
ಬೆಂಗಳೂರು, 25 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಪಾಲು ಆಗುತ್ತಿದ್ದು, ಇದರ ಹಿಂದೆ ಪ್ರಮುಖವಾಗಿ ಬಿಜೆಪಿ ನಾಯಕರ ಕೈವಾಡವಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಅಕ್ರಮ ಕಳ್ಳಸಂತೆಯು ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿಲ್ಲದೆ, ರಾಜ್ಯ ಹಾಗೂ ರಾಷ್ಟ್ರ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಬೇರೆ ರಾಜ್ಯಗಳಿಗಲ್ಲ, ಫ್ರಾನ್ಸ್, ಯುಎಇ ಮತ್ತು ಕತಾರ್ ದೇಶಗಳಿಗೂ ಹೋಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ .
ಅಕ್ಕಿ ಕಳ್ಳತನ ಮಾಡುವವರಿಗೆ ವಿರೋಧ ಪಕ್ಷದ ವತಿಯಿಂದ ರಾಜಕೀಯ ಪುರಸ್ಕಾರಗಳು ಸಿಗುತ್ತಿವೆ ಎಂದು ಖರ್ಗೆ ತೀವ್ರವಾಗಿ ಹರಿಹಾಯ್ದಿದ್ದಾರೆ. ತಮ್ಮ ಕ್ಷೇತ್ರ, ಯಾದಗಿರಿ ಹಾಗೂ ಬೀದರ್ ಭಾಗಗಳಲ್ಲಿ ಇಂತಹ ಕಾನೂನುಬಾಹಿರ ಕೃತ್ಯ ಎಸಗುವ ವ್ಯಕ್ತಿಗಳಿಗೆ ಬಿಜೆಪಿ ವತಿಯಿಂದ ಟಿಕೆಟ್ ನೀಡಿ ಪುರಸ್ಕರಿಸಲಾಗುತ್ತಿದೆ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ. ಇಂತಹ ಜಾಲಗಳನ್ನು ಮತ್ತು ಅಕ್ರಮಗಳನ್ನು ಬೇರುಸಹಿತ ತಡೆಯಲು ಕಠಿಣವಾದ ಹೊಸ ಕಾನೂನುಗಳನ್ನು ಜಾರಿಗೆ ತರಬೇಕೆಂದು ತಾವು ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪ ಹಾಗೂ ತಾವು ಮಾಡುತ್ತಿರುವ ಹೇಳಿಕೆಗಳ ಕುರಿತು ಮಾತನಾಡಿರುವ ಅವರು, ತಾವೆಂದೂ ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಅಕ್ಕಿ ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ತನಿಖೆ ನಡೆದು ಚಾರ್ಜ್ಶೀಟ್ ದಾಖಲಾಗಿದೆ ಎಂದಿರುವ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII