




ಕುರುಗೋಡು, 16 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕುರುಗೋಡು ಉತ್ಸವ ಅಂಗವಾಗಿ ಎರಡನೇ ದಿನವಾದ ಸೋಮವಾರ (ಫೆ.16 ರಂದು) ಪಟ್ಟಣದ ಕಂಪ್ಲಿ ರಸ್ತೆಯ ಶ್ರೀ ಖಾದರ್ಲಿಂಗ ದರ್ಗಾ ಹತ್ತಿರದ ಶ್ರೀ ದೊಡ್ಡ ಬಸವೇಶ್ವರ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳು ಜನರನ್ನು ಆಕರ್ಷಿಸಿದವು.
ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಚಾಲನೆ ನೀಡಿದರು. ಹಲವು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಫಲಪುಷ್ಪದಲ್ಲಿ ಅರಳಿದ ನಂದಿ ವಿಗ್ರಹ, ದೊಡ್ಡಬಸವೇಶ್ವರ ಗೋಪುರ :
ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ಅರಳಿದ ನಂದಿ ವಿಗ್ರಹ, ಐತಿಹಾಸಿಕ ದೊಡ್ಡಬಸವೇಶ್ವರ ಗೋಪುರ, ಕುರುಗೋಡು ಉತ್ಸವ-2026 ಕ್ಕೆ ಆಹ್ವಾನ ಸೇರಿದಂತೆ ಇತರೆ ಪುಷ್ಪ ಕಲಾಕೃತಿಗಳು ಜನರನ್ನು ಕೈಬೀಸಿ ಕರೆಯುತ್ತಿತ್ತು. ಕಲ್ಲಂಗಡಿ ಹಣ್ಣಿನ ಹೊರಭಾಗ ಸೇರಿದಂತೆ ತರಕಾರಿ ಕೆತ್ತನೆಗಳಲ್ಲಿ ವಿವಿಧ ಮಹನೀಯರ ಆಕೃತಿಗಳು ಕಲಾವಿದರ ಕೈಗಳಿಂದ ಅರಳಿದ್ದವು.
ಗಮನ ಸೆಳೆದ ಪುಸ್ತಕ ಪ್ರದರ್ಶನ :
ಕುರುಗೋಡು ಉತ್ಸವದಲ್ಲಿ ಪುಸ್ತಕ ಪ್ರದರ್ಶನ ಮಳಿಗೆಯು ಆಕರ್ಷಣೀಯವಾಗಿತ್ತು. ಸಾರ್ವಜನಿಕರು ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದು ಕಂಡು ಬ0ತು.
ಅದೇರೀತಿಯಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ಇಲಾಖೆಯ ಸೌಲಭ್ಯಗಳ ಮಾಹಿತಿ ಸಾರುವ ಮಳಿಗೆಯಲ್ಲಿ ವಿವಿಧ ತಳಿಗಳ ಮೀನುಮರಿಗಳು ನೋಡುಗರ ಆಕರ್ಷಣೀಯವಾಗಿದ್ದವು. ರಂಗೋಲಿಯಿ0ದ ಹಲಗೆಯ ಮೇಲೆ ಚಿತ್ತಾರ ಮೂಡಿದ ವಿವಿಧ ಮಹನೀಯರ ಭಾವಚಿತ್ರಗಳು ಕಂಡು ಬ0ದವು.
ಕೃಷಿ ಪರಿಕರಗಳ ಪ್ರದರ್ಶನ :
ಕುರುಗೋಡು ತಾಲ್ಲೂಕು ವಿವಿಧ ಹಳ್ಳಿಗಳಿಂದ ಕೂಡಿದ್ದು, ಕೃಷಿಯೇ ಜೀವಾಳವಾಗಿರುವುದು ಕಾಣಬಹುದು. ಉತ್ಸವದ ವಿವಿಧ ಮಳಿಗೆಗಳಲ್ಲಿ ಕೃಷಿ ಇಲಾಖೆಯ ಸೌಲಭ್ಯ, ಸಾವಯವ ಕೃಷಿ ಪದ್ಧತಿ ಸೇರಿದಂತೆ ವಿವಿಧ ಆಧುನಿಕ ಕೃಷಿ ಪರಿಕರಗಳ ಪ್ರದರ್ಶನವು ಒಳಗೊಂಡಿತ್ತು. ರೈತರು ಭೇಟಿ ನೀಡಿ ಕಣ್ಣು ಹುಬ್ಬಿಸಿ ನೋಡುವುದರ ಮೂಲಕ ಅವುಗಳ ಮಾಹಿತಿ ಪಡೆದುಕೊಂಡರು.
ಕುರುಗೋಡು ಜಾಯ್ ರೈಡ್ ಬೈ ಸ್ಕೆöÊ ಗೆ ಚಾಲನೆ :
ಕುರುಗೋಡು ಉತ್ಸವದಲ್ಲಿ ಪ್ರಮುಖ ಆಕರ್ಷಣೀಯವಾದ ‘ಕುರುಗೋಡು ಜಾಯ್ ರೈಡ್ ಬೈ ಸ್ಕೆöÊ’ ಹೆಲಿಕಾಪ್ಟರ್ ಮೂಲಕ ಆಗಸದಿಂದ ಕುರುಗೋಡು ಪರಿಸರ ಕಣ್ತುಂಬಿಕೊಳ್ಳಲು ಅವಕಾಶ ಮಾಡಲಾಗಿತ್ತು.
ಶಾಸಕ ಜೆ.ಎನ್.ಗಣೇಶ್ ಅವರು ಚಾಲನೆ ನೀಡಿದರು. ‘ನಮ್ಮ ಕುರುಗೋಡಿನ ದೇವಸ್ಥಾನ, ಬೆಟ್ಟಗುಡ್ಡಗಳು ಮತ್ತು ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳಲು ಸುವರ್ಣಾವಕಾಶವಾಗಿದ್ದು, ತಪ್ಪದೇ ಎಲ್ಲರೂ ಬೈ ಸ್ಕೆ ನ್ನು ಸದುಪಯೋಗಪಡೆದುಕೊಳ್ಳಬೇಕು’ ಎಂದು ಹೇಳಿದರು.
ಕೇವಲ ಶ್ರೀಮಂತರು ಮಾತ್ರವಲ್ಲ; ಮಧ್ಯಮ ವರ್ಗದವರು ಭಾಗವಹಿಸಿ ಹೆಲಿಕಾಪ್ಟರ್ ನಲ್ಲಿ ಸಂಚರಿಸಬೇಕು ಎಂಬ ಸದುದ್ದೇಶದಿಂದ ಉತ್ಸವದಲ್ಲಿ ಆಯೋಜನೆ ಮಾಡಲಾಗಿದೆ. ರೂ.3500 ಕೈಗೆಟಕುವ ದರದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಕುರುಗೋಡು ತಹಶೀಲ್ದಾರ ನರಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್