
ಬೆಳಗಾವಿ, 21 ಜೂನ್ (ಹಿ.ಸ.) :
ಆ್ಯಂಕರ್ : ಅಡ್ಡ ಮತದಾನ ಗಂಭೀರವಾದದ್ದೇ ನಿಜ. ಆದರೆ, ಇಂಥ ಯಾವುದೇ ಒಂದು ಘಟನೆಯಿಂದ ಪಕ್ಷದಲ್ಲಿ ನಾಯಕತ್ವ ಕೊರತೆ ಎನ್ನುವುದು ತಪ್ಪಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಬೆಳಗಾವಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರ ಅಡ್ಡ ಮತದಾನವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೋ ಒಂದರಿಂದ ನಾಯಕತ್ವ ಕೊರತೆ ಎನ್ನಲಾಗದು. ಎಲ್ಲಾ ಅಡೆತಡೆ, ಏಳುಬೀಳು ಎದುರಿಸಿ ರಾಜ್ಯದಲ್ಲಿ, ದೇಶದಲ್ಲಿ ಹಿಂದೆಯೂ ಬಿಜೆಪಿ ಬಲಿಷ್ಠವಾಗಿತ್ತು. ಈಗಲೂ ಇದೆ. ಮುಂದೆಯೂ ಮತ್ತಷ್ಟು ಗಟ್ಟಿಯಾಗಿರಲಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಅನ್ನೋದು ಅಪ್ರಸ್ತುತ:
ರಾಜ್ಯ ಬಿಜೆಪಿಗೆ ಮುಂದಿನ ದಿನಗಳಲ್ಲಿ ನಾನು ರಾಜ್ಯಾಧ್ಯಕ್ಷ ಅನ್ನೋದು ಅಪ್ರಸ್ತುತ. ಬೇರೆ ನಾಯಕರು ಇದ್ದಾರೆ ಎಂದ ಜೋಶಿ, ರಾಜ್ಯಾಧ್ಯಕ್ಷ ಬಗ್ಗೆ ಹೈಕಮಾಂಡ್ ಆಗಲಿ, ನಾನಾಗಲಿ ಯಾವತ್ತೂ ಹೇಳಿಲ್ಲವಲ್ಲ. ನಾನು ಅದರ ಆಕಾಂಕ್ಷಿಯೂ ಅಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
2028ಕ್ಕೆ ಬಿಜೆಪಿ ಆಡಳಿತ:
ರಾಜ್ಯದಲ್ಲಿ 2028ಕ್ಕೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದೆ ಇಲ್ಲೂ ಬಿಜೆಪಿ ಆಡಳಿತ ನಿಶ್ಚಿತ. ನಮ್ಮ ಹೈಕಮಾಂಡ್ ರಾಜ್ಯದಲ್ಲಿನ ಎಲ್ಲ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.