
ನವದೆಹಲಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೃತಕ ಬುದ್ಧಿಮತ್ತೆ ಮತ್ತು ಡೀಪ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಕರ್ನಾಟಕದ ವೇಗವಾದ ಬೆಳವಣಿಗೆಯನ್ನು ಜಾಗತಿಕ ಉದ್ಯಮ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟರು.
ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ–ತಂತ್ರಜ್ಞಾನ ಸಚಿವರಾಗಿರುವ ಅವರು ಜಾಗತಿಕ ಉದ್ಯಮ ಮುಖಂಡರು, ಸಂಶೋಧಕರು ಮತ್ತು ನವೋದ್ಯಮ ಸ್ಥಾಪಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದರು.
ಈ ಕುರಿತುಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಎಐ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಹಾರ್ವೆ ಎಐ ಮತ್ತು ಆಂಥ್ರೊಪಿಕ್ ಸೇರಿದಂತೆ ಜಾಗತಿಕ ಎಐ ಕಂಪನಿಗಳು ರಾಜ್ಯದಲ್ಲಿ ನೆಲೆವೂರಿರುವುದನ್ನು ಉಲ್ಲೇಖಿಸಿದರು. ಜೊತೆಗೆ ವಾಲ್ಟ್ ಡಿಸ್ನಿ ಕಂಪನಿ ತನ್ನ ಎಐ ಜಾಲವನ್ನು ಬೆಂಗಳೂರಿನಲ್ಲಿ ವಿಸ್ತರಿಸುತ್ತಿರುವುದನ್ನೂ ಹೇಳಿದರು. ಎಐ ಪ್ರತಿಭೆಗಳ ಲಭ್ಯತೆಯಲ್ಲಿ ಬೆಂಗಳೂರು ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ ಎಂದರು.
ರಾಜ್ಯ ಸರ್ಕಾರವು 1 ಕೋಟಿ ರೂ.ವರೆಗೆ ಅನುದಾನ ನೀಡಿ ನವೋದ್ಯಮಗಳಿಗೆ ಉತ್ತೇಜನ ನೀಡುತ್ತಿದೆ. ಎಐನ ಹೊಣೆಗಾರಿಕೆಯುತ ಬಳಕೆಯನ್ನು ಖಚಿತಪಡಿಸಲು ಕರ್ನಾಟಕವು ಜಾಗತಿಕ ತಜ್ಞರು ಮತ್ತು ಸಂಶೋಧಕರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಖರ್ಗೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa