

ಕೊಪ್ಪಳ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆಸುತ್ತಿರುವ ಬಲ್ಡೋಟ ಹಾಗೂ ಇನ್ನಿತರ ಮಾಲಿನ್ಯಕಾರಿ ಕಾರ್ಖಾನೆಗಳನ್ನು ವಿರೋಧಿಸಿ 176 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಈ ಹೋರಾಟ ವೇದಿಕೆಯಲ್ಲಿ ವರನಟ ಡಾ. ರಾಜಕುಮಾರ್ ಅವರ 97 ನೇ ಜನ್ಮ ದಿನಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ಪೂಜಾರ ಅವರು, ಡಾ. ರಾಜಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ವರನಟ ಡಾ. ರಾಜ್ ಈ ನಾಡಿನ ವರಪ್ರಸಾದದಂತೆ ಜನ್ಮ ತಾಳಿದವರು, ಕನ್ನಡ ತಾಯಿಯ ಮಡಿಲಿನಲ್ಲಿ ನಲಿದಾಡಿದರು. ಕನ್ನಡಕ್ಕೆ ಕುತ್ತು ಬಂದಾಗ ಗೋಕಾಕ ಚಳುವಳಿಗೆ ಧುಮಿಕಿ ಕನ್ನಡ ಕಾಪಾಡಿದರು. ಇಂದು ಹಿಂದಿ ಪ್ರಭಾವ ಹೇರಲು ಸತತ ಪ್ರಯತ್ನ ನಡೆಯುತ್ತಿದೆ. ಅವರು ಕೇವಲ ನಟರಲ್ಲ. ಅವರ ಬದುಕು, ನಂಬಿದ ಆದರ್ಶಗಳು, ಬದ್ಧತೆ ನಮ್ಮೆಲ್ಲರಿಗೆ ಮಾದರಿಯಾಗಿದೆ. ಕನ್ನಡ ಕಟ್ಟುವಲ್ಲಿ ಇವರ ಕೊಡುಗೆ ಅಪಾರ. ಈಗೇನಾದರೂ ರಾಜಕುಮಾರ್ ಬದುಕಿದ್ದರೆ ನಮ್ಮ ಜೀವ, ಪರಿಸರ ಉಳಿಸಿಕೊಳ್ಳುವ ಹೋರಾಟಕ್ಕೆ ಧುಮುಕಿ ಬರುತ್ತಿದ್ದರು ಎಂದರು.
ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಮುಂದಿನ ದಿನಗಳಲ್ಲಿ ಡಾ. ಶಿವರಾಜಕುಮಾರ ಅವರನ್ನು ಈ ಹೋರಾಟಕ್ಕೆ ಆಹ್ವಾನಿಸಿ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡೋಣ, ಅದಕ್ಕಾಗಿ ಶಿವಣ್ಣರ ಆಪ್ತರ ಜೊತೆಗೆ ಮಾತನಾಡಿದ್ದು, ಕೊಪ್ಪಳಕ್ಕೆಕರೆತರಲು ಒಪ್ಪಿಸುವದಾಗಿ ಹೇಳಿದ್ದಾರೆ, ಇದರ ಜೊತೆಗೆ ಶೀಘ್ರ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗುವದು, 200 ನೇ ದಿನದ ಹೋರಾಟ ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ಮಾಡಲಾಗುತ್ತದೆ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಡಾ. ರಾಜಕುಮಾರ್ ಅವರನ್ನು ಗೋಕಾಕ ಚಳವಳಿಯಲ್ಲಿ ಕೊಪ್ಪಳಕ್ಕೆ ಕರೆತಂದಾಗ ಕೊಪ್ಪಳ ಜನ ಪುಳಕಿತರಾಗಿ ಚಳವಳಿಗೆ ದೊಡ್ಡ ಬೆಂಬಲ ನೀಡಿದರು. ಈಗಲೂ ಅಂತಹ ಖ್ಯಾತನಾಮರು ನಮ್ಮ ಪರಿಸರ ಹೋರಾಟಕ್ಕೆ ಬಂದರೆ ಬೇಗ ಹೋರಾಟಕ್ಕೆ ಗೆಲುವಾಗುತ್ತದೆ ಎಂದರು.
ವೇದಿಕೆಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿದರು. ಪ್ರಕಾಶಕ ಡಿ.ಎಂ.ಬಡಿಗೇರ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಶಂಭುಲಿಂಗಪ್ಪ ಹರಗೇರಿ, ಬಸವರಾಜ ಹೂಗಾರ, ಬಿ.ಜಿ. ಕರಿಗಾರ, ಶರಣು ಶೆಟ್ಟರ್, ಮಹಾಂತೇಶ ಕೊತಬಾಳ, ಶಿವಾನಂದಯ್ಯ ಬೀಳಗಿಮಠ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಪ್ಪ ಬಸಾಪುರ, ರಾಜಶೇಖರ ಏಳುಬಾವಿ, ಹನುಮಪ್ಪ ಪನ್ನಿ, ನಾಗರಾಜ ಕುಷ್ಟಗಿ, ಹನುಮಪ್ಪ ಚಿಂಚಲಿ, ಶೇಖರಯ್ಯ ಹೊಸಮನಿ, ಮಹಾದೇವಪ್ಪ ಮಾವಿನಮಡು, ಸಿ.ಕೆ. ಬಸವರಾಜ್ ಮಾದಿನೂರು, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ರೈತ ಸಂಘದ ಶೇಖಪ್ಪ ಹಟ್ಟಿ, ಗುಡದಪ್ಪ, ನಾಗಪ್ಪ, ಈಶ್ವರಪ್ಪ, ಪರಸಪ್ಪ, ಚಂದ್ರಗೌಡ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್