
ಬೆಂಗಳೂರು, 22 ಆಗಸ್ಟ್ (ಹಿ.ಸ.):
ಆ್ಯಂಕರ್:ಮಹಾಭಾರತದ ಮಹತ್ವದ ಪಾತ್ರಗಳಲ್ಲಿ ಒಂದಾದ ಕರ್ಣನ ಜೀವನಗಾಥೆಯನ್ನು ಆಧರಿಸಿದ ಬಹುನಿರೀಕ್ಷಿತ ‘ಮಹಾವೀರ ಕರ್ಣ’ ಸಿನಿಮಾ ಘೋಷಣೆಯಾಗಿದೆ. ಪ್ರತಿಷ್ಠಿತ ಪೆನ್ ಮೂವೀಸ್, ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್ ಹಾಗೂ ಆರ್ವಿ ಸ್ಟುಡಿಯೋಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ತೆಲುಗಿನ ಖ್ಯಾತ ನಿರ್ದೇಶಕ ರಮೇಶ್ ವರ್ಮಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ರಾಕ್ಷಸುಡು’, ‘ಖಿಲಾಡಿ’ ಹಾಗೂ ‘ವೀರ’ ಸೇರಿದಂತೆ ಆ್ಯಕ್ಷನ್ ಮತ್ತು ವಾಣಿಜ್ಯ ಪ್ರಧಾನ ಚಿತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ರಮೇಶ್ ವರ್ಮಾ, ಇದೀಗ ಮಹಾಭಾರತದ ಕರ್ಣನ ಕಥೆಯನ್ನು ವಿಭಿನ್ನ ದೃಷ್ಟಿಕೋನದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ.
ಕರ್ಣನ ಬದುಕು ಕೇವಲ ಕೀರ್ತಿಗಾಗಿ ಹೋರಾಡಿದ ಯೋಧನ ಕಥೆಯಲ್ಲ. ಕೊಟ್ಟ ಮಾತಿಗೆ ಬದ್ಧತೆ, ಅಪ್ರತಿಮ ದಾನಶೀಲತೆ, ಸ್ನೇಹದ ಮೇಲಿನ ನಿಷ್ಠೆ ಹಾಗೂ ವಿಧಿಯ ವಿರುದ್ಧದ ಹೋರಾಟವೇ ಆತನ ವ್ಯಕ್ತಿತ್ವದ ಪ್ರಮುಖ ಅಂಶಗಳಾಗಿವೆ. ಕುಂತಿಯ ಪುತ್ರನಾಗಿ ಜನಿಸಿದರೂ ರಾಜಮನೆತನದ ಮಾನ್ಯತೆಯಿಂದ ದೂರ ಬೆಳೆದ ಕರ್ಣ, ಜೀವನದುದ್ದಕ್ಕೂ ತಿರಸ್ಕಾರ ಮತ್ತು ಅವಮಾನಗಳನ್ನು ಎದುರಿಸುತ್ತಾನೆ. ಆದರೂ ತಾನು ನಂಬಿದ ವ್ಯಕ್ತಿಗಳು ಹಾಗೂ ತತ್ವಗಳಿಗೆ ಕೊನೆಯವರೆಗೂ ನಿಷ್ಠನಾಗಿ ಉಳಿಯುತ್ತಾನೆ.
ತಾನು ನೀಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧನಾಗಿದ್ದ ಕರ್ಣನ ವ್ಯಕ್ತಿತ್ವವೇ ಚಿತ್ರದ ಭಾವನಾತ್ಮಕ ತಳಹದಿಯಾಗಲಿದೆ. ಗೌರವ, ನಿಷ್ಠೆ, ಸ್ನೇಹ, ದ್ರೋಹ, ವಿಧಿ ಹಾಗೂ ಕೊಟ್ಟ ಮಾತಿನ ಬೆಲೆಯನ್ನು ಒಳಗೊಂಡ ಆಳವಾದ ಮಾನವೀಯ ಕಥೆಯಾಗಿ ‘ಮಹಾವೀರ ಕರ್ಣ’ ಚಿತ್ರ ರೂಪುಗೊಳ್ಳುತ್ತಿದೆ.
ಚಿತ್ರದ ಟೀಸರ್ನಲ್ಲಿಯೂ ಕರ್ಣನ ಈ ಗುಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಯೋಧರು, ಸಾಮ್ರಾಜ್ಯಗಳು, ಆಯುಧಗಳು ಹಾಗೂ ಅದ್ಧೂರಿ ದೃಶ್ಯಗಳ ನಡುವೆ ಕರ್ಣನ ಮಾತಿಗೆ ಬದ್ಧವಾಗಿರುವ ವ್ಯಕ್ತಿತ್ವವೇ ಪ್ರಮುಖವಾಗಿ ಗಮನ ಸೆಳೆಯುತ್ತದೆ. ಪೌರಾಣಿಕ ವೈಭವಕ್ಕೆ ಮಾತ್ರ ಸೀಮಿತವಾಗದೆ, ಕರ್ಣನ ಆಂತರಿಕ ಸಂಘರ್ಷ ಮತ್ತು ಮಾನವೀಯ ಭಾವನೆಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಚಿತ್ರದಲ್ಲಿದೆ.
ಚಿತ್ರಕ್ಕೆ ರಾಮ್ಜಿ ದತ್ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ, ಶ್ರೀಮಣಿ ಸಂಭಾಷಣೆ ಹಾಗೂ ಜ್ಞಾನಿ ಸಂಗೀತದ ಹೊಣೆ ಹೊತ್ತಿದ್ದಾರೆ.
‘ಮಹಾವೀರ ಕರ್ಣ’ ಸಿನಿಮಾ 2026ರ ಡಿಸೆಂಬರ್ 4ರಂದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.