ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ:ಪುಂಚ್–ರಾಜೌರಿಯಲ್ಲಿ ಭೂಕುಸಿತ, ಪ್ರವಾಹಕ್ಕೆ ಹಲವರು ಬಲಿ
ರಾಜೌರಿ, 19 ಜುಲೈ (ಹಿ.ಸ.): ಆ್ಯಂಕರ್: ಜಮ್ಮು-ಕಾಶ್ಮೀರದ ಪುಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಭಾನುವಾರ ಮುಂಜಾನೆ ಸುರಿದ ಭಾರೀ ಮಳೆಯಿಂದ ಭೂಕುಸಿತ ಹಾಗೂ ಹಠಾತ್ ಪ್ರವಾಹ ಸಂಭವಿಸಿ ಭಾರೀ ಅನಾಹುತ ಉಂಟಾಗಿದೆ. ಈ ದುರಂತದಲ್ಲಿ ಇದುವರೆಗೆ ಮೂವರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾಪತ್ತೆ
ರಾಜೌರಿಯಲ್ಲಿ ಪ್ರವಾಹ


ರಾಜೌರಿ, 19 ಜುಲೈ (ಹಿ.ಸ.):

ಆ್ಯಂಕರ್:

ಜಮ್ಮು-ಕಾಶ್ಮೀರದ ಪುಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಭಾನುವಾರ ಮುಂಜಾನೆ ಸುರಿದ ಭಾರೀ ಮಳೆಯಿಂದ ಭೂಕುಸಿತ ಹಾಗೂ ಹಠಾತ್ ಪ್ರವಾಹ ಸಂಭವಿಸಿ ಭಾರೀ ಅನಾಹುತ ಉಂಟಾಗಿದೆ. ಈ ದುರಂತದಲ್ಲಿ ಇದುವರೆಗೆ ಮೂವರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಹವಾಮಾನ ಇಲಾಖೆ ಮುಂದಿನ ದಿನಗಳಲ್ಲೂ ಈ ಪ್ರದೇಶಗಳಲ್ಲಿ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ. ಇದರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳನ್ನು ವೇಗಗೊಳಿಸಿದೆ.

ಸುರನ್ಕೋಟ್ ಪ್ರದೇಶದಲ್ಲಿ ಭಾರೀ ಹಾನಿ

ಅಧಿಕಾರಿಗಳ ಮಾಹಿತಿ ಪ್ರಕಾರ, ಸುರನ್ಕೋಟ್ ತಹಸೀಲ್ ಹೆಚ್ಚು ಹಾನಿಗೊಳಗಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಆಡಳಿತವು ಎಸ್‌ಡಿಆರ್‌ಎಫ್‌, ಪೊಲೀಸರು, ಸೇನೆ ಹಾಗೂ ಸ್ಥಳೀಯ ಸ್ವಯಂಸೇವಕರ ತಂಡಗಳನ್ನು ನಿಯೋಜಿಸಿದೆ.

ನೂನಾಬಂದಿ ಗ್ರಾಮದಲ್ಲಿ ಮನೆ ಕುಸಿದು 28 ವರ್ಷದ ನಾಜಿಯಾ ಕೌಸರ್ ಮೃತಪಟ್ಟಿದ್ದಾರೆ. ಅವರ ಪತಿ ಮೊಹಮ್ಮದ್ ಹಫೀಜ್ ಹಾಗೂ ಎರಡುರಿಂದ ಆರು ವರ್ಷದೊಳಗಿನ ಮೂವರು ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ಕುಟುಂಬದ ಆರು ಮಂದಿ ನಾಪತ್ತೆ

ಲೋವರ್ ಮುರ್ರಾಹ್ ಪ್ರದೇಶದಲ್ಲಿ ಮತ್ತೊಂದು ಮನೆ ಭೂಕುಸಿತಕ್ಕೆ ಸಿಲುಕಿದ್ದು, ಮನೆಯ ಮಾಲೀಕ ಮೊಹಮ್ಮದ್ ಲತೀಫ್ ಸೇರಿದಂತೆ ಕುಟುಂಬದ ಆರು ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ನಿರಂತರ ಶೋಧ ಕಾರ್ಯ ನಡೆಯುತ್ತಿದೆ.

ಇದೇ ವೇಳೆ ಮರ್ಹೋಟ್ ಪ್ರದೇಶದಲ್ಲಿ ಹೊಳೆಯಲ್ಲಿ ಕೊಚ್ಚಿಹೋಗಿ ಇರಂ ಎಂಬ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದಾಳೆ. ಧುಂಡಕ್ ಲಾಥೂಂಗ್ ಸೇತುವೆ ಸಮೀಪದ ಹೊಳೆಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಪ್ರವಾಹಕ್ಕೆ ವಾಹನಗಳು ಕೊಚ್ಚಿಹೋಗಿ ಮೂಲಸೌಕರ್ಯಕ್ಕೆ ಹಾನಿ

ಹಠಾತ್ ಪ್ರವಾಹದಿಂದ ಹಲವಾರು ವಾಹನಗಳು ಕೊಚ್ಚಿಹೋಗಿದ್ದು, ರಸ್ತೆ, ಸೇತುವೆಗಳು, ಸಾರ್ವಜನಿಕ ಕಟ್ಟಡಗಳು ಹಾಗೂ ನಗರಸಭೆಯ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ರಾಜೌರಿ ನಗರದ ಮೂಲಕ ಹರಿಯುವ ದರಹಾಲಿ ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ವಸತಿ ಮತ್ತು ವಾಣಿಜ್ಯ ಪ್ರದೇಶಗಳು ಜಲಾವೃತಗೊಂಡಿವೆ.

ಬೇಲಾ ಪ್ರದೇಶದಲ್ಲಿ ಇತ್ತೀಚೆಗೆ ನಿರ್ಮಿಸಲಾದ ಬಸ್ ನಿಲ್ದಾಣಕ್ಕೂ ಭಾರೀ ಹಾನಿಯಾಗಿದ್ದು, ನಿಲ್ಲಿಸಿದ್ದ ಹಲವು ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಅಪಾಯದ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಶಿವ ಖೋರಿ ಯಾತ್ರೆ ತಾತ್ಕಾಲಿಕ ಸ್ಥಗಿತ

ಹವಾಮಾನ ಇಲಾಖೆ ನೀಡಿರುವ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ನೆರೆಯ ರಿಯಾಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಶ್ರೀ ಶಿವ ಖೋರಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾನ್ಸೂ ಮೂಲ ಶಿಬಿರದಲ್ಲಿ ಹವಾಮಾನ ಹದಗೆಟ್ಟಿರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಉಪರಾಜ್ಯಪಾಲ ಮತ್ತು ಮುಖ್ಯಮಂತ್ರಿ ಪ್ರತಿಕ್ರಿಯೆ

ಜಮ್ಮು-ಕಾಶ್ಮೀರ ಉಪರಾಜ್ಯಪಾಲ ಮನೋಜ್ ಸಿನ್ಹಾ ಪರಿಸ್ಥಿತಿಯನ್ನು ಪರಿಶೀಲಿಸಿ, ಪೀಡಿತ ಕುಟುಂಬಗಳಿಗೆ ತಕ್ಷಣ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜೌರಿ ಮತ್ತು ಪುಂಚ್ ಜಿಲ್ಲೆಗಳ ಎಲ್ಲ ಇಲಾಖೆಗಳನ್ನು ಹೈ ಅಲರ್ಟ್‌ನಲ್ಲಿರಿಸಿ ತುರ್ತು ಪರಿಹಾರ ಹಾಗೂ ದುರಸ್ತಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ನಿರ್ದೇಶಿಸಿದ್ದಾರೆ.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬೆಳಗ್ಗೆಯಿಂದಲೇ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಎಲ್ಲ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ಸ್ವತಃ ಪರಿಶೀಲಿಸಲು ತಮ್ಮ ದೆಹಲಿ ಪ್ರವಾಸವನ್ನು ಮೊಟಕುಗೊಳಿಸಿ ಜಮ್ಮುವಿಗೆ ಮರಳುವುದಾಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande