ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವಕ್ಕೆ ಭರದ ಸಿದ್ಧತೆ
ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವಕ್ಕೆ ಭರದ ಸಿದ್ಧತೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಗುರುಪೂರ್ಣಿಮಾ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.


ಕೋಲಾರ, ೨೪ ಜುಲೈ (ಹಿ.ಸ) :

ಆ್ಯಂಕರ್ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಗುರುಹುಣ್ಣಿಮೆಯ ಪ್ರಯುಕ್ತ ಜುಲೈ ೨೭ ರಿಂದ ಪ್ರಾರಂಭವಾಗಲಿರುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಬೆಟ್ಟದ ತಪ್ಪಲಿನಲ್ಲಿರುವ ಕೈವಾರ ಕ್ಷೇತ್ರವು ಆಷಾಡ ಮಾಸದ ಹುಣ್ಣಿಯ ದಿನಗಳಲ್ಲಿ ಸಿಂಗರಿಸಿಕೊಳ್ಳುತ್ತದೆ. ಗುರುಪೌರ್ಣಮಿಯ ಪ್ರಯುಕ್ತ ಇಲ್ಲಿ ವಿಶೇಷವಾಗಿ ಗುರುಪೂಜೆ ಹಾಗೂ ೭೨ ಗಂಟೆಗಳ ನಿರಂತರ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಗುರುಪೂಜಾ ಸಂಗೀತೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ವಿಶಾಲವಾದ ಪೆಂಡಾಲ್ಗಳನ್ನು ಹಾಕಲಾಗುತ್ತಿದೆ. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಕೈವಾರ ಕ್ರಾಸ್ನಲ್ಲಿ ಬೃಹತ್ ಸ್ವಾಗತ ಕಾಮಾನುಗಳನ್ನು ಹಾಕಲಾಗಿದೆ. ಕೈವಾರ ಕ್ರಾಸ್ನಿಂದ ದೀಪಾಲಂಕಾರವನ್ನು ಮಾಡಲಾಗುತ್ತಿದೆ.

ಜುಲೈ ೨೭ ಸೋಮವಾರ ಪ್ರಾತ:ಕಾಲ ೫.೩೦ ಗಂಟೆಗೆ ಘಂಟಾನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜಾಕೈಂಕರ್ಯಗಳು ಆರಂಭವಾಗುತ್ತದೆ. ಬೆಳಿಗ್ಗೆ ದೇವಾಲಯದಲ್ಲಿ ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕವನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಗುತ್ತದೆ. ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ನಂತರ ವಿವಿಧ ಕಲಾವಿದರಿಂದ ಸಂಗೀತದ ಸಮರ್ಪಣೆಯಾಗುತ್ತದೆ. ಸಂಜೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜುಲೈ ೨೭ ಸೋಮವಾರದಿಂದ ಪ್ರಾರಂಭವಾಗುವ ೭೨ ಗಂಟೆಗಳ ಗುರುಪೂಜಾ ಸಂಗೀತೋತ್ಸವವು ಜುಲೈ ೩೦ ಗುರುವಾರ ಬೆಳಿಗ್ಗೆ ೬ ಗಂಟೆಗೆ ಮುಕ್ತಾಯವಾಗುತ್ತದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕಲಾವಿದರೊಂದಿಗೆ ನಾಡಿನ ಪ್ರಸಿದ್ಧ ಸಂಗೀತಗಾರರು ಭಾಗವಹಿಸುತ್ತಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಜನಾ ಭಕ್ತರ ತಂಡಗಳು ಭಾಗವಹಿಸುತ್ತಾರೆ. ಈ ಮೂರು ದಿನಗಳ ಕಾಲ ಸಾಮೂಹಿಕ ಭಜನೆ, ನಾದಸ್ವರ, ಹರಿಕಥೆ, ಬರ್ರಕಥೆ, ಸಂಗೀತ ಕಛೇರಿ, ಭರತನಾಟ್ಯ, ಕಥಾಕೀರ್ತನೆ, ವೀಣಾವಾದನ, ಕೊಳಲುವಾದನ, ವೀರಗಾಸೆ, ಡೊಳ್ಳುಕುಣಿತ, ಪಂಡರಿ ಭಜನೆ, ಕೋಲಾಟ, ತೊಗಲುಬೊಂಬೆ ಇತ್ಯಾದಿ ನಾನಾ ಪ್ರಕಾರದ ಕಲೆಗಳು ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ಸಮರ್ಪಣೆಯಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande