
ಬೆಂಗಳೂರು, 08 ಜನವರಿ (ಹಿ.ಸ.) :
ಆ್ಯಂಕರ್ : ಭಾರತದ ಹೆಸರಾಂತ ಪರಿಸರ ತಜ್ಞ, ಪರಿಸರ ವಿಜ್ಞಾನ ಕೇಂದ್ರದ ಸಂಸ್ಥಾಪಕರು ಹಾಗೂ ಪಶ್ಚಿಮಘಟ್ಟ ಪರಿಸರ ಅಧ್ಯಯನದ ತಜ್ಞರ ಸಮಿತಿ (ಗಾಡ್ಗೀಳ್ ಆಯೋಗ)ದ ಅಧ್ಯಕ್ಷರಾಗಿದ್ದ ಪ್ರೊ. ಮಾಧವ ಗಾಡ್ಗೀಳ್ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ ಎಂದು ಅರಣ್ಯ, ಪರಿಸರ ಮತ್ತು ಜೀವವೈವಿಧ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಪರಿಸರ ಸಂರಕ್ಷಣೆ ಹಾಗೂ ಜೀವವೈವಿಧ್ಯತೆಯ ವಿಶ್ವದ ಅಪರೂಪದ ತಾಣಗಳಲ್ಲೊಂದಾದ ಪಶ್ಚಿಮಘಟ್ಟಗಳ ಉಳಿವು–ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ ಗಾಡ್ಗೀಳ್ ಅವರು 83ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಶಿಷ್ಯವರ್ಗಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
ಹಲವು ನದಿಗಳ ಮೂಲಸ್ಥಾನವಾಗಿರುವ, ಆಮ್ಲಜನಕದ ಕಣಜವೆನಿಸಿರುವ ಹಾಗೂ ಮುಂಗಾರು ಮಾರುತಗಳನ್ನು ತಡೆದು ದೇಶವ್ಯಾಪಿ ಮಳೆಯಾಗಲು ಸಹಕಾರಿಯಾಗುವ ಪಶ್ಚಿಮಘಟ್ಟಗಳ ಗಿರಿಪ್ರದೇಶಗಳು ಗಣಿಗಾರಿಕೆ ಮತ್ತು ಮಾಲಿನ್ಯಕಾರಿ ಕೈಗಾರಿಕೆಗಳಿಂದ ಕ್ರಮೇಣ ನಾಶವಾಗುತ್ತಿರುವ ಬಗ್ಗೆ ಗಾಡ್ಗೀಳ್ ಅವರು ಸದಾ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದರು ಎಂದು ಖಂಡ್ರೆ ಸ್ಮರಿಸಿದರು.
ಗಾಡ್ಗೀಳ್ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಗೆ ಭಾರತಕ್ಕೆ ಮಾರ್ಗದರ್ಶಿ ಸೂತ್ರಗಳಾಗಿ ಉಳಿಯುತ್ತವೆ. ಅವರ ಚಿಂತನೆಗಳು ಹಾಗೂ ಕಾರ್ಯಗಳು ಮುಂದಿನ ತಲೆಮಾರಿಗೆ ಪರಿಸರ ಜಾಗೃತಿಯ ದಾರಿದೀಪವಾಗಿರಲಿವೆ ಎಂದು ಸಚಿವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa