
ಬಳ್ಳಾರಿ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಎಲ್ಲಾ ವಾಹನ ಚಾಲಕರು ತಮ್ಮ ವಾಹನಗಳ ಮೂಲಕ ನಿಧಾನವಾಗಿ ಸಾಗಬೇಕು ಎಂದು ಬಳ್ಳಾರಿಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರರು ತಿಳಿಸಿದ್ದಾರೆ.
2026 ನೇ ಸಾಲಿನ ರಸ್ತೆ ಸಂಚಾರ ಸಮೀಕ್ಷೆಯು ಫೆ.26 ರ ಬೆಳಿಗ್ಗೆ 06 ರಿಂದ ಫೆ.28 ರ ಬೆಳಿಗ್ಗೆ 06 ಗಂಟೆಯವರೆಗೆ ಸತತವಾಗಿ 03 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ರಸ್ತೆಗಳ ಮೇಲೆ ಕ್ಯಾಮೆರಾ ಸಮೇತ ಸಮೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಸಮೀಕ್ಷಾ ಕೇಂದ್ರಗಳಿದ್ದಲ್ಲಿ ‘ವಾಹನ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ, ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿರುತ್ತದೆ.
ಈ ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ತೀವ್ರತೆ ಕಂಡುಹಿಡಿಯುವುದಕ್ಕೆ ರಸ್ತೆಗಳ ಅಗಲ ಅಳತೆ ನಿರ್ಧರಿಸಲು, ರಸ್ತೆಗಳ ಮೇಲ್ದರ್ಜೆಗೇರಿಸಲು ಹಾಗೂ ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ. ರಸ್ತೆ ಸಂಚಾರ ಸಮೀಕ್ಷೆಯನ್ನು ಯಶಸ್ವಿಯಾಗಿಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಸಹಕರಿಸುವಂತೆ ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್