
ವಿಜಯಪುರ, 18 ಫೆಬ್ರವರಿ (ಹಿ.ಸ.)
ಆ್ಯಂಕರ್: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಜೊತೆ ಇನ್ಮುಂದೆ ಕಾಣಿಸಿಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ವಿಜಯಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಾರ್ಪೋರೇಟರ್ಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಬಿಜೆಪಿಯಿಂದ ಆಯ್ಕೆಯಾಗಿರುವ ಕೆಲವು ಕಾರ್ಪೋರೇಟರ್ಗಳು ಉಚ್ಛಾಟಿತ ಶಾಸಕ ಯತ್ನಾಳರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ದೃಷ್ಠಿಯಿಂದ ಹಾಗೆ ಗುರುತಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ, ಉಚ್ಛಾಟಿತ ಶಾಸಕ ಯತ್ನಾಳ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುರಿತು ಟೀಕಿಸುತ್ತಿರುವಾಗ ಪಕ್ಕದಲ್ಲಿ ನಿಂತು ನಗುತ್ತಿರುವುದು ಕಂಡು ಬಂದಿದೆ. ಇದು ನಾಚಿಕೆಗೇಡು. ಇನ್ಮುಂದೆ ಆ ರೀತಿ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳುವುದಾಗಿ ಬುಧವಾರ ಸ್ಪಷ್ಟ ಸಂದೇಶ ನೀಡಿದರು.
ನಗರ ಮತಕ್ಷೇತ್ರದ ಶಾಸಕರಾಗಿರುವ ಕಾರಣಕ್ಕೆ ಪಾಲಿಕೆಯ ಅಭಿವೃದ್ಧಿ ಕಾರ್ಯಗಳ ವಿಷಯವಾಗಿ ಯತ್ನಾಳ ಅವರೊಂದಿಗೆ ಸದಸ್ಯರು ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಇಷ್ಟು ದಿನ ಸುಮ್ಮನಿರಲಾಗಿತ್ತು. ಆದರೆ, ಪಕ್ಷದ ರಾಜ್ಯಾಧ್ಯಕ್ಷ ಬಗ್ಗೆಯೇ ಯತ್ನಾಳ ಟೀಕೆ-ಟಿಪ್ಪಣಿ ಮಾಡುತ್ತಿರುವಾಗಲೂ ಬಿಜೆಪಿ ಚಿಹ್ನೆ ಮೇಲೆ ಆಯ್ಕೆಯಾಗಿರುವ ಪಾಲಿಕೆ ಸದಸ್ಯರು ನಗುತ್ತಿರುವುದು ಅಸಹ್ಯಕರ. ಹಾಗೆ ನಗುವ ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿರುವುದು ನೆನಪಿರಲಿ. ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯಿ ವಿಧಾನ ಪರಿಷತ್ ಸದಸ್ಯರು ಮತ ಹಾಕಿದ್ದಾರೆಂಬುದು ಗಮನದಲ್ಲಿಬೇಕು ಎಂದರು.
ಯತ್ನಾಳ ತಪ್ಪು ಮಾಡಿರುವ ಕಾರಣ ಪಕ್ಷದಿಂದ ಹೊರ ಹೋಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಬಗ್ಗೆ ಪದೇ ಪದೇ ಹೇಳಿಕೆ ನೀಡುವುದು ಸರಿಯಲ್ಲ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿಎಂ ಆಗುವ ಹಂತಕ್ಕೆ ಬಂದಿದ್ದಾರೆ. ಆದರೆ, ಮುಂದೆ ನಾನೇ ಸಿಎಂ ಆಗುತ್ತೇನೆ ಎಂದು ಯತ್ನಾಳ ಹೇಳುವುದು ಹಾಸ್ಯಾಸ್ಪದ. ಅಲ್ಲದೇ, ವಿಜಯೇಂದ್ರ ವರ್ಚಸ್ಸು ಕಡಿಮೆ ಮಾಡಬೇಕು ಎಂಬ ಆಲೋಚನೆ ಇದ್ದರೆ ಅದರಿಂದ ಹೊರಗೆ ಬನ್ನಿ. ಇಂತಹ ವರ್ತನೆಯಿಂದ ನೀವು ಸಿಎಂ ಆಗಲು ಸಾಧ್ಯವಿಲ್ಲ. ವಿಜಯೇಂದ್ರ ವಿರುದ್ಧ ಸುಳ್ಳುಗಳ ಮೇಲೆ ಸುಳ್ಳುಗಳು ಹೇಳುವುದು ಸೂಕ್ತವಲ್ಲ ಎಂದು ಉಚ್ಛಾಟಿತ ಶಾಸಕ ಯತ್ನಾಳರನ್ನುದ್ದೇಶಿಸಿ ನುಡಿದರು.
ಮುಖಂಡರಾದ ಸುರೇಶ ಬಿರಾದಾರ, ಚಿದಾನಂದ ಚಲವಾದಿ, ವಿಜಯ ಜೋಶಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande