ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಬಿಐಟಿಎಂ) ನ ಐಇಇಇ ವಿದ್ಯಾರ್ಥಿ ವಿಭಾಗವು `ನಿಯೋನೆಕ್ಸಸ್ 36.0' ಹೆಸರಿನ 36 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಅನ್ನು ಸೆಪ್ಟೆಂಬರ್ 6ರ ಶನಿವಾರ ಮತ್ತು ಸೆಪ್ಟಂಬರ್ 7ರ ಭಾನುವಾರ ಏರ್ಪಡಿಸಿದೆ.
ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಬಿಐಟಿಎಂ) ನ ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್ ಅವರು ಈ ಮಾಹಿತಿ ನೀಡಿದ್ದು, ಎರೆಡು ದಿನಗಳ ಹ್ಯಾಕಥಾನ್ನಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ತಂತ್ರಜ್ಞಾನದ ಡೆವಲಪರ್ಗಳು ಮತ್ತು ವೃತ್ತಿಪರರು 3 ರಿಂದ 4 ತಂಡಗಳಾಗಿ ಭಾಗವಹಿಸಿ, ಈ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಸಂಶೋಧನೆ ಮಾಡಲಿದ್ದಾರೆ ಎಂದರು.
ಡಾ. ಅಬ್ದುಲ್ ಲತೀಫ್ ಹರೂನ್ ಪಿ.ಎಸ್. ಅವರ ನೇತೃತ್ವದಲ್ಲಿ ಎರೆಡು ದಿನಗಳ ಕಾಲ ನಡೆಯುತ್ತಿರುವ ಈ ಹ್ಯಾಕಥಾನ್, ಸೃಜನಶೀಲತೆ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸುವ ವೇದಿಕೆಯಾಗಿದೆ. `Code the Change, Secure the World, Sustain the Future' ಘೋಷ ವಾಕ್ಯದಡಿ ಹ್ಯಾಕಥಾನ್ ನಡೆಯಲಿದೆ. ಈ ಹ್ಯಾಕಥಾನ್ನಲ್ಲಿ ಎಐ-ಎಂಎಲ್, ಸ್ಮಾರ್ಟ್ ಸಿಟೀಸ್, ಐಒಟಿ, ಸೈಬರ್ ಸೆಕ್ಯೂರಿಟಿ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನ ಮತ್ತು ಬುದ್ಧಿವಂತ ಸಂಚಾರ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಾಶ್ ಗ್ಲೋಬಲ್ ಸಾಫ್ಟ್ವೇರ್ ಟೆಕ್ನಾಲಜೀಸ್, ಹೆವ್ಲೆಟ್ ಪ್ಯಾಕರ್ಡ್ ಎಂಟರ್ಪ್ರೈಸಸ್, ಮ್ಯಾಥ್ವಕ್ರ್ಸ್, ಕೋರೀ ಇಎಲ್ ಟೆಕ್ನಾಲಜೀಸ್, ಎಎಂಡಿ ಮತ್ತು ಇನ್ವೆಂಟುರಿಸ್ ಟೆಕ್ನಾಲಜೀಸ್ ಸಂಸ್ಥೆಗಳ ಹಿರಿಯ ತಜ್ಞರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದು, ತಮ್ಮ ಕೈಗಾರಿಕಾ ಮತ್ತು ವೃತ್ತಿಪರ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇದರಿಂದ ಸ್ಪರ್ಧಾರ್ಥಿಗಳಿಗೆ ನವೀನ ತಂತ್ರಜ್ಞಾನ ಮತ್ತು ವೃತ್ತಿಪರ ಮಾರ್ಗದರ್ಶನ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
20 ಕ್ಕೂ ಹೆಚ್ಚು ಪ್ರಮುಖ ಸಂಸ್ಥೆಗಳಿಂದ 189 ಕ್ಕೂ ಹೆಚ್ಚು ಪ್ರಾಜೆಕ್ಟ್ಗಳ ಅಬ್ಸ್ಟ್ರಾಕ್ಟ್ಗಳನ್ನು ಹ್ಯಾಕಥಾನ್ನಲ್ಲಿ ಮಂಡಿಸಲಾಗುತ್ತದೆ. ಬನ್ನಾರಿ ಅಮ್ಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೃತ ವಿಶ್ವವಿದ್ಯಾಪೀಠಂ, ಕೆ.ಎಲ್.ಇ. ಟೆಕ್ನಾಲಜಿಕಲ್ ಯೂನಿವರ್ಸಿಟಿ, ಪಿ.ಎಸ್.ಜಿ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ ಹಾಗೂ ಆತಿಥೇಯ ಬಿಐಟಿಎಂ ತಂಡಗಳು ಭಾಗವಹಿಸುತ್ತಿವೆ.
ಸ್ಪರ್ಧೆಯ ವಿಮರ್ಶೆ, ನಾವೀನ್ಯತೆ, ಪರಿಣಾಮ, ತಾಂತ್ರಿಕ ಕಾರ್ಯನಿರ್ವಹಣೆ ಮತ್ತು ತಂಡದ ಕಾರ್ಯಪದ್ಧತಿಯನ್ನು ಆಧರಿಸಿ ರೂ.50,000 ನಗದು ಬಹುಮಾನ, ಪ್ರಮಾಣಪತ್ರಗಳು ಮತ್ತು ಗೌರವ ನೀಡಲಾಗುವುದು. ಈ ಮೂಲಕ `ನಿಯೋನೆಕ್ಸಸ್ 36.0' ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿ ಪ್ರತಿಭೆಯನ್ನು ಪ್ರೋತ್ಸಾಹಿಸಿ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್