
ಕೊಪ್ಪಳ, 19 ಫೆಬ್ರವರಿ (ಹಿ.ಸ.):
ಆ್ಯಂಕರ್ : ಬಲ್ಡೋಟ ಕಾರ್ಖಾನೆ ತೊಲಗಿಸಿ ಧರಣಿ 112 ದಿನ ಪೂರ್ಣಗೊಳಿಸಿದ ಹೋರಾಟಕ್ಕೆ ಬೆಂಬಲಿಸಿದ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ ಕೆ.ಎಸ್.ಸಿ.ಡಬ್ಲೂ.ಸಿ.ಯು ದ ರಾಜ್ಯ ಉಪಾಧ್ಯಕ್ಷ ಶಂಕರ್ ಕಟ್ಟಿಸಂಗಾವಿ ಮಾತನಾಡಿ ಇವರು ಇಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಬಯಸಿದ ಬಲ್ಡೋಟ ಕಾರ್ಖಾನೆ ಈ ಹಿಂದಿನ 2011ರಿಂದ ತಾನು ಮಾಡುತ್ತಾ ಬಂದ ಮಾಲಿನ್ಯದ ಕುರಿತು ಬಾಯಿ ಬಿಡುವುದಿಲ್ಲ. ಕೊಪ್ಪಳ ಜನ ಈಗಾಗಲೇ ವಿಷಾನಿಲ ಉಸಿರಾಡುತ್ತಿದ್ದಾರೆ.
ಇಲ್ಲಿ ಕಾಣುವ ಗಿಡಮರಗಳು ಹೊಗೆಯಿಂದ ಕಪ್ಪಾಗಿ ಹೋಗಿವೆ. ಇನ್ನು ದೂಳು ಮನುಷ್ಯರ ದೇಹದೊಳಗೆ ಎಷ್ಟು ಮೆತ್ತಿರಬಹುದು ಎಂದರು. ಕಾರ್ಖಾನೆ ಮಾಲಿನ್ಯ ಕಾರಣದಿಂದ ರೀಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಿದೆ. ಕಟ್ಟಡ, ಸಮುಚ್ಛಯ ನಿರ್ಮಾಣ ಕಾರ್ಯ ನಿಂತು ಹೋಗಿದೆ. ಈ ಕ್ಷೇತ್ರದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಕುಟುಂಬ ನಡೆಸಲು ಒದ್ದಾಡುತ್ತಿದ್ದಾರೆ.
ರಾಜ್ಯ ಕಾರ್ಯದರ್ಶಿ ಲಲಿತಾ ಎಸ್. ಮಾತನಾಡುತ್ತಾ ಸರ್ಕಾರ ಕಣ್ಣು ಮುಚ್ಚಿ ಕೂತು ಕಾರ್ಖಾನೆ ಆಟ ಆಡಲು ಬಿಟ್ಟಂತಿದೆ. ಜನರು ಸುಮ್ಮನಿದ್ದರೆ ಜೀವ ಹೋದರೂ ನೋಡದ ಸರ್ಕಾರಗಳು ಇರುವಾಗ ಹೋರಾಟಕ್ಕೆ ದಂಗೆ ಎದ್ದು ಬಂದರೆ ಮಾತ್ರ ಈ ಕಾರ್ಖಾನೆ ಓಡಿಸಬಹುದು ಎಂದರು.
ಧರಣಿ ನೇತೃತ್ವವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಕೊಪ್ಪಳ ಭಾಗ್ಯನಗರ ಬಂದ್ ಹೋರಾಟ ಯಶಸ್ವಿ ಆಗುವಂತೆ ಪ್ರತಿಯೊಬ್ಬ ನಾಗರಿಕರು ನೋಡಿಕೊಳ್ಳಿ ಎಂದು ವಿನಂತಿಸಿದರು.
ಧರಣಿಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕರಾದ ಮಹಾದೇವಪ್ಪ ಎಸ್. ಮಾವಿನಮಡು, ಜಂಟಿ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಶರಣು ಶೆಟ್ಟರ್, ಶರಣು ಪಾಟೀಲ್, ಸುಭಾನ್ ಸಾಬ್ ನೀರಲಗಿ, ವೆಂಕಟೇಶ ದೊಡ್ಡಮನಿ, ಹುಸೇನಸಾಬ್ ನದಾಫ್, ಬಿ.ಆರ್. ಹೊಂಬಾಳಿಮಠ, ನಾಗರಾಜ ಕುಷ್ಟಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವಪ್ಪ ಬನಪ್ಪನವರ, ನಟರಾಜ ಸವಡಿ, ಬಸವರಾಜಪ್ಪ ಶೆಟ್ಟರ್, ಬಸವರಾಜ ಅಂಗಡಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್