
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ತಂತ್ರಜ್ಞಾನದ ರಾಜಧಾನಿಯಲ್ಲಿ ನಾವೀನ್ಯತೆಗೆ ಮತ್ತಷ್ಟು ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ ಇಡುತ್ತಿದೆ. ಮುಂಬರುವ ನವೆಂಬರ್ 17 ರಿಂದ 19 ರವರೆಗೆ ಅತ್ಯಂತ ವೈಭವೋಪೇತವಾಗಿ ನಡೆಯಲಿರುವ ಪ್ರತಿಷ್ಠಿತ 'ಬೆಂಗಳೂರು ಟೆಕ್ ಸಮಿಟ್' ಕುರಿತು ಮಾಹಿತಿ ನೀಡಿರುವ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೇವಲ ಕಾರ್ಪೊರೇಟ್ ವಲಯಕ್ಕೆ ಮಾತ್ರವಲ್ಲದೆ ಕೃಷಿ, ಆರೋಗ್ಯ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ತಳಮಟ್ಟದಿಂದ ಅಳವಡಿಸಲು ನೀಲಿ ನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ಈ ಬಾರಿಯ ಸಮಿಟ್ನ ಮುಖ್ಯ ಥೀಮ್ 'ಎಐ ಮತ್ತು ಬಿಯಾಂಡ್' ಆಗಿದ್ದು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಕೇವಲ ಸಾಫ್ಟ್ವೇರ್ ಹಾಗೂ ಎಂಟರ್ಪ್ರೈಸ್ ಪರಿಹಾರಗಳಿಗೆ ಸೀಮಿತಗೊಳಿಸದೆ, ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಅನುಕೂಲವಾಗುವಂತೆ ವಿವಿಧ ವಲಯಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಜಾಗತಿಕ ತಜ್ಞರ ಜತೆ ಚರ್ಚಿಸಿ ಅಂತಿಮ ರೂಪ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ತಂತ್ರಜ್ಞಾನದ ಹೊಸ ಅಲೆಗೆ ಅಗತ್ಯವಿರುವ ಪ್ರತಿಭೆಗಳನ್ನು ರೂಪಿಸುವ ಉದ್ದೇಶದಿಂದ, ಮುಖ್ಯಮಂತ್ರಿಗಳು ಘೋಷಿಸಿರುವ ಅತ್ಯಾಧುನಿಕ 'ಎಐ ವಿಶ್ವವಿದ್ಯಾಲಯ'ವನ್ನು ಖಾಸಗಿ ಸಹಭಾಗಿತ್ವದಲ್ಲಿ, ಆದಷ್ಟು ಶೀಘ್ರದಲ್ಲೇ, ಅಂದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಚಾಲನೆ ನೀಡಿ ಜಾಗತಿಕ ಮಟ್ಟದ ಕೊಲಾಬರೇಷನ್ಗಳಿಗೆ ಮುನ್ನುಡಿ ಬರೆಯಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII