
ಬಳ್ಳಾರಿ, 19 ಜೂನ್ (ಹಿ.ಸ.) :
ಆ್ಯಂಕರ್ : ಕಾರ್ಮಿಕ ಇಲಾಖೆಯಡಿ ಬಳ್ಳಾರಿ ನಗರದಲ್ಲಿ 14 ವರ್ಷದೊಳಗಿನ ಬಾಲಕಾರ್ಮಿಕರ ಪುನರ್ವಸತಿಗಾಗಿ ‘ಬಾಲಕಾರ್ಮಿಕ ವಿಶೇಷ ತರಬೇತಿ ಕೇಂದ್ರ'ವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರೂ ಆದ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಈ ಕೇಂದ್ರದ ಮೂಲಕ ಮಕ್ಕಳಿಗೆ ಮೂಲಭೂತ ಹಾಗೂ ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ 14ನೇ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಕೇಂದ್ರವನ್ನು ನಡೆಸಲು ಅರ್ಹ ನೋಂದಾಯಿತ ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಅರ್ಹತೆಗಳು :
ಸಂಸ್ಥೆಯು ಸಹಕಾರ ಸಂಘ ಸಂಸ್ಥೆಗಳ ನೋಂದಾವಣೆ ಕಾಯ್ದೆ 1960 ರ ಪ್ರಕಾರ ನೋಂದಾವಣೆಯಾಗಿರಬೇಕು ಹಾಗೂ ಕನಿಷ್ಠ 3 ವರ್ಷಗಳು ಪೂರೈಸಿರಬೇಕು. ಪ್ರಸ್ತುತ 2025-26ನೇ ಸಾಲಿನವರೆಗೆ ನವೀಕರಣ ಹೊಂದಿರಬೇಕು.
ಮಕ್ಕಳ ಹಕ್ಕುಗಳು, ಬಾಲಕಾರ್ಮಿಕರ ಸಮಸ್ಯೆಗಳು ಮತ್ತು ಇತರೆ ಸಂಬಂಧಿತ ಚಟುವಟಿಕೆಗಳಲ್ಲಿ ಕನಿಷ್ಠ 5 ವರ್ಷಗಳ ಕೆಲಸ ಮಾಡಿದ ಅನುಭವ ಹೊಂದಿರಬೇಕು. (ಈ ಹಿಂದೆ ಬಾಲಕಾರ್ಮಿಕರ ವಿಶೇಷ ತರಬೇತಿ ಕೇಂದ್ರ ನಡೆಸಿದ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು).
ಸಂಸ್ಥೆಯು ಕನಿಷ್ಠ 50,000 ರೂ.ಗಳಿಗಿಂತ ಹೆಚ್ಚಿನ ಹಣಕಾಸಿನ ಸಾಮಥ್ರ್ಯ ಹೊಂದಿರಬೇಕು (ಇದಕ್ಕಾಗಿ ಬ್ಯಾಂಕ್ ಪಾಸ್ ಬುಕ್ ಪ್ರತಿ ಲಗತ್ತಿಸುವುದು ಕಡ್ಡಾಯ). ಇತ್ತೀಚಿನ 3 ವರ್ಷಗಳ ಆಡಿಟ್ ವರದಿ ಹಾಗೂ ಕಾರ್ಯಕ್ರಮಗಳ ವಾರ್ಷಿಕ ವರದಿಯನ್ನು ಸಲ್ಲಿಸಬೇಕಾಗುತ್ತದೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಿಂದ ಪಡೆದುಕೊಂಡು, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಜೂ.30 ರ ಒಳಗೆ ಸಲ್ಲಿಸಬೇಕಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಭವನ, ಕಾರ್ಮಿಕ ಅಧಿಕಾರಿಗಳ ಕಛೇರಿ, ಮೊಹಮ್ಮದೀಯ ಕಾಲೇಜು ಹಿಂಭಾಗ, ಕೌಲ್ ಬಜಾರ್, ಬಳ್ಳಾರಿ-583101.
ಅಪೂರ್ಣ ಮಾಹಿತಿ ಇರುವ ಹಾಗೂ ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್