
ಬಳ್ಳಾರಿ, 22 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2024-25 ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿರುವ ಅರ್ಜಿಗಳ ಕುರಿತು ಆಕ್ಷೇಪಣೆ ಸಲ್ಲಿಸಲು ರೈತರಿಗೆ ಜುಲೈ 02 (15 ದಿನ) ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತರ ವಿಮಾ ನೋಂದಣಿ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ, ತಂತ್ರಾಂಶದ ಮೂಲಕ ಪರಿಶೀಲನೆ ನಡೆಸಲಾಗಿತ್ತು. ತಾಳೆಯಾಗದ ಪ್ರಸ್ತಾವನೆಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳ ಮರುಪರಿಶೀಲನೆಗೆ ಒಳಪಡಿಸಿ, ಅಂತಿಮವಾಗಿ ವಿಮಾ ಸಂಸ್ಥೆಯು ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕಿನ ಒಟ್ಟು 818 ಅರ್ಜಿಗಳನ್ನು ತಿರಸ್ಕರಿಸಿದೆ.
ತಾಲ್ಲೂಕುವಾರು ತಿರಸ್ಕೃತಗೊಂಡ ಅರ್ಜಿಗಳ ವಿವರ(2024-25 ನೇ ಸಾಲಿನ) :
ಸಿರುಗುಪ್ಪ: ಮುಂಗಾರು-608, ಹಿಂಗಾರು-29, ಬೇಸಿಗೆ-2, ಒಟ್ಟು ತಿರಸ್ಕೃತಗೊಂಡ ಪ್ರಸಾವನೆಗಳು-639.
ಕಂಪ್ಲಿ: ಮುಂಗಾರು-177, ಹಿಂಗಾರು-00, ಬೇಸಿಗೆ-02, ತಿರಸ್ಕೃತಗೊಂಡ ಪ್ರಸ್ತಾವನೆಗಳು-179.
ಒಟ್ಟು: ಮುಂಗಾರು-785, ಹಿಂಗಾರು-29, ಬೇಸಿಗೆ-04, ತಿರಸ್ಕೃತಗೊಂಡ ಪ್ರಸ್ತಾವನೆಗಳು-818.
ತಿರಸ್ಕೃತಗೊಂಡಿರುವ ರೈತರ ಅರ್ಜಿಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ರೈತರು ತಮ್ಮ ಅರ್ಜಿ ತಿರಸ್ಕೃತಗೊಂಡಿರುವುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ಆಕ್ಷೇಪಣೆಗಳಿದ್ದಲ್ಲಿ ಮರುಪರಿಶೀಲನೆಗಾಗಿ ಮನವಿ ಸಲ್ಲಿಸಬಹುದಾಗಿದೆ.
ಜುಲೈ 02 ರ ಒಳಗೆ (15 ದಿನಗಳ ಒಳಗಾಗಿ) ರೈತರು ತಮ್ಮ ಮನವಿಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ. ನಿಗದಿತ ಅವಧಿಯ ನಂತರ ಬರುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್