


ಕೊಪ್ಪಳ, 05 ಜನವರಿ (ಹಿ.ಸ.) :
ಆ್ಯಂಕರ್ : ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ತೇರು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜನವರಿ 5 ರಿಂದ 14 ರವರೆಗೆ 10 ದಿನಗಳ ಕಾಲ ತೋಟಗಾರಿಕಾ ಫಲ-ಪುಷ್ಪ ಪ್ರದರ್ಶನ-2026 ವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು, ಈ ವರ್ಷದ ತೋಟಗಾರಿಕೆ ಫಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ವರ್ಷ ರೈತರಿಗಾಗಿ ವಿದೇಶಿ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಮಣ್ಣು ರಹಿತ ಕೃಷಿ ಪದ್ದತಿ(ಹೈಡ್ರೋಪೋನಿಕ್ಸ್ ಅಥವಾ ಜಲಕೃಷಿ)ಯಲ್ಲಿ ತರಕಾರಿ ಬೆಳೆಯುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಫಲ ಪುಷ್ಪ ಪ್ರದರ್ಶನದಲ್ಲಿ ಈ ವರ್ಷ ದಿ. ಸಾಲುಮರದ ತಿಮ್ಮಕ್ಕ ಅವರ ಹೂವಿನ ಮಾದರಿಯನ್ನು ರಚಿಸಲಾಗಿದ್ದು, ಮಾದರಿ ಆಕರ್ಷಣೀಯವಾಗಿದೆ. ಚಿಟ್ಟೆ, ಹೃದಾಯಾಕಾರ, ಕರ್ನಾಟಕ ನಕ್ಷೆಯಲ್ಲಿ ದಿ. ಡಾ.ಪುನೀತ್ ರಾಜಕುಮಾರ್ ಅವರ ಮಾದರಿ, ಜಲಪಾತ, ಗೋಪುರ ಮಾದರಿ, ಟ್ರೈಯಾಂಗಲ್ ಮಾದರಿ, ನವಿಲು ಮಾದರಿಗಳು ಅತ್ಯಾಕರ್ಷಕವಾಗಿವೆ. 20-30 ವರ್ಷಗಳ ಬೋನ್ಸಾಯ್ ಮರಗಳು(ಕುಬ್ಜ ಮರಗಳು) ಕಣ್ಮನ ಸೆಳೆಯುತ್ತವೆ. ಜಿಲ್ಲೆಯ ರೈತರು ಬೆಳೆದ ಡ್ರ್ಯಾಗನ್ ಫ್ರುಟ್, ದಾಳಿಂಬೆ ಪ್ರದರ್ಶನ, ಇಲಾಖೆ ಯೋಜನೆಗಳ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದೆ. ತೋಟಗಾರಿಕೆ ಮತ್ತು ಎಫ್ಪಿಒಗಳ ಸಂಯುಕ್ತಾಶ್ರಯದಲ್ಲಿ ನಡೆಸುತ್ತಿರುವ ಕಿಸಾನ್ ಮಾಲ್ ಮಳಿಗೆ ಸ್ಥಾಪಿಸಲಾಗಿದ್ದು, ಇಲ್ಲಿ ರೈತರಿಗೆ ಯೋಗ್ಯ ಬೆಲೆಗೆ ಕೃಷಿ ಪರಿಕರಗಳನ್ನು ಮಾರಾಟ ಮಾಡಲಾಗುತ್ತದೆ. ರೈತರು ಈ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಇಲಾಖೆಯ ಯೋಜನೆಗಳ ಮಾಹಿತಿ ಪಡೆದು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್