

ಕುರುಗೋಡು ಉತ್ಸವ , 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕುರುಗೋಡು ಉತ್ಸವದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಾಕಲಾಗಿದ್ದ ಆರೋಗ್ಯ ಮಾಹಿತಿ ವಸ್ತು ಪ್ರದರ್ಶನದಲ್ಲಿ ಆರೋಗ್ಯ ತಪಾಸಣೆ ಶಿಬಿರವೂ ಕೈಗೊಳ್ಳುವ ಮೂಲಕ ಜನಾಕಾರ್ಷಣೀಯವಾಗಿತ್ತು.
ವಸ್ತು ಪ್ರದರ್ಶನದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಜೊತೆಗೆ ಆರೋಗ್ಯ ತಪಾಸಣೆ ಶಿಬಿರ ಸಹ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರು ಆರೋಗ್ಯ ತಪಾಸಣೆ ಶಿಬಿರಕ್ಕೆ ಬಂದು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಸಾರ್ವಜನಿಕರಿಗೆ ಅಂಗಾಂಗ ದಾನದ ಮಹತ್ವದ ಕುರಿತು ಮಾಹಿತಿ ನೀಡಲಾಗಿದ್ದು, ಸುಮಾರು 100 ಜನ ಸಾರ್ವಜನಿಕರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಆರೋಗ್ಯ ವಸ್ತು ಪ್ರದರ್ಶನದ ಮಳಿಗೆಯಲ್ಲಿ ಸಾರ್ವಜನಿಕರು ತುಂಬಾ ಆಸಕ್ತಿಯಿಂದ ವೀಕ್ಷಿಸುತ್ತಿರುವುದು ಕಂಡುಬಂತು.
ಅದರಲ್ಲಿ ಪ್ರಮುಖವಾಗಿ ಸಾಂಕ್ರಾಮಿಕ ಕಾಯಿಲೆ ಮತ್ತು ಅಸಾಂಕ್ರಾಮಿಕ ಕಾಯಿಲೆಗಳಾದ ಕ್ಷಯರೋಗ, ಕುಷ್ಠರೋಗ, ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮ, 12 ಮಾರಕ ಕಾಯಿಲೆಗಳ ವಿರುದ್ದ ಲಸಿಕೆಗಳ ಬಗ್ಗೆ ಹಾಗೂ ಹೆಚ್.ಪಿ.ವಿ ಲಸಿಕೆ ಮತ್ತು ರೇಬೀಸ್ ನಿಯಂತ್ರಣ ಕುರಿತು, ಭ್ರೂಣ ಹತ್ಯೆ, ಅನಿಮೀಯ ಮುಕ್ತ ಭಾರತ, ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ, ಡೆಂಗ್ಯೂ, ಚಿಕಿನ್ ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಎ.ಬಿ.ಪಿ.ಎಮ್.ಜೆ.ಎ.ವೈ., ಸಿ.ಎಮ್.ಎ.ಆರ್.ಕೆ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದು ಪೋನ್ನಲ್ಲೇ ಎ.ಬಿ.ಪಿ.ಎಮ್.ಜೆ.ಎ.ವೈ., ಸಿ.ಎಮ್.ಎ.ಆರ್.ಕೆ ಕಾರ್ಡ್ ಪಡೆಯುವುದರ ಬಗ್ಗೆ ಆರ್.ಕೆ.ಎಸ್.ಕೆ ಆಪ್ತಸಮಾಲೋಚಕರಿಂದ ಮಾಹಿತಿ ಪಡೆದುಕೊಂಡರು.
ವಸ್ತು ಪ್ರದರ್ಶನದ ಮಳಿಗೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಭೇಟಿ ನೀಡಿದ್ದರು.
ಈ ವೇಳೆ ಕುರುಗೋಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜೆ.ಮಂಜುನಾಥ, ವೈದ್ಯಾಧಿಕಾರಿಗಳಾದ ಡಾ.ಲಕ್ಷ್ಮಣ್ ನಾಯ್ಕ್, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ರಫಿಕ್ ಸೇರಿದಂತೆ ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರು ಮತ್ತು ಆಶಾಕಾರ್ಯಕರ್ತೆಯರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್