
ಕೊಪ್ಪಳ , 25 ಜುಲೈ (ಹಿ.ಸ.):
ಆ್ಯಂಕರ್ : 2026-27 ನೇ ಸಾಲಿನ ಮುಂಗಾರು ಮಳೆ ವಿಫಲವಾದಾಗ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ಮಾಹಿತಿ ನೀಡಿದ್ದು, ರೈತರು ಇವುಗಳನ್ನು ಅನುಸರಿಸುವುದರ ಮೂಲಕ ಅನುಕೂಲ ಕಂಡುಕೊಳ್ಳಬಹುದು.
ಅನುಸರಿಸಬೇಕಾದ ಕ್ರಮಗಳು:
ಬೆಳೆ ವಿಮೆ: ಮಳೆ ಕೈಕೊಟ್ಟಾಗ ರೈತರು ಆರ್ಥಿಕ ನಷ್ಟದಿಂದ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅತ್ಯಂತ ಪ್ರಮುಖ ಯೋಜನೆಯಾಗಿದೆ. ರೈತರು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಪಡೆಯಲು ನಿಗದಿತ ದಿನಾಂಕದೊಳಗೆ ನೋಂದಾಯಿಸಬೇಕು.
ಬೆಳೆ ವಿಮೆ ನೋಂದಣಿಯ ಕೊನೆಯ ದಿನಾಂಕಗಳು ಮತ್ತು ಕಂತುಗಳ ಬಗ್ಗೆ ನಿರಂತರ ಮಾಹಿತಿಯನ್ನು ಪಡೆಯಬೇಕು. ಗ್ರಾಮ ಪಂಚಾಯತಿ ಮಟ್ಟದ ಗ್ರಾಮ ಒನ್ ಕರ್ನಾಟಕ ಒನ್ ಮತ್ತು ಬ್ಯಾಂಕುಗಳಲ್ಲಿ ಕೃಷಿ ಅಧಿಕಾರಿಗಳ ಸಹಾಯ ಪಡೆದು ವಿಮೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ನೀರಿನ ಸದ್ಬಳಕೆ: ಅಲ್ಪ ನೀರಿನಲ್ಲಿಯೇ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು.
ಬರ ನಿರೋಧಕ ತಳಿ ಬಳಕೆ: ಸಾಮಾನ್ಯವಾಗಿ ಬಿತ್ತುವ ದೀರ್ಘಾವಧಿ ಬೆಳೆಗಳ ಬದಲಾಗಿ ಕಡಿಮೆ ಅವಧಿಯ ಮತ್ತು ಬರ ನಿರೋಧಕ ತಳಿಗಳನ್ನು ಬಳಸಬೇಕು. ಭತ್ತದಲ್ಲಿ ನೇರ ಬಿತ್ತನೆ ಅನುಸರಿಸಬೇಕು.
ಅಂತರಬೇಸಾಯ: ತೇವಾಂಶದ ಕೊರತೆ ಇದ್ದಾಗ ಅಂತರಬೇಸಾಯ ಕೈಗೊಂಡು ಮಣ್ಣನ್ನು ಸಡಿಲಗೊಳಿಸಿ ತೇವಾಂಶ ಆವಿ ಆಗದಂತೆ ತಡೆಯಬೇಕು.
ಅಂತರ ಬೆಳೆ: ಒಂದೇ ಬೆಳೆಯನ್ನು ಬಿತ್ತದೆ ಸಿರಿಧಾನ್ಯ+ದ್ವಿದಳ ಧಾನ್ಯ (ಉದಾ: ರಾಗಿ+ಅಲಸಂದಿ ಅಥವಾ ಜೋಳ+ತೊಗರಿ) ಪದ್ಧತಿ ಅಳವಡಿಸಿಕೊಳ್ಳಬೇಕು. ಅಂದರೆ ಒಂದು ಬೆಳೆ ವಿಫಲವಾದರೆ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ರೈತರಿಗೆ ಆರ್ಥಿಕ ನಷ್ಟ ಉಂಟಾಗುವುದಿಲ್ಲ.
ಹೊದಿಕೆ ವಿಧಾನ: ಸಾಲುಗಳ ಮಧ್ಯೆ ಇರುವ ತೇವಾಂಶವನ್ನು ಕಾಪಾಡಿಕೊಳ್ಳಲು ಕೃಷಿ ತ್ಯಾಜ್ಯ ಅಥವಾ ಒಣಗಿದ ಎಲೆಗಳನ್ನು ಸಾಲಿನ ಮಧ್ಯ ಹರಡುವುದರಿಂದ ಮಣ್ಣಿನಲ್ಲಿರುವ ತೇವಾಂಶ ದೀರ್ಘಕಾಲ ಉಳಿಯುತ್ತದೆ.
ಸೂಕ್ಷ್ಮ ನೀರಾವರಿ: ಕೃಷಿ ಹೊಂಡ ಅಥವಾ ಭಾವಿ ಸೌಲಭ್ಯವಿದ್ದಲ್ಲಿ ಲಭ್ಯ ವಿರುವ ನೀರನ್ನು ಸದುಪಯೋಗ ಪಡಿಸಿಕೋಂಡು ಹನಿ ನೀರಾವರಿ ಅಥವಾ ತುಂತುರು ನೀರಾವರಿ ಮೂಲಕ ಮಾತ್ರ ಬಳಸಿ.
ಪೋಷಕಾಂಶಗಳ ನಿರ್ವಹಣೆ: ಸಾರಜನಕ (ನೈಟ್ರೋಜನ್) ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ಸಗಣಿ ಗೊಬ್ಬರ ಮತ್ತು ಸಂಯುಕ್ತ ಗೊಬ್ಬರ ಬಳಕೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್