
ಕೋಲಾರ, ೦೫ ಜನವರಿ (ಹಿ.ಸ) :
ಆ್ಯಂಕರ್ : ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವು ನಮ್ಮನ್ನು ಆವರಿಸಿಕೊಂಡಿದೆ. ಆದರೆ ನಾವು ತಂತ್ರಜ್ಞಾನಕ್ಕೆ ಗುಲಾಮರಾಗದೆ, ಅದನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು ಜಾಗೃತ ಗ್ರಾಹಕರಾಗಿ ವ್ಯವಹರಿಸಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, 'ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ವರ್ಷದ ಘೋಷವಾಕ್ಯವಾದ ಡಿಜಿಟಲ್ ನ್ಯಾಯದ ಮೂಲಕ ಸಮರ್ಥ ಮತ್ತು ತ್ವರಿತ ವಿಲೇವಾರಿ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ವ್ಯವಹಾರದಲ್ಲೂ ತಂತ್ರಜ್ಞಾನ ನುಸುಳಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಷ್ಟೇ ಮುಂದುವರಿದರೂ ಅದು ಮಾನವ ಬುದ್ಧಿಮತ್ತೆಯನ್ನು ಮೀರಿಸಲು ಸಾಧ್ಯವಿಲ್ಲ. ತಂತ್ರಜ್ಞಾನದ ಅತಿಯಾದ ಬಳಕೆಯಿಂದ ನಾವು ನಿಸರ್ಗ ಮತ್ತು ಮಾನವೀಯ ಸಂಬಂಧಗಳಿ0ದ ದೂರವಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ತಮಗೆ ಈ ಹಿಂದೆ ಆದ ಸೈಬರ್ ವಂಚನೆಯ ಅನುಭವವನ್ನು ಹಂಚಿಕೊ0ಡ ಅವರು, ಜಾರ್ಖಂಡ್ನ 'ಜಾಮ್ತಾರಾ' ಅಂತಹ ಪ್ರದೇಶಗಳಿಂದ ನಡೆಯುವ ವ್ಯವಸ್ಥಿತ ಡಿಜಿಟಲ್ ವಂಚನೆಗಳ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದರು. ಬ್ಯಾಂಕ್ ಖಾತೆಗಳ ನಿರ್ವಹಣೆ ಮತ್ತು ಓಟಿಪಿ ಹಂಚಿಕೊಳ್ಳುವಾಗ ಹೆಚ್ಚಿನ ನಿಗಾ ವಹಿಸುವಂತೆ ಅವರು ಕಿವಿಮಾತು ಹೇಳಿದರು.
ಪ್ರತಿಯೊಬ್ಬರು ಯಾವುದಾದರೊಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತಾರೆ. ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾದರೆ ಅಥವಾ ಸೇವೆಯಲ್ಲಿ ಲೋಪವಾದರೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಗುಣಮಟ್ಟದ ಸೇವೆ ಪಡೆಯುವುದು ಗ್ರಾಹಕರ ಮೂಲಭೂತ ಹಕ್ಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನಿಸುವ ಮೂಲಕ ಜ್ಞಾನಾರ್ಜನೆ ಮಾಡಬೇಕು. ಇಂದಿನ ಪೋಷಕರು ಮಕ್ಕಳಿಗೆ ಬೆಲೆಬಾಳುವ ಗ್ಯಾಜೆಟ್ಗಳನ್ನು ನೀಡುವ ಬದಲು ಅವರೊಂದಿಗೆ 'ಗುಣಮಟ್ಟದ ಸಮಯ' ಕಳೆಯಬೇಕು ಎಂದು ಅವರು ಸಲಹೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಲತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಹಕರು ಮಾರುಕಟ್ಟೆಯಲ್ಲಿ ತಮಗಾಗುವ ವಂಚನೆಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಉತ್ಪನ್ನಗಳನ್ನು ಪಡೆಯಲು ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗೃತಿ ಹೊಂದಿರಬೇಕು ಎಂದರು.
ಪ್ರತಿ ವರ್ಷ ಡಿಸೆಂಬರ್ ೨೪ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. ೧೯೮೬ರಲ್ಲಿ ಇದೇ ದಿನ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರ ಸವಿನೆನಪಿಗಾಗಿ ಈ ಆಚರಣೆ ನಡೆಯುತ್ತಿದೆ. ೨೦೨೫ನೇ ಸಾಲಿನ ರಾಷ್ಟ್ರೀಯ ಗ್ರಾಹಕ ದಿನಾಚರಣೆಯನ್ನು ಡಿಜಿಟಲ್ ನ್ಯಾಯದ ಮೂಲಕ ತ್ವರಿತ ಹಾಗೂ ಪರಿಣಾಮಕಾರಿ ವಿಲೇವಾರಿ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅಸುರಕ್ಷಿತ ಉತ್ಪನ್ನಗಳಿಂದ ಗ್ರಾಹಕರನ್ನು ರಕ್ಷಿಸುವುದು ಈ ದಿನದ ಮೂಲ ಉದ್ದೇಶವಾಗಿದೆ ಎಂದರು.
ಗ್ರಾಹಕ ಸಂರಕ್ಷಣಾ ಕಾಯ್ದೆ ೨೦೧೯ರ ಅಡಿಯಲ್ಲಿ ಗ್ರಾಹಕರಿಗೆ ಒಟ್ಟು ಆರು ಹಕ್ಕುಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು ಮತ್ತು ಪರಿಹಾರ ಪಡೆಯುವ ಹಕ್ಕುಗಳು ಸೇರಿವೆ. ಗ್ರಾಹಕರು ತಮಗಾದ ಅನ್ಯಾಯದ ವಿರುದ್ಧ ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರೀಯ ಗ್ರಾಹಕ ಆಯೋಗಗಳ ಮೂಲಕ ಸೂಕ್ತ ಪರಿಹಾರವನ್ನು ಕಡಿಮೆ ಅವಧಿಯಲ್ಲಿ ಪಡೆಯಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆ ಮತ್ತು ಡಿಜಿಟಲ್ ನ್ಯಾಯದ ಕುರಿತು ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ವೈ.ಎಸ್. ತಮ್ಮಣ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿರಯ ಸಿವಿಲ್ ನ್ಯಾಯಾಧೀಶರಾದ ಆರ್. ನಟೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಕಾನೂನು ಮಾಪನ ಶಾಸ್ತ್ರದ ಎಂ.ಪಿ. ಪ್ರಭುದೇವ್, ಗ್ರಾಹಕ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎಸ್. ರಾಜು ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ನಡೆದ ರಾಷ್ಟಿçÃಯ ಗ್ರಾಹಕರ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್