ಜೋಜಿಲಾ ಸುರಂಗ ನಿರ್ಮಾಣದಲ್ಲಿ ಐತಿಹಾಸಿಕ ಸಾಧನೆ
ಗಾಂದರ್ಬಲ್, 09 ಜೂನ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕ ವ್ಯವಸ್ಥೆಯನ್ನು ವರ್ಷಪೂರ್ತಿ ಸುಗಮಗೊಳಿಸುವ ಮಹತ್ವಾಕಾಂಕ್ಷಿ ಜೋಜಿಲಾ ಸುರಂಗ ಯೋಜನೆಯ ನಿರ್ಮಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
ನಿತಿನ್ ಗಡ್ಕರಿ


ಗಾಂದರ್ಬಲ್, 09 ಜೂನ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕ ವ್ಯವಸ್ಥೆಯನ್ನು ವರ್ಷಪೂರ್ತಿ ಸುಗಮಗೊಳಿಸುವ ಮಹತ್ವಾಕಾಂಕ್ಷಿ ಜೋಜಿಲಾ ಸುರಂಗ ಯೋಜನೆಯ ನಿರ್ಮಾಣದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ ಸುರಂಗದ ಅಂತಿಮ ಬಂಡೆ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದರು.

13.15 ಕಿಲೋಮೀಟರ್ ಉದ್ದದ ಈ ಸುರಂಗ ಪೂರ್ಣಗೊಂಡ ಬಳಿಕ ಏಷ್ಯಾದ ಅತಿ ಉದ್ದದ ದ್ವಿಮುಖ ರಸ್ತೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಕಾಶ್ಮೀರ ಕಣಿವೆ ಮತ್ತು ಲಡಾಖ್ ನಡುವಿನ ಎಲ್ಲಾ ಹವಾಮಾನದ ಸಂಪರ್ಕವನ್ನು ಖಾತ್ರಿಪಡಿಸುವ ಈ ಯೋಜನೆಯು ಪ್ರದೇಶದ ಸಾರಿಗೆ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ಪ್ರಕಾರ, ಈ ಮಹತ್ವದ ಹಂತವನ್ನು ನಿಗದಿತ ವೇಳಾಪಟ್ಟಿಗಿಂತ ಆರು ತಿಂಗಳು ಮುಂಚಿತವಾಗಿ ಸಾಧಿಸಲಾಗಿದೆ. ಸಮುದ್ರಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಸುರಂಗದ ಉತ್ಖನನ ಕಾರ್ಯ ಈಗ ಅಂತಿಮ ಹಂತದಲ್ಲಿದ್ದು, ಎರಡೂ ತುದಿಗಳಿಂದ ನಡೆಯುತ್ತಿರುವ ತೋಡುವ ಕಾರ್ಯಗಳು ಒಂದಕ್ಕೊಂದು ಸೇರುವ ಹಂತ ತಲುಪಿವೆ.

ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಸಂಸ್ಥೆ ಈ ಬೃಹತ್ ಯೋಜನೆಯನ್ನು ನಿರ್ಮಿಸುತ್ತಿದೆ. ಸುರಂಗದ ಒಟ್ಟು ಉದ್ದ 13.15 ಕಿಲೋಮೀಟರ್ ಆಗಿದ್ದು, ಅದರಲ್ಲಿ 13 ಕಿಲೋಮೀಟರ್ಗಿಂತ ಹೆಚ್ಚು ಉತ್ಖನನ ಈಗಾಗಲೇ ಪೂರ್ಣಗೊಂಡಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಹಿಮಾಲಯ ಪ್ರದೇಶದ ಅತ್ಯಂತ ಸವಾಲಿನ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಜೋಜಿಲಾ ಸುರಂಗ ನಿರ್ಮಾಣದಲ್ಲಿ ಇಂದು ನಡೆದ ಅಂತಿಮ ಸ್ಫೋಟ ಕಾರ್ಯ ಐತಿಹಾಸಿಕ ಸಾಧನೆಯಾಗಿದೆ.

ಸೋನಮಾರ್ಗ್ನಿಂದ ಸುಮಾರು 24 ಕಿಲೋಮೀಟರ್ ಹಾಗೂ ಶ್ರೀನಗರದಿಂದ 103 ಕಿಲೋಮೀಟರ್ ದೂರದಲ್ಲಿರುವ ಈ ಸುರಂಗವು ಶ್ರೀನಗರ, ದ್ರಾಸ್, ಕಾರ್ಗಿಲ್ ಮತ್ತು ಲೇಹ್ ನಡುವಿನ ಸಂಚಾರವನ್ನು ವರ್ಷಪೂರ್ತಿ ಸಾಧ್ಯವಾಗುವಂತೆ ಮಾಡಲಿದೆ. ಇದರಿಂದ ನಾಗರಿಕ ಸಂಚಾರ, ಸರಕು ಸಾಗಣೆ, ಪ್ರವಾಸೋದ್ಯಮ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಚಲನಶೀಲತೆ ಹೆಚ್ಚಲಿದೆ.

ಶ್ರೀನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಚಿವ ನಿತಿನ್ ಗಡ್ಕರಿ ಅವರನ್ನು ಸ್ವಾಗತಿಸಿದರು. ಅವರ ಭೇಟಿ ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಬಲಪಡಿಸುವ ಹಾಗೂ ಅಭಿವೃದ್ಧಿಗೆ ಉತ್ತೇಜನ ನೀಡುವ ಹಲವು ಪ್ರಮುಖ ಹೆದ್ದಾರಿ ಮತ್ತು ಸುರಂಗ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ.

ಈ ನಡುವೆ, ಯೋಜನೆಯ ನಿರ್ಮಾಣ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಜಂಟಿ ಮುಖ್ಯ ಕಾರ್ಯಾಚರಣಾ ಅಧಿಕಾರಿ ಹರ್ಪಾಲ್ ಸಿಂಗ್ ಅವರು, ಸುರಂಗದ ಎರಡು ತುದಿಗಳು ಒಂದಾಗುವ ಮೊದಲು ಕೆಲವೇ ಮೀಟರ್ ಉತ್ಖನನ ಕಾರ್ಯ ಮಾತ್ರ ಬಾಕಿಯಿದೆ ಎಂದು ತಿಳಿಸಿದರು. ನಿರ್ಮಾಣವನ್ನು ವೇಗಗೊಳಿಸಲು ಕಾಶ್ಮೀರದ ಬಾಲ್ತಾಲ್ ಮತ್ತು ಲಡಾಖ್ನ ಮಿನಾಮಾರ್ಗ್ ಎರಡೂ ಕಡೆಯಿಂದ ಏಕಕಾಲದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಅವರು ಹೇಳಿದರು.

ಸುರಂಗದಲ್ಲಿ ನಿರ್ವಹಣೆ ಹಾಗೂ ತುರ್ತು ಪರಿಸ್ಥಿತಿಗಳಿಗಾಗಿ ಪ್ರತ್ಯೇಕ ಪಾದಚಾರಿ ಮಾರ್ಗವನ್ನೂ ನಿರ್ಮಿಸಲಾಗುತ್ತಿದೆ. ಯೋಜನೆ ಪೂರ್ಣಗೊಂಡ ನಂತರ ಪ್ರದೇಶದ ಸಂಪರ್ಕ ವ್ಯವಸ್ಥೆ, ಸಂಚಾರ ಸೌಲಭ್ಯ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ.

ಜೋಜಿಲಾ ಸುರಂಗವು ಕೇವಲ ಒಂದು ರಸ್ತೆ ಯೋಜನೆಯಲ್ಲ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯುವ ಮಹತ್ವದ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯಾಗಿದೆ. ವರ್ಷಗಳ ಕಾಲ ಹಿಮಪಾತದಿಂದ ಸಂಪರ್ಕ ಕಡಿತಗೊಳ್ಳುತ್ತಿದ್ದ ಪ್ರದೇಶಗಳಿಗೆ ಇದು ಶಾಶ್ವತ ಪರಿಹಾರ ಒದಗಿಸಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande