ವಿಜಯಪುರ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೃಷಿ ಆಧಾರಿತ ಗ್ರಾಮೀಣ ಜೀವನ ಉನ್ನತೀಕರಣದಲ್ಲಿ ಸಹಕಾರಿ ರಂಗದ ಕೊಡುಗೆ ಅನುಪಮ. ಸಿದ್ಧನಗೌಡ ಪಾಟೀಲ ಅವರಿಂದ ಅಖಂಡ ಧಾರವಾಡ ಜಿಲ್ಲೆಯಲ್ಲಿ ಜನ್ಮ ಪಡೆದರೂ ಸಹಕಾರಿ ಚಳುವಳಿ ಅಭ್ಯದಯ ಸಾಧಿಸಿರುವುದು ಬಸವನಾಡಿನಲ್ಲಿ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.
ಭಾನುವಾರ ನಗರದಲ್ಲಿ ಹೊರ್ತಿ ಶ್ರೀಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ವಿಜಯಪುರ ಬಾಗಲಕೋಟೆ ಸೇರಿದಂತೆ ಅಖಂಡ ವಿಜಯಪುರ ಜಿಲ್ಲೆಯ ಗ್ರಾಮೀಣ ಸಮಗ್ರ ಅಭಿವೃದ್ಧಿ ಮೂಲಕ ರೈತ ಸಮುದಾಯ ನೆಮ್ಮದಿಯ ಜೀವನ ನಡೆಸುವಲ್ಲಿ ಪಾಂಡುರಂಗ ದೇಸಾಯಿ ಅವರು ಸ್ಥಾಪಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡುಗೆ ಅಮೋಘವಾಗಿದೆ ಎಂದರು.
ನಾನು ಅಧ್ಯಕ್ಷನಾಗಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನದ ಹಿಂದೆ ಪಾಂಡುರಂಗ ದೇಸಾಯಿ ಅವರ ಮೂಲಕ 63 ಸಾವಿರ ರೂ.ಗಳಿಂದ ಆರಂಭಗೊಂಡು, ಇದೀಗ 14 ಸಾವಿರ ಕೋಟಿ ರೂ. ಆರ್ಥಿಕ ಶಕ್ತಿ ಹೊಂದಿದೆ. ಅದೇ ರೀತಿ ಹೊರ್ತಿ ಗ್ರಾಮದಲ್ಲಿ 25 ವರ್ಷಗಳ ಹಿಂದೆ ಶ್ರೀಮಂತ ಇಂಡಿ ಅವರ ಸಾರಥ್ಯದಲ್ಲಿ ಕೇವಲ 4 ಲಕ್ಷ ರೂ. ಬಂಡವಾಳದೊಂದಿಗೆ ಆರಂಭಗೊಂಡ ಶ್ರೀ ಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘ, ಇದೀಗ 2000 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 50 ಶಾಖೆಗಳನ್ನು ಸ್ಥಾಪಿಸಿ, 500 ಜನರಿಗೆ ಉದ್ಯೋಗ ಕಲ್ಪಿಸಿ, ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ಬೆಳವಣಿಗೆ ಕಂಡಿರುವುದು ಅದ್ಭುತ ಸಾಧನೆ ಎಂದು ಶ್ಲಾಘಿಸಿದರು.
ಗಮನೀಯ ಅಂಶ ಎಂದರೆ ಧೋತರ ಉಡುವವರೇ ಹಳ್ಳಿಯಲ್ಲಿ ಸ್ಥಾಪಿಸಿದ ಈ ಸಹಕಾರಿ ಸಂಘ ನಗರ ಪ್ರದೇಶದ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಿ 500 ಕುಟುಂಬಗಳಿಗೆ ಆಧಾರವಾಗಿದೆ ಎಂಬುದು ಸಹಕಾರಿ ಕ್ಷೇತ್ರಕ್ಕೆ ಪ್ರೇರಣಾದಾಯಕ ನಿದರ್ಶನ ಎಂದು ಬಣ್ಣಿಸಿದರು.
ಸರ್ಕಾರ ನೂರು ಜನರಲ್ಲಿ ಮೂವರಿಗೆ ಉದ್ಯೋಗ ಕೊಟ್ಟರೆ, ಸಹಕಾರಿ ರಂಗ ಕೃಷಿ ಬದುಕು ಆಧಾರಿತ ವ್ಯವಸ್ಥೆ ಮೂಲಕ ವಿವಿಧ ರೀತಿಯಲ್ಲಿ ಶೇ.70 ರಷ್ಟು ಉದ್ಯೋಗ ಕಲ್ಪಿಸಿದೆ. ರೈತರಿಗೆ ಕೃಷಿ ಬದುಕಿಗೆ ಇಜಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳು ಹತ್ತಾರು ನೆಪಗಳ ಮೂಲಕ ಸಮಸ್ಯೆ ಸೃಷ್ಟಿಸಿದಾಗ ಅನ್ನದಾತನ ಆರ್ಥಿಕ ಸಮಸ್ಯೆಗೆ ಪರಿಹಾರ ಕಲ್ಪಿಸಲು ನೆರವಿಗೆ ಧಾವಿಸಿದ್ದೇ ಸಹಕಾರಿ ಬ್ಯಾಂಕುಗಳು ಎಂದು ವಿವರಿಸಿದರು.
ಕಾತ್ರಾಳ-ಬಾಲಗಾಂವ ಜ್ಞಾನ ಯೋಗಾಶ್ರಮದ ಅಮೃತಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮಂತ ಇಂಡಿ ವಹಿಸಿದ್ದರು. ಮುದ್ದೇಬಿಹಾಳ ಶಾಸಕರಾದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಅಪ್ಪಾಜಿ ನಾಡಗೌಡ ಮರಣೋತ್ತರ ಪರಿಹಾರ ಧನ ವಿತರಿಸಿದರು. ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜು ಬಿಜ್ಜರಗಿ, ಪ್ರಶಾಂತ ಶೆಟ್ಟಿ, ಶಾಂತೇಶ ಕಳಸಗೊಂಡ ಇವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಧನೆಗಾಗಿ ನಿಂಗನಗೌಡ ಬಿರಾದಾರ, ಸಂತೋಷ ಇಂಡಿ, ಪ್ರಕಾಶಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ, ಶಿವಯೋಗೆಪ್ಪ ಜೋತಗೊಂಡ, ಹನುಮಂತರಾಯ ಪಾಟೀಲ, ಶ್ರೀಕಾಂತ ಕುಡಿಗನೂರು, ಭೀಮು ಸಾಹುಕಾರ ಬಸನಾಳ ಇವರನ್ನು ಸನ್ಮಾನಿಸಲಾಯಿತು. ಬಸವರಾಜ ಸಾವಕಾರ ನಿರೂಪಿಸಿದರೆ, ಬಿ.ಜೆ.ಇಂಡಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande