
ಶಿವಮೊಗ್ಗ, 05 ಜನವರಿ (ಹಿ.ಸ.) :
ಆ್ಯಂಕರ್ : ಹವಾಮಾನ ಸ್ಥಿತಿಸ್ಥಾಪಕ ಕೃಷಿಗೆ ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗಳು ಮತ್ತು ಸಕಾಲಿಕ ಸಲಹೆಗಳನ್ನು ಒಳಗೊಂಡ ಸಂಯೋಜಿತ ಯೋಜನೆಗಳ ಅಥವಾ ಪ್ಯಾಕೇಜ್ಗಳ ಅಗತ್ಯವಿದೆ ಎಂದು ಬಾಂಗ್ಲಾದೇಶದ ಸಿಐಆರ್ಡಿಎಪಿ ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ ತಿಳಿಸಿದರು.
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ನ್ಯಾಚುರಲ್ ರಿಸೋರ್ಸಸ್ ಇನ್ಸಿ÷್ಟಟ್ಯೂಟ್ ವಿಶ್ವವಿದ್ಯಾಲಯ, ಗ್ರೀನ್ವಿಚ್, ಯುಕೆ ಸಹಯೋಗ ಮತ್ತು ಐಎಸ್ಪಿಎಫ್-ಬ್ರಿಟಿಷ್ ಕೌನ್ಸಿಲ್, ನವದೆಹಲಿಯ ಐಸಿಎಸ್ಎಸ್ಆರ್ ಬೆಂಬಲದೊಂದಿಗೆ ‘ಹವಾಮಾನ ಸ್ಥಿತಿಸ್ಥಾಪಕತ್ವದ ಕೃಷಿ ಸಂಶೋಧನೆ ಮತ್ತು ಸಹಯೋಗವನ್ನು ಮುಂದುವರೆಸುವಲ್ಲಿ ಆರಂಭಿಕ ವೃತ್ತಿಜೀವನದ ಸಂಶೋಧಕರನ್ನು ಸಬಲೀಕರಣಗೊಳಿಸುವುದು’ ವಿಷಯ ಕುರಿತು ಇಂದಿನಿಂದ ಜ.9 ರವರೆಗೆ ಮಲೆನಾಡು ಶೈರ್ ಎಕೊ ರೆಸಾರ್ಟ್ನಲ್ಲಿ ಏರ್ಪಡಿಸಲಾಗಿರುವ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಳೆ ವಿಫಲವಾದಾಗ, ಪ್ರವಾಹಗಳು ಬಂದಾಗ ಅಥವಾ ಕೀಟಗಳು ಉಲ್ಬಣಗೊಂಡಾಗ ಏನು ಮಾಡಬೇಕು ಎಂಬಂತಹ ಸ್ಪಷ್ಟ ಯೋಜನೆಗಳನ್ನು ಈ ಪ್ಯಾಕೇಜ್ಗಳು ಒಳಗೊಂಡಿರಬೇಕು ಎಂದರು.
ಪ್ರಯೋಗಾಲಯಗಳಲ್ಲಿ ಅಥವಾ ಗ್ರಂಥಾಲಯಗಳ ಕಪಾಟಿನಲ್ಲಿ ಜರ್ನಲ್ ಲೇಖನಗಳು, ಪುಸ್ತಕಗಳು ಅಥವಾ ವರದಿಗಳಾಗಿ ಉಳಿಯುವ ಹವಾಮಾನ ಸಂಶೋಧನೆಯಿಂದ ಉಪಯೋಗವಿಲ್ಲ. ಬದಲಾಗಿ ರೈತರು, ವಿಸ್ತರಣಾ ಏಜೆಂಟರು ಮತ್ತು ನೀತಿ ನಿರೂಪಕರು ಈ ಸಂಶೋಧನೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ ಎಂದರು.
ಹವಾಮಾನ ಬದಲಾವಣೆಯು ಎಲ್ಲಾ ಸಮುದಾಯಗಳ ಮೇಲೆ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಇದು ಸ್ಥಳೀಯ ಮಣ್ಣು, ಸೂಕ್ಷ್ಮ ಹವಾಮಾನ, ಸಂಸ್ಕೃತಿಗಳು ಮತ್ತು ಇತಿಹಾಸಗಳಿಂದ ಸಂದರ್ಭೋಚಿತವಾಗಿ ರೂಪುಗೊಂಡಿದೆ. ಅದಕ್ಕಾಗಿಯೇ ಸಂಶೋಧಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ, ತಲೆಮಾರುಗಳಿಂದ ಸಂಸ್ಕರಿಸಿದ ಸ್ಥಳೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಗುರುತಿಸಿ ಮುಂದುವರೆಯಬೇಕು.
ಪ್ರತಿ ವರ್ಷ, ರೈತರು ತಮ್ಮ ಬೆಳೆಯ ಪಾಲನ್ನು ಕಡಿಮೆ ಉತ್ಪಾದಕತೆಯಿಂದಾಗಿ ಅಲ್ಲ, ಬದಲಾಗಿ ಅಸಮರ್ಪಕ ಸಂಗ್ರಹಣೆ, ಕಳಪೆ ನಿರ್ವಹಣೆ, ದುರ್ಬಲ ಮಾರುಕಟ್ಟೆ ಸಂಪರ್ಕಗಳು ಮತ್ತು ಹವಾಮಾನ-ಪ್ರೇರಿತ ಅಡಚಣೆಗಳಿಂದಾಗಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಹವಾಮಾನ ಸಂಶೋಧನೆಯು ಉತ್ಪಾದನೆಯನ್ನು ಮೀರಿ ನೋಡಬೇಕು ಮತ್ತು ಕೊಯ್ಲಿನ ನಂತರದ ನಷ್ಟಗಳನ್ನು ಕಡಿಮೆ ಮಾಡುವ, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಸುಧಾರಿಸುವ, ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮತ್ತು ಮಾರುಕಟ್ಟೆ ಮಟ್ಟದ ತ್ಯಾಜ್ಯವನ್ನು ತಡೆಯುವ ತಂತ್ರಗಳನ್ನು ಸಂಯೋಜಿಸಬೇಕು.
ಕೃಷಿ ಸಹಕಾರ ಸಂಘಗಳು ಮತ್ತು ಎಫ್ಪಿಓ ಗಳು ಮಾರುಕಟ್ಟೆ ಮಧ್ಯವರ್ತಿಗಳಷ್ಟೇ ಅಲ್ಲ, ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನ ಉತ್ಪಾದನೆ ಮತ್ತು ಅಳವಡಿಕೆಯಲ್ಲಿ ಪ್ರಮುಖ ಪಾಲುದಾರರೂ ಆಗಿವೆ. ರೈತರನ್ನು ಸಂಘಟಿಸುವ ಮೂಲಕ, ಅವರು ವೈಯಕ್ತಿಕ ಅಪಾಯವನ್ನು ಕಡಿಮೆ ಮಾಡುತ್ತಾರೆ. ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಇನ್ಪುಟ್ಗಳು ಮತ್ತು ಮಾಹಿತಿಯನ್ನು ರೈತರ ಕೈಗೆಟುಕುವಂತೆ ಮಾಡುತ್ತಾರೆ.
ಇಂಡೋನೇಷ್ಯಾದ 2000 ರೈತರು ಅರಣ್ಯ ಸಂರಕ್ಷಣೆಯೊಂದಿಗೆ ಕಾಫಿ ಬೆಳೆದು ಆದಾಯ ಗಳಿಸುತ್ತಾರೆ. ವಿಯೆಟ್ನಾಂ ಸಹಕಾರಿ ಸಂಸ್ಥೆಗಳಿಂದ ಪರಿಸರ ಸಂರಕ್ಷಣೆಯನ್ನು ಕಡ್ಡಾಯಗೊಳಿಸಲಾಗಿದೆ. ಫಿಲಿಪೈನ್ಸ್- ಸಹಕಾರಿಯು ವಿಪತ್ತು ನಿರ್ವಹಣೆಗೆ ಸಿದ್ದತೆ ಮಾಡಿಕೊಂಡಿದ್ದು, ಬಾಂಗ್ಲಾದೇಶ-ಸಿಇಡಬ್ಲ್ಯೂಡಿಸಿ-ಮಹಿಳಾ ಸಹಕಾರಿಗಳು 73000 ಸೌರ ಘಟಕಗಳನ್ನು ಸ್ಥಾಪಿಸಿ ಆದಾಯ ಗಳಿಸುತ್ತಿದ್ದು, ಫಿಜಿ-ಬೌಮಾ ಜಲಪಾತ ಬಳಿಯ ಕೃಷಿಕ ಕುಟುಂಬಗಳು ಪ್ರವಾಸಿ ಗೈಡ್ ಮಾಡುವ ಮೂಲಕ ಆದಾಯ ಗಳಿಸುತ್ತಿವೆ. ಈ ರೀತಿಯ ಆದಾಯ ಗಳಿಕೆಯ ಅಭ್ಯಾಸಗಳನ್ನು ಉತ್ತೇಜಿಸಬೇಕಿದೆ. ಹಾಗೂ ರೈತರಿಗೆ ಕೈಗೆಟುಕುವ ಡಿಜಿಟಲ್ ಪರಿಹಾರಗಳನ್ನು ನೀಡಬೇಕಿದೆ. ಸಂಶೋಧನಾ ವಿಸ್ತರಣಾ ಸೇವೆಗಳನ್ನು ಬಲಪಡಿಸಬೇಕು. ಹಾಗೂ ರೈತರು ತಮ್ಮ ಹವಾಮಾನ-ಸ್ಮಾರ್ಟ್ ಉತ್ಪನ್ನಗಳನ್ನು ಬ್ರ್ಯಾಂಡ್ ಮಾಡಲು ಮತ್ತು ಪ್ರಮಾಣೀಕರಿಸಲು ಸಹಾಯ ಮಾಡಬೇಕು. ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿಯನ್ನು ಉತ್ತೇಜಿಸುವ ಸರ್ಕಾರಿ ಬೆಂಬಲ ಕಾರ್ಯಕ್ರಮಗಳು ಮತ್ತು ಸಾಲ ಯೋಜನೆಗಳನ್ನು ಜನಪ್ರಿಯಗೊಳಿಸುವುದರೊಂದಿಗೆ ಸ್ಟಾರ್ಟ್ಅಪ್ಗಳು, ಉದ್ಯಮಿಗಳಿಗೆ ಉಚಿತ ಪ್ರವೇಶ ನೀಡಬೇಕೆಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa