರು.

“ಬಿ ಖಾತಾದಿಂದ ಎ ಖಾತೆಗೆ ಪರಿವರ್ತಿಸುವಾಗಲೂ ಕಾನೂನುಬದ್ಧತೆ ಇರಬೇಕು. ಬೋಗಸ್ ನೋಂದಣಿ ಇದ್ದರೆ ಮಾಡಲು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನೊಳಗೆ ಸೂಕ್ತ ದಾಖಲೆಗಳನ್ನು ಒದಗಿಸಲಾಗುವುದು” ಎಂದರು.

ಭವಿಷ್ಯದಲ್ಲಿ ಆಸ್ತಿ ವರ್ಗಾವಣೆ, ಸಾಲ ಪಡೆಯುವುದು ಅಥವಾ ಕುಟುಂಬದ ಸದಸ್ಯರ ನಡುವೆ ಆಸ್ತಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಫಲಾನುಭವಿಗಳ ಹಕ್ಕು ಹಾಗೂ ಆಸ್ತಿಗಳು ಸುರಕ್ಷಿತವಾಗಿರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಲಿದೆ ಎಂದು ಹೇಳಿದರು.

ಈ ಯೋಜನೆ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ, ಕೃಷ್ಣ ಬೈರೇಗೌಡ ಅವರು ಕಂದಾಯ ಸಚಿವರಾಗಿದ್ದಾಗ ಆರಂಭವಾಗಿದ್ದು, ಈಗಿನ ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande