
ಬೆಂಗಳೂರು, 30 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಯಾಣಿಕರಿಗೆ ಸಂಬಂಧಿಸಿದಂತೆ ದಕ್ಷಿಣ ರೈಲ್ವೆ ಮತ್ತು ದಕ್ಷಿಣ ಮಧ್ಯ ರೈಲ್ವೆ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿವೆ.
ಮಾರ್ಗ ಬದಲಾವಣೆ:
ಶ್ರವಣಬೆಳಗೊಳದಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮೇ 5ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು–ಕೋಝಿಕ್ಕೋಡ್ ಎಕ್ಸ್ಪ್ರೆಸ್ ರೈಲು ಮಾರ್ಗ ಬದಲಾವಣೆಯೊಂದಿಗೆ ಸಂಚರಿಸಲಿದೆ. ಈ ರೈಲು ಯಶವಂತಪುರ, ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ ಹಾಗೂ ಹಾಸನ ಮಾರ್ಗವಾಗಿ ಸಂಚರಿಸಲಿದೆ.
ಇದರಿಂದಾಗಿ ಎಂದಿನಂತೆ ಈ ರೈಲು ನಿಲುಗಡೆಯಾಗುವ ಕುಣಿಗಲ್, ಬಿ.ಜಿ. ನಗರ, ಶ್ರವಣಬೆಳಗೊಳ ಹಾಗೂ ಚನ್ನರಾಯಪಟ್ಟಣ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ನಿಲುಗಡೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ರೈಲು ಸೇವೆ ವಿಸ್ತರಣೆ:
ಪ್ರಯಾಣಿಕರ ಹೆಚ್ಚಿದ ದಟ್ಟಣೆಯನ್ನು ಮನಗಂಡು, ದಕ್ಷಿಣ ಮಧ್ಯ ರೈಲ್ವೆಯು ಹೈದರಾಬಾದ್–ಬೆಳಗಾವಿ–ಹೈದರಾಬಾದ್ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಿದೆ.
ಈ ಮೊದಲು ಏಪ್ರಿಲ್ 30ರವರೆಗೆ ಮಾತ್ರ ಸಂಚರಿಸಬೇಕಿದ್ದ ರೈಲು ಸಂಖ್ಯೆ 07043 ಹೈದರಾಬಾದ್–ಬೆಳಗಾವಿ ವಿಶೇಷ ರೈಲು ಈಗ ಮೇ 7, 2026ರಂದು ಹೆಚ್ಚುವರಿ ಒಂದು ಟ್ರಿಪ್ ನಡೆಸಲಿದೆ.
ಅದೇ ರೀತಿ, ಮೇ 1ರಂದು ಕೊನೆಗೊಳ್ಳಬೇಕಿದ್ದ ರೈಲು ಸಂಖ್ಯೆ 07044 ಬೆಳಗಾವಿ–ಹೈದರಾಬಾದ್ ವಿಶೇಷ ರೈಲು ಈಗ ಮೇ 8, 2026ರಂದು ಹೆಚ್ಚುವರಿ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa