ರಾಸಾಯನಿಕ ಎಂಜಿನಿಯರಿಂಗ್ ನಿಂದ ಸಮಾಜ ಸೇವೆಯವರೆಗೆ ಸುನೀಲ್ ನಾಡಕರ್ಣಿ ಪಯಣ
ಬೆಂಗಳೂರು, 01 ಜೂನ್ (ಹಿ.ಸ.) : ಆ್ಯಂಕರ್ : ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಸಾಯನಿಕ ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ತಾಂತ್ರಿಕ ನಾವೀನ್ಯತೆ, ಕಾರ್ಪೊರೇಟ್ ನಾಯಕತ್ವ ಮತ್ತು ಸಮಾಜಸೇವೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿರುವ ಧಾರವಾಡ ಮೂಲದ ಸುನೀಲ್ ನಾಡಕರ್ಣಿ ಇಂದು ಕೈಗಾರಿಕಾ ಹಾಗೂ ಸಾಮಾಜ
ಸುನಿಲ್ ನಾಡಕರ್ಣಿ


ಬೆಂಗಳೂರು, 01 ಜೂನ್ (ಹಿ.ಸ.) :

ಆ್ಯಂಕರ್ : ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಸಾಯನಿಕ ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ತಾಂತ್ರಿಕ ನಾವೀನ್ಯತೆ, ಕಾರ್ಪೊರೇಟ್ ನಾಯಕತ್ವ ಮತ್ತು ಸಮಾಜಸೇವೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿರುವ ಧಾರವಾಡ ಮೂಲದ ಸುನೀಲ್ ನಾಡಕರ್ಣಿ ಇಂದು ಕೈಗಾರಿಕಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ.

1962ರಲ್ಲಿ ಧಾರವಾಡದಲ್ಲಿ ಜನಿಸಿದ ಸುನೀಲ್ ನಾಡಕರ್ಣಿ ಅವರ ತಂದೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ಯಲ್ಲಿ ಅಧಿಕಾರಿಯಾಗಿದ್ದು, ಕುಟುಂಬವು ಮುಂಬೈ, ಉಡುಪಿ ಮತ್ತು ಪುತ್ತೂರಿನಲ್ಲಿ ವಾಸವಿದ್ದ ಬಳಿಕ ಧಾರವಾಡದಲ್ಲಿ ನೆಲೆಸಿತ್ತು. ಸರಸ್ವತಪುರದ ಮಾಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಬಾಸೆಲ್ ಮಿಷನ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಪೂರ್ಣಗೊಳಿಸಿದರು.

ವಿದ್ಯಾರ್ಥಿ ಜೀವನದಲ್ಲೇ ರಾಸಾಯನಿಕ ಎಂಜಿನಿಯರಿಂಗ್ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ಮಣಿಪಾಲ ತಾಂತ್ರಿಕ ಸಂಸ್ಥೆಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಪದವಿ ಪಡೆದರು. ಮಣಿಪಾಲದ ಶಿಕ್ಷಣ ಮತ್ತು ವಾತಾವರಣವು ತಮ್ಮ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ತಂದಿತು ಎಂದು ಅವರು ಹೇಳಿದ್ದಾರೆ.

ಪದವಿ ನಂತರ ಮುಂಬೈನ ದೀಪಕ್ ಫರ್ಟಿಲೈಸರ್ಸ್ ಮತ್ತು ಪೆಟ್ರೋಕೆಮಿಕಲ್ಸ್ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಹೊಸ ಕೈಗಾರಿಕಾ ಘಟಕಗಳ ಸ್ಥಾಪನೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಳಿಕ ಹರ್ಡಿಲ್ಲಿಯಾ, ಬಾಂಬೆ ಡೈಯಿಂಗ್, ಪರ್ಸ್ಟಾರ್ಪ್ ಕೆಮಿಕಲ್ಸ್, ಹ್ಯೂಬರ್ ಕೆಮಿಕಲ್ಸ್, ಪಿಡಿಲೈಟ್ ಹಾಗೂ ಜುಬಿಲೆಂಟ್ ಮೊದಲಾದ ದೇಶಿ-ವಿದೇಶಿ ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

1995ರಲ್ಲಿ ಅಮೆರಿಕ ಮೂಲದ ಹ್ಯೂಬರ್ ಕೆಮಿಕಲ್ಸ್ ಸಂಸ್ಥೆಗೆ ಸೇರಿದ ಅವರು, ಗುಜರಾತ್ನ ಜಗಾಡಿಯಾ ಘಟಕದಲ್ಲಿ ಉತ್ಪಾದನಾ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಗಮನ ಸೆಳೆದರು. ಅವರ ಸಂಶೋಧನೆ ಮತ್ತು ತಾಂತ್ರಿಕ ಸುಧಾರಣೆಯಿಂದ ಎರಡು ಅಮೆರಿಕನ್ ಪೇಟೆಂಟ್ಗಳು ಲಭಿಸಿವೆ. ಒಂದು ಕೋಲ್ಗೇಟ್ ಹಾಗೂ ಮತ್ತೊಂದು ಹಿಂದೂಸ್ತಾನ್ ಲೀವರ್ಗೆ ಸಂಬಂಧಿಸಿದ ಉತ್ಪನ್ನಗಳ ಅಭಿವೃದ್ಧಿಗೆ ದೊರೆತ ಪೇಟೆಂಟ್ಗಳಾಗಿವೆ.

ಸುನೀಲ್ ನಾಡಕರ್ಣಿ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ನೈತಿಕತೆ ಮತ್ತು ಪಾರದರ್ಶಕತೆಯನ್ನು ಅಳವಡಿಸಿಕೊಂಡಿದ್ದರು. ಯಾವುದೇ ರೀತಿಯ ದಾಖಲೆ ತಿರುಚುವಿಕೆ ಅಥವಾ ತಪ್ಪು ಮಾಹಿತಿಗೆ ಅವಕಾಶ ನೀಡದೆ, ನೇರ ಮತ್ತು ಪ್ರಾಮಾಣಿಕ ಕಾರ್ಯಶೈಲಿಯಿಂದ ಗುರುತಿಸಿಕೊಂಡಿದ್ದರು.

2009ರಲ್ಲಿ ಅವರು ನಿರ್ಮಾಣ ರಾಸಾಯನಿಕ ಉತ್ಪನ್ನಗಳ ಕ್ಷೇತ್ರದಲ್ಲಿ ಇನ್ನೋವೇಟಿವ್ ಸೊಲ್ಯೂಷನ್ಸ್ ಸಂಸ್ಥೆಯನ್ನು ಸಹ-ಸ್ಥಾಪಿಸಿದರು. ನಂತರ ಸಂಸ್ಥೆ ಮತ್ತೊಂದು ಪ್ರಮುಖ ಕಂಪನಿಗೆ ಮಾರಾಟವಾದರೂ, ಇಂದಿಗೂ ಅವರು ಅದರ ನಿರ್ದೇಶಕ ಮಂಡಳಿಯಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

55ನೇ ವಯಸ್ಸಿನಲ್ಲೇ ಪೂರ್ಣಕಾಲಿಕ ಉದ್ಯೋಗದಿಂದ ನಿವೃತ್ತಿಯಾಗುವ ತಮ್ಮ ಸಂಕಲ್ಪವನ್ನು ಸಾಕಾರಗೊಳಿಸಿದ ಅವರು, ನಂತರ ಸ್ವತಂತ್ರ ತಾಂತ್ರಿಕ ಸಲಹೆಗಾರರಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಔಷಧ ಮತ್ತು ರಾಸಾಯನಿಕ ಘಟಕಗಳ ವಿನ್ಯಾಸ, ಯಂತ್ರೋಪಕರಣಗಳ ಅಳವಡಿಕೆ ಹಾಗೂ ತಾಂತ್ರಿಕ ಸಲಹೆಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ.

ವೃತ್ತಿಜೀವನದ ಜೊತೆಗೆ ಸಮಾಜಸೇವೆಯಲ್ಲಿಯೂ ಸಕ್ರಿಯರಾಗಿರುವ ಸುನೀಲ್ ನಾಡಕರ್ಣಿ, 2007ರಲ್ಲಿ ರೋಟರಿ ಸಂಸ್ಥೆಯನ್ನು ಸೇರಿದರು. ಖಜಾಂಚಿ, ಗೌರವ ಕಾರ್ಯದರ್ಶಿ, ಮಂಡಳಿ ಅಧ್ಯಕ್ಷ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, 2026ರಲ್ಲಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪಾಲ್ ಹ್ಯಾರಿಸ್ ಫೆಲೋ ಗೌರವಕ್ಕೆ ಪಾತ್ರರಾಗಿದ್ದು, ಮಾನವೀಯ ಸೇವಾ ಯೋಜನೆಗಳಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಅವರ ಅತ್ಯಂತ ಗಮನಾರ್ಹ ಸಾಮಾಜಿಕ ಸಾಧನೆಯೆಂದರೆ ವೃದ್ಧರ ಆರೈಕೆಗಾಗಿ ರೂಪಿಸಲಾದ ಜೆರಿಯಾಟ್ರಿಕ್ ಕೇರ್ ಸರ್ಟಿಫಿಕೇಶನ್ ಕೋರ್ಸ್. ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ರೂಪುಗೊಂಡಿರುವ ಈ ಆರು ತಿಂಗಳ ತರಬೇತಿ ಕಾರ್ಯಕ್ರಮವು ವೃದ್ಧರ ಆರೈಕೆಗೆ ಅಗತ್ಯವಿರುವ ಪರಿಣತ ಸೇವಾದಾರರನ್ನು ಸಿದ್ಧಗೊಳಿಸುತ್ತಿದೆ. ಈ ಮೂಲಕ ಶಿಕ್ಷಣ ಮತ್ತು ಸಮಾಜಸೇವೆಯನ್ನು ಒಗ್ಗೂಡಿಸುವ ಕಾರ್ಯದಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದಾರೆ.

ರಾಸಾಯನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಸಾಧನೆ, ಉದ್ಯಮಶೀಲತೆ, ನೈತಿಕ ಮೌಲ್ಯಗಳು ಮತ್ತು ಸಮಾಜಮುಖಿ ಚಿಂತನೆಗಳನ್ನು ಸಮನ್ವಯಗೊಳಿಸಿರುವ ಸುನೀಲ್ ನಾಡಕರ್ಣಿ, ಇಂದಿನ ಯುವ ಎಂಜಿನಿಯರ್ಗಳು ಮತ್ತು ಉದ್ಯಮಿಗಳಿಗೆ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande