
ಕೋಲಾರ ೧೮ ಫೆಬ್ರವರಿ (ಹಿ.ಸ) :
ಆ್ಯಂಕರ್ : ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಯ ದೃಷ್ಟಿಯಿಂದ ಸೋಲಾರ್ ಘಟಕ ನಿರ್ಮಿಸಲಾಗಿದ್ದು, ರಾಜಕೀಯ ಕಾರಣಕ್ಕೆ ಏನೇನೋ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬೇಕಾದರೆ ತನಿಖೆ ನಡೆಸಲಿ. ಏನಾದರೂ ತಪ್ಪಿದ್ದರೆ ನಾವೂ ಜವಾಬ್ದಾರರಾಗುತ್ತೇವೆ. ಏಕೆಂದರೆ ಸೌರ ಘಟಕ ಸ್ಥಾಪನೆ ನಿರ್ಧಾರ ಕೈಗೊಂಡಾಗ ಆಡಳಿತ ಮಂಡಳಿ ಸಭೆಯಲ್ಲಿ ನಾನೂ ಇದ್ದೆ ಎಂದು ಕೋಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಹೇಳಿದರು.
ಕೋಲಾರ ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಬುಧವಾರ ಕೋಲಾರ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ೨೦೨೫ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಆಡಳಿತ ಮಂಡಳಿ ಸಮಯದಲ್ಲಿ ಹಲವು ಸಮಸ್ಯೆ ಎದುರಾದವು. ರಾಜಕೀಯ ಉದ್ದೇಶದಿಂದ ಒಕ್ಕೂಟದ ಮೇಲೆ ಕೆಲ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ನಾನು ಈ ವೇದಿಕೆಯಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು. ಆದರೆ ಚುನಾವಣೆಯ ಕಾರಣ ರಾಜಕಾರಣ ಬಂದಿದೆ. ಜಾತಿಯೂ ಬೆರೆತಿದೆ. ಬಹಳ ಬೇಸರವಾಗುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ಕೋಲಾರ ತಾಲ್ಲೂಕಿನಲ್ಲಿ ಮೂರು ಕ್ಷೇತ್ರ ಮಾಡಿ ನನ್ನ ಬಲ ಕುಗ್ಗಿಸಲು ಪ್ರಯತ್ನ ನಡೆಯಿತು. ಆದರೆ ನಾನು ಬಗ್ಗಲಿಲ್ಲ. ಯಾವುದೇ ಸಮಸ್ಯೆ, ಸವಾಲು ಎದುರಿಸಲು ನಾನು ಸಿದ್ಧ. ಆದರೆ,ನಾನು ಈಗ ಯಾವುದೇ ಕ್ಷೇತ್ರ ನೋಡದೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು.
ನಾವು ಹಾಲು ಒಕ್ಕೂಟದಿಂದ ಹಲವಾರು ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ನಮಲ್ಲಿ ಹಾಲಿನ ಗುಣಮಟ್ಟದ ಮೇಲೆ ಇನ್ಸೆಂಟೀವ್ ಕೊಡಲಾಗುತ್ತಿದೆ, ವಿಮೆ ಕೊಡಿಸಲಾಗುತ್ತಿದೆ. ರೈತರಿಗೆ ಸೌಲಭ್ಯ ಕೊಡಬೇಕು, ಗುಣಮಟ್ಟ ಹೆಚ್ಚಿಸಬೇಕು. ಜೊತೆಗೆ ನೌಕರರಿಗೂ ಸೌಲಭ್ಯ ಕೊಡಬೇಕು. ಮುಂದೆ ಕೂಡ ಯಾವುದೇ ಸಮಸ್ಯೆ ಇದ್ದರೆ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಲ್ಲಾ ಡೇರಿಗಳಲ್ಲಿ ಕಾಮನ್ ಸಾಫ್ಟ್ವೇರ್ ಅಳವಡಿಸಿಕೊಳ್ಳದಿದ್ದರೆ ಒಕ್ಕೂಟದ ನೀಡುವ ಹಣ ತಡೆಹಿಡಿಯಲಾಗುತ್ತದೆ. ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಶೇ ೧೦೦ರಷ್ಟು ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.
ನಾವು ಒಕ್ಕೂಟದಲ್ಲಿ ಐದು ವರ್ಷ ಕೆಲಸ ಮಾಡಲು ಅವಕಾಶ ಸಿಗಲು ಡೇರಿ ಕಾರ್ಯದರ್ಶಿಗಳು ಪ್ರಧಾನ ಪಾತ್ರ ವಹಿಸಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೋಲಾರ ಒಕ್ಕೂಟದಿಂದ ಆರೇಳು ಲಕ್ಷ, ಚಿಕ್ಕಬಳ್ಳಾಪುರ ಒಕ್ಕೂಟದಿಂದ ಐದಾರು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಲು ಆಡಳಿತ ಮಂಡಳಿಯ ದಿಟ್ಟ ನಿರ್ಧಾರಗಳು ಕಾರಣ. ಈಗ ಎರಡೂ ಬೇರೆ ಬೇರೆ ಆಗಿವೆ. ಒಕ್ಕೂಟ ವಿಭಜನೆ ಆದ ಮೇಲೆ ಹಲವು ಸವಾಲು ಎದುರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂವಿಕೆ ಡೇರಿ, ಸೋಲಾರ್ ಘಟಕ ಸಿದ್ಧಗೊಂಡಿವೆ. ಹಾಲು ಉತ್ಪಾದಕರ ಹೆಣ್ಣು ಮಕ್ಕಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ. ಶ್ರೀನಿವಾಸಪುರದಲ್ಲಿ ಪಶು ಆಹಾರ ಘಟಕ ನಿರ್ಮಾಣಕ್ಕೆ ಡಿಪಿಆರ್ ಆಗಿದೆ ಎಂದರು.
ಹಿAದೆ ಕೋವಿಡ್ ಬಂದಾಗ ಭಾರಿ ಸವಾಲು ಎದುರಾಗಿತ್ತು. ಹಾಲು ಖರೀದಿ ನಿಲ್ಲಿಸುತ್ತಾರೆ ಎಂಬ ಆತಂಕದಲ್ಲಿ ಹೈನುಗಾರರು ಇದ್ದರು. ಆದರೆ, ನಾವು ರೈತರಿಗೆ ಬೆನ್ನೆಲುಬಾಗಿ ನಿಂತೆವು. ಸಭೆ ನಡೆಸಿ ರೈತರ ಪರ ತೀರ್ಮಾನ ಕೈಗೊಂಡೆವು. ಹಲವು ಕಾರ್ಯಕ್ರಮ ರೂಪಿಸಿದೆವು ಎಂದು ನೆನಪಿಸಿಕೊಂಡರು.
ನೌಕರರಿಗೂ ಸೌಲಭ್ಯ ಕಲ್ಪಿಸಲು, ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದರು.
ಕೋಮುಲ್ ನಿರ್ದೇಶ ಎನ್.ಹನುಮೇಶ್ ಮಾತನಾಡಿ, ಕಷ್ಟ ಸುಖಗಳಿಗೆ ಸ್ಪಂದಿಸಲು ಸಂಘ ಬೇಕು. ಜೊತೆಗೆ ಬೇಡಿಕೆ ಈಡೇರಿಕೆ ಅಗತ್ಯವಿರುತ್ತದೆ. ಸಂಘದಿAದ ಗ್ರಾಮಸ್ಥರಿಗೂ ಅನುಕೂಲ. ಇದೊಂದು ಸಮಾಜ ಸೇವೆ ಇದ್ದಂತೆ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಸಂಘದ ಕಾರ್ಯದರ್ಶಿಗಳು ಆಧಾರಸ್ತಂಭ ಇದ್ದಂತೆ. ಅವರು ಚೆನ್ನಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ ಮಾತನಾಡಿ, ರಾಜಕಾರಣದಲ್ಲಿ ಯಾರೇ ಉನ್ನತ ಸ್ಥಾನಕ್ಕೆ ಏರಿದ್ದರೂ ಅದಕ್ಕೆ ಕಾರಣ ಸಹಕಾರ ಕ್ಷೇತ್ರ. ಡಿಸಿಸಿ ಬ್ಯಾಂಕ್ ಈಗ ಕೆಟ್ಟ ಪರಿಸ್ಥಿತಿಯಲ್ಲಿದೆ. ಹತ್ತು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹೇಗಿತ್ತು? ಈಗ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ರಾಜಕಾರಣವೇ ಕಾರಣ . ಸಹಕಾರ ಸಂಘದಲ್ಲಿ ರಾಜಕಾರಣ ಬೆರೆಯಬಾರದು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಗೆ ಚುನಾವಣೆ ನಡೆದು ಹಲವು ತಿಂಗಳು ಕಳೆದಿದ್ದರೂ ಅಧ್ಯಕ್ಷರ ಆಯ್ಕೆ ನಡೆದ ಇಲ್ಲ. ಸಾಲ ವಸೂಲಾತಿ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು. ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಮುನಿಯಪ್ಪ (ರಾಮಣ್ಣ) ಅಧ್ಯಕ್ಷತೆ ವಹಿಸಿದ್ದರು
ಈ ಸಂದರ್ಭದಲ್ಲಿ ನೌಕರರು ಕೆಲ ಬೇಡಿಕೆ ಇಡಲಾಯಿತು. ಭವಿಷ್ಯ ನಿಧಿ ಬೇಕು, ತರಬೇತಿ ನೀಡಬೇಕು, ಕಾಮನ್ ಸಾಫ್ಟ್ ವೇರ್ ಅಳವಡಿಸಲು ತರಬೇತಿ ನೀಡಬೇಕು ಎಂದು ಮನವಿ ಮಾಡಿದರು ಈ ಬಗ್ಗೆ ಗಮನಹರಿಸಲಾಗುವುದು ಎಂದು ಕೋಮುಲ್ ನಿರ್ದೇಶಕರು ಭರವಸೆ ನೀಡಿದರು.
೨೦೨೪-೨೫ನೇ ಸಾಲಿನ ವಾರ್ಷಿಕ ವರದಿ ಮಂಡಿಸಲಾಯಿತು ಗೌರವಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಶಿವರುದ್ರಯ್ಯ, ಪದಾಧಿಕಾರಿಗಳು ಸದಸ್ಯರು ಇದ್ದರು.
ಚಿತ್ರ : ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವಾರ್ಷಿಕ ಸಾಮಾನ್ಯ ಸಭೆ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್