
ಕೋಲಾರ, ಜನವರಿ ೦6 (ಹಿ.ಸ) :
ಆ್ಯಂಕರ್ : ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವುದನ್ನು ಸವಾಲಾಗಿ ಸ್ವೀಕರಿಸಿರುವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್, ಶಾಲೆಗೆ ಗೈರಾಗುವ ಮಕ್ಕಳ ಮನೆಗಳಿಗೆ ಇತರೆ ಅಧಿಕಾರಿಗಳೊಂದಿಗೆ ಕಳೆದ ರಾತ್ರಿ ದಿಢೀರ್ ಭೇಟಿ ನೀಡಿ, ಕಲಿಕೆಗೆ ಪ್ರೋತ್ಸಾಹ ನೀಡುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ದಾಖಲಾಗಿದ್ದು, ಶಾಲೆಗೆ ಗೈರಾಗುವ, ನಿಧಾನ ಕಲಿಕೆ, ಕಲಿಕೆಯಲ್ಲಿ ಹಿಂದುಳಿದಿರುವಿಕೆಯ ಇಲ್ಲಿನ ರಹಮತ್ ನಗರ ವ್ಯಾಪ್ತಿಯ ಹಲವು ಮಕ್ಕಳ ಮನೆಗಳಿಗೆ ಭೇಟಿ ನೀಡಿದ ಅವರು, ಮಕ್ಕಳೊಂದಿಗೆ ಕುಳಿತು ಅವರ ಕಲಿಕೆ ಮಟ್ಟ ಪರಿಶೀಲನೆ ನಡೆಸಿದರು. ಶಾಲೆಯಿಂದ ಮನೆಗೆ ಹೋದ ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೆಯೇ ಎಂಬುದನ್ನು ಶಿಕ್ಷಕರು ಪರಿಶೀಲಿಸಲು ಮನೆ ಭೇಟಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎಂದ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳನ್ನು ಇಲಾಖೆ ನಡೆಸಲಿದೆ ಎಂದರು.
ಶಾಲೆಗೆ ಗೈರಾಗುವ ಮಕ್ಕಳ ಪೋಷಕರೊಂದಿಗೆ ಮಾತನಾಡಿದ ಡಿಡಿಪಿಐ ಅವರು, ನಿಮ್ಮ ಸಹಕಾರವಿಲ್ಲದೇ ಶೈಕ್ಷಣಿಕ ಪ್ರಗತಿ ಅಸಾಧ್ಯವಾಗಿದೆ, ಶಿಕ್ಷಕರ ಪ್ರಯತ್ನಕ್ಕೆ ನೀವು ಕೈಜೋಡಿಸಬೇಕು, ಶಾಲೆಯಿಂದ ಮನೆಗೆ ಬಂದ ಮಕ್ಕಳು ಮನೆಯಲ್ಲಿ ಕುಳಿತು ಓದಲು ನೀವು ಪ್ರೇರೇಪಿಸಬೇಕು. ಎಸ್ಸೆಸ್ಸೆಲ್ಸಿ ಜೀವನದ ಅತಿ ಪ್ರಮುಖ ಘಟ್ಟವಾಗಿದ್ದು, ಇಲ್ಲಿ ಮಕ್ಕಳು ಶಾಲೆಯಿಂದ ದೂರವಾದರೆ ಅವರ ಬದುಕು ದಾರಿ ತಪ್ಪುತ್ತದೆ ಎಂದರು.
ಅವರು ತಪ್ಪು ಹಾದಿ ತುಳಿಯುವ ಸಾಧ್ಯತೆಗಳು ಹೇರಳವಾಗಿರುತ್ತವೆ ಎಂದು ಪೋಷಕರನ್ನು ಎಚ್ಚರಿಸಿದ ಅವರು, ಓದುವ ಸಂದರ್ಭದಲ್ಲಿ ಮಕ್ಕಳನ್ನು ಸಂಪಾದನೆ,ದುಡಿಮೆಗೆ ಕಳುಹಿಸುವುದು ಸರಿಯಲ್ಲ, ಇದು ಕಾನೂನು ರೀತಿಯಲ್ಲೂ ಅಪರಾಧ ಎಂದು ಎಚ್ಚರಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಕೇವಲ ೭೨ ದಿನಗಳಿವೆ, ಇಂತಹ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಗೈರಾದರೆ ಅವರ ಕಲಿಕೆಯ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂಬುದನ್ನು ಅರಿತು ಅವರಿಗೆ ಮಾರ್ಗದರ್ಶನ ನೀಡಿ ಎಂದರು. ಮಕ್ಕಳನ್ನು ಶಾಲೆಗೆ ದಾಖಲಿಸಿದರೆ ತಮ್ಮ ಕೆಲಸ ಮುಗಿಯಿತು ಎಂಬ ಮನೋಭಾವ ಬಿಡಿ ಕನಿಷ್ಟ ತಿಂಗಳಿಗೊಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರೊಂದಿಗೆ ಮಾತನಾಡಿ, ನಿಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಕುರಿತು ಅರಿತುಕೊಳ್ಳಿ ಎಂದು ಕೋರಿದರು.
ಕೆಲವು ಮಕ್ಕಳು ಶಾಲೆಗೆಂದು ಮನೆಯಿಂದ ಹೊರಟು ನಂತರ ಗೈರಾಗುತ್ತಾರೆ, ಇದು ಗಂಭೀರವಾದ ವಿಷಯ, ಆ ಮಕ್ಕಳು ಎಲ್ಲಿಗೆ ಹೋಗುತ್ತಾರೆ ಎಂಬುದರ ಕುರಿತು ಪೋಷಕರಿಗೆ ಅರಿವು ಇರಬೇಕು, ಅವರು ತಪ್ಪು ಹಾದಿ ತುಳಿಯುತ್ತಿದ್ದಾರೆಯೇ, ದುಶ್ಚಟಗಳಿಗೆ ಬಲಿಯಾಗಿದ್ದಾರೆಯೇ ಎಂಬುದರ ಕುರಿತೂ ಸಹಾ ಗಮನಹರಿಸಬೇಕು ಎಂದರು.
ಪ್ರತಿ ಮನೆಯಲ್ಲೂ ಮಕ್ಕಳೊಂದಿಗೆ ನೆಲದಲ್ಲೇ ಕುಳಿತು ಅವರೊಂದಿಗೆ ಮಾತನಾಡಿ, ನೀವು ಕಲಿಕೆಯಿಂದ ದೂರವಾಗಿ ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ, ಶಾಲೆಯಲ್ಲಿ ಬಿಸಿಯೂಟ, ಮೊಟ್ಟೆ, ಹಾಲು, ಉಚಿತ ಪುಸ್ತಕ ಎಲ್ಲಾ ಸೌಲಭ್ಯಗಳು ಇವೆ ಅವುಗಳ ಸದುಪಯೋಗ ಪಡೆಯಿರಿ ಎಂದರು.
ಯಾವುದೇ ಮಗು ಶಾಲೆಗೆ ಗೈರಾದರೆ ಶಾಲೆಯ ಮೊದಲ ಅವಧಿ ಮುಗಿಯುತ್ತಿದ್ದಂತೆ ಅವರ ಪೋಷಕರಿಗೆ ತರಗತಿ ಶಿಕ್ಷಕರು ದೂರವಾಣಿ ಕರೆ ಮಾಡಿ ಕಾರಣ ತಿಳಿದುಕೊಳ್ಳಬೇಕು, ಮಗುವನ್ನು ಶಾಲೆಗೆ ಕಳುಹಿಸಲು ಒತ್ತಡ ಹಾಕಬೇಕು. ಜೂನಿಯರ್ ಕಾಲೇಜುಗಳ ಕಳಪೆ ಫಲಿತಾಂಶವೇ ಜಿಲ್ಲೆಯ ಗುಣಮಟ್ಟದ ಫಲಿತಾಂಶಕ್ಕೆ ಪೆಟ್ಟು ನೀಡುತ್ತಿದೆ, ನೀವು ಉತ್ತಮ ಫಲಿತಾಂಶ ತರಲು ನಿರಂತರ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ಶಾಲೆಗೆ ಗೈರಾಗುವ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಪೋಷಕರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದು, ಈ ಕಾರ್ಯ ಇಡೀ ಜಿಲ್ಲಾದ್ಯಂತ ವಿಸ್ತರಣೆಯಾಗಲಿದೆ ಎಂದ ಅವರು, ಇದು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಪ್ರಯತ್ನ ಮಾತ್ರವಲ್ಲ, ಶಾಲೆಯಿಂದ ದೂರವುಳಿಯುವುದನ್ನು ತಪ್ಪಿಸುವ ಸದುದ್ದೇಶವೂ ಆಗಿದೆ ಎಂದರು.
ಮನೆ ಭೇಟಿ ಸಂದರ್ಭದಲ್ಲಿ ಡಿಡಿಪಿಐ ಅವರೊಂದಿಗೆ ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿ ರಾಜೇಶ್ವರಿ, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಉಪಪ್ರಾಂಶುಪಾಲೆ ರಾಧಮ್ಮ, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲಾ, ಕಚೇರಿಯ ತಾಂತ್ರಜ್ಞ ಶರಣಪ್ಪಜಮಾದಾರ್,ಸಿಆರ್ಪಿ ಮುಜಾಹಿದ್ ಪಾಷಾ, ಸ್ಥಳೀಯ ಮುಖಂಡರು, ಪೋಷಕರು,ವಿದ್ಯಾರ್ಥಿಗಳು ಹಾಜರಿದ್ದರು.
ಚಿತ್ರ ; ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಶಾಲೆಗೆ ಗೈರಾಗುವ, ನಿಧಾನ ಕಲಿಕೆ, ಕಲಿಕೆಯಲ್ಲಿ ಹಿಂದುಳಿದಿರುವಿಕೆಯ ಕೋಲಾರ ರಹಮತ್ ನಗರ ವ್ಯಾಪ್ತಿಯ ಹಲವು ಮಕ್ಕಳ ಮನೆಗಳಿಗೆ ಭೇಟಿ ನೀಡಿದ ಉಪ ನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಕ್ಕಳೊಂದಿಗೆ ಕುಳಿತು ಅವರ ಕಲಿಕೆ ಮಟ್ಟ ಪರಿಶೀಲನೆ ನಡೆಸಿ, ಪೋಷಕರಿಗೂ ಮಾರ್ಗದರ್ಶನ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್