
ಬೆಂಗಳೂರು, 10 ಜನವರಿ (ಹಿ.ಸ.) :
ಆ್ಯಂಕರ್ : ವಿಶೇಷಚೇತನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಸೂದೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ಈ ಮಸೂದೆ ಬರಲಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಹೇಳಿದರು.
ಸ್ನೇಹದೀಪ ಅಂಗವಿಕಲರ ಸಂಸ್ಥೆಯು ಮಲ್ಲೇಶ್ವರಂನ ಜಲಮಂಡಳಿ ರಜತ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ (ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ) ದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ೩೫ ಲಕ್ಷ ವಿಶೇಷಚೇತನರು ಇದ್ದಾರೆ ಎಂಬ ಅಂದಾಜು ಇದೆ. ಇವರಿಗೆ ಸರ್ಕಾರದ ನೆರವು ಸಿಗಬೇಕು. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಚಿಂತನೆ ನಡೆದಿದೆ. ಖಾಸಗಿ ಉದ್ದಿಮೆಗಳಲ್ಲಿ ಶೇ ೫ ರಷ್ಟು ಮೀಸಲು ಸಿಗಬೇಕು. ಇಡೀ ದೇಶದಲ್ಲೇ ಮೊದಲ ಬಾರಿಗೆ ಇಂತಹ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಅಧಿಕಾರದಲ್ಲಿ ಇರುವವರು ಸಮಾಜಕ್ಕೆ ಏನಾದರೂ ಉಪಯೋಗವಾಗುವಂತ ಕೆಲಸ ಮಾಡಬೇಕು. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೋ ಗೊತ್ತಿಲ್ಲ. ಸ್ನೇಹದೀಪ ಅಂಗವಿಕಲರ ಸಂಸ್ಥೆ ವಿಶೇಷಚೇತರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಇಂತಹವರಿಗೆ ಬೆಂಬಲ ನೀಡಬೇಕು. ವಿಶೇಷಚೇತನ ಮಕ್ಕಳ ಭವಿಷ್ಯ ಉಜ್ವಲವಾಗಲು ಸರಕಾರವೂ ಮುಂದೆ ಬರಬೇಕು ಎಂದರು.
ನಾವು ವಿಶೇಷಚೇತನರ ಬಗ್ಗೆ ಮಾತನಾಡುತ್ತೇವೆ. ಕನಸು ಕಾಣಲು ಕಣ್ಣು ಬೇಕಾಗಿಲ್ಲ. ನಮಗೆ ದೃಷ್ಟಿ ಇದೆ. ಆದರೆ ವಿಷನ್ ಇಲ್ಲ. ವಿಶೇಷಚೇತನರ ಹೃದಯ ಮತ್ತು ಮನಸು ಸುಂದರವಾಗಿದೆ. ನಮಗೆ ದೇವರು ಎಲ್ಲ ಅವಕಾಶ ನೀಡಿದ್ದಾನೆ. ವಿಶೇಷಚೇತನರನ್ನು ನೋಡಿ ನಾವೆಲ್ಲ ಕಲಿಯಬೇಕು. ಉಸಿರು ಇರುವವರೆಗೆ ಬಡವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಸ್ನೇಹದೀಪ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಡಾ. ಪೌಲ್ ಮುದ್ದಾ, ಹಿರಿಯ ಗಾಯಕಿ ಡಾ. ಪ್ರಿಯಾದರ್ಶಿನಿ, ಹಿರಿಯ ವ್ಯವಸ್ಥಾಪಕಿ ಭಾರತಿ ರಾಮ್ಬಜ್, ಲಯನ್ಸ್ ಇಂಟರ್ ನ್ಯಾಷನಲ್ನ ಸಶ ಕೊಲತುಂಗಾ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa