ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಅಧಿಕ ಮಳೆಯಾಗುತ್ತಿದ್ದು, ಮೋಡ ಕವಿದ ವಾತವರಣ ಹಾಗೂ ತಾಪಮಾನ ಏರುಪೇರಿನಿಂದ ಮೆಣಸಿನಕಾಯಿ ಬೆಳೆಯಲ್ಲಿ ರೋಗ ಮತ್ತು ಕೀಟಬಾಧೆಯಿಂದ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಹಾಗಾಗಿ ರೈತರು ಸೂಕ್ತ ನಿರ್ವಹಣೆಯ ಕ್ರಮ ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಾಡ್ರ ಶಂಕರಪ್ಪ ಅವರು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳಲ್ಲಿ 17,800 ಹೆಕ್ಟೇರ್ ಗಿಂತ ಹೆಚ್ಚು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಕಳೆದ ವರ್ಷಗಳಲ್ಲಿ ಮೆಣಸಿನಕಾಯಿ ಬೆಳೆಯನ್ನು ಬಾಧಿಸಿದ್ದ ಹೊಸ ಥ್ರಿಪ್ಸ್ ನುಸಿ (ಥ್ರಿಪ್ಸ್ ಪಾರ್ವಿಸ್ಪಿನಸ್) ಕೀಟ, ಎಲೆ ಮುಟುರು ರೋಗ, ಬೂದಿ ರೋಗ, ಹಣ್ಣು ಕೊಳೆ ರೋಗದ ನಿರ್ವಹಣೆಗೆ ರೈತರು ಸೂಕ್ತ ಕ್ರಮಗಳನ್ನು ಅನುಸರಿಸಬೇಕಿದೆ ಎಂದಿದ್ದಾರೆ.
*ಥ್ರಿಪ್ಸ್ ನುಸಿ:*
ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗ, ಹೂಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತವೆ. ಮರಿ ಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತವಾಗಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಎಲೆಗಳ ಅಂಚು ಮೇಲ್ಮುಖವಾಗಿ ಮುದುಡುವುದು, ಹೂಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂ ಬಿಡದೆ ಒಣಗುವುದು ಸಾಮಾನ್ಯವಾಗಿ ಕಂಡುಬರುವ ಹಾನಿಯ ಲಕ್ಷಣಗಳಾಗಿವೆ. ಕಾಲ ಕ್ರಮೇಣ, ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ.
*ನಿರ್ವಹಣಾ ಕ್ರಮಗಳು:*
ಹೊಲದ ಸುತ್ತಲೂ 2-3 ಸಾಲು ಜೋಳ, ಮೆಕ್ಕೆಜೋಳ, ಸಜ್ಜೆಯನ್ನು ಬೇಲಿ ಬೆಳೆಯಾಗಿ ದಟ್ಟವಾಗಿ ಬಿತ್ತುವುದರಿಂದ ಕೀಟಗಳ ಪ್ರಸಾರವನ್ನು ನಿಯಂತ್ರಿಸಬಹುದು. ಹೊಲ ಮತ್ತು ಬದುಗಳ ಸ್ವಚ್ಛತೆಯಿಂದ ಥ್ರೀಪ್ಸ್ ನುಸಿಗಳಿಗೆ ಆಸರೆ ನೀಡುವ ಕಳೆಗಳ ನಿರ್ಮೂಲನೆ ಮಾಡಬಹುದು. ಸೂಕ್ತ ಅಂತರ (90*30 ಸೆಂ.ಮಿ., 60*45 ಸೆಂ.ಮಿ.) ಕಾಪಾಡಬೇಕು. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರದೊಡನೆ ಮೆಟಾರೈಜಿಯಮ್ ಅನಿಸೋಪ್ಲಿಯೆ ಎಂಬ ಶಿಲೀಂಧ್ರ ಕೀಟನಾಶಕದಿಂದ (2-3 ಕೆ.ಜಿ/ಟನ್) ಮೌಲ್ಯವರ್ಧನೆಗೊಳಿಸಿ ಹೊಲಗಳಿಗೆ ಹಾಕಬೇಕು.
ಬೇವಿನ ಹಿಂಡಿ (200 ಕೆ.ಜಿ/ಎಕರೆಗೆ) ಮತ್ತು ಎರೆಹುಳು ಗೊಬ್ಬರವನ್ನು (500 ಕೆ.ಜಿ/ಎಕರೆಗೆ) ಮಣ್ಣಿನಲ್ಲಿ ಬೆರೆಸುವುದರಿಂದ ನಿರೋಧÀಕ ಶಕ್ತಿ ವೃದ್ಧಿಗೊಳ್ಳುತ್ತದೆ. ಶಿಫಾರಸ್ಸು ಪ್ರಮಾಣದ ರಸಗೊಬ್ಬರದೊಂದಿಗೆ ಪೊಟ್ಯಾಶ್ನ ಬಳಕೆ ವೃದ್ಧಿಸುವುದರಿಂದ ಕೀಟ ನಿರೋಧಕ ಶಕ್ತಿ ಹೆಚ್ಚುತ್ತದೆ.
ನೀಲಿ ಅಂಟಿನ ಬಲೆಗಳನ್ನು @25-30/ಎಕರೆಗೆ ಬೆಳೆಯ ಎತ್ತರಕ್ಕೆ ಅಳವಡಿಸಬೇಕು. ಕಾಲಾನುಸಾರ ಕುಂಟೆಯೊಡೆಯುವುದರಿ0ದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಸಿಯನ್ನು ನಾಶಪಡಿಸಬಹುದು. ಸಾಧ್ಯವಾದಲ್ಲಿ ಕಾಲುವೆ ಮೂಲಕ ನೀರುಣಿಸುವ ಬದಲು ತುಂತುರು ನೀರಾವರಿ ಅಥವಾ ಹನಿ ನೀರಾವರಿ ಪದ್ಧತಿ ಅಳವಡಿಸಬೇಕು.
ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಶೀಟ್ (25-30 ಮೈಕ್ರಾನ್) ನಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುವುದನ್ನು ತಡೆಯಬಹುದು. ತೀವ್ರ ಬಾಧೆಗೊಳಗಾದ ಗಿಡಗಳನ್ನು ಕಿತ್ತುಗುಂಡಿಯಲ್ಲಿ ಮುಚ್ಚಬೇಕು ಅಥವಾ ಸುಡಬೇಕು. ಪರಭಕ್ಷಕ, ಮಿತ್ರ ಕೀಟಗಳ ವೃದ್ಧಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕಗಳ ಬದಲು ಪರಿಸರ ಸ್ನೇಹಿ ಕೀಟನಾಶಕಗಳಾದ ಶೇ.5 ರ ಬೇವಿನ ಬೀಜದ ಕಷಾಯ, ಬೇವಿನ ಎಣ್ಣೆ (3000 ಪಿ.ಪಿ.ಯಂ)@ 2 ಮಿ.ಲೀ/ಲೀ, ಹೊಂಗೆ ಎಣ್ಣೆ@ 3 ಮಿ.ಲೀ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಶಿಲೀ0ಧ್ರ ಕೀಟನಾಶಕಗಳಾದ ಬಿವೇರಿಯಾ ಬಸ್ಸಿಯಾನ ಅಥವಾ ಲೆಕ್ಯಾನಿಸಿಲಿಯಂ ಲೆಕ್ಯಾನಿ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೇಯನ್ನು @ 4 ಗ್ರಾಂ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯಕತೆಗನುಸಾರವಾಗಿ ಶಿಫಾರಸ್ಸು ಮಾಡಿರುವ ರಾಸಾಯನಿಕ ಕೀಟನಾಶಕಗಳದ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.2 ಗ್ರಾಂ ಥಯೋಮೆಥಾಕ್ಸಾಮ್ 25 ಡಬ್ಲೂö್ಯ.ಜಿ ಅಥವಾ 1.0 ಮಿ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 1.0 ಗ್ರಾಂ ಡಯಾಫೆನ್ಥಯೂರಾನ್ 50 ಡಬ್ಲೂö್ಯ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
*ಎಲೆ ಮುಟುರು ರೋಗ:*
ಈ ರೋಗವನ್ನು ಹಳದಿ ಮಿಶ್ರಿತ ಹಸಿರು ಭಾಗವನ್ನು ಎಲೆಯಲ್ಲಿ ಕಾಣಬಹುದು. ಎಲೆಗಳು ವಕ್ರಾಕಾರದ ಅಥವಾ ಮುಟುರು ಎಲೆಗಳನ್ನು ಕಾಣಬಹುದು. ಆ ಮೇಲೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮುಟುರು ರೋಗದ ಬಾಧೆ ತಡೆಗಟ್ಟಲು ಶೇ.0.5 ರ ಬೆಳ್ಳೊಳ್ಳಿ, ಹಸಿ ಮೆಣಿಸಿನಕಾಯಿ, ಸೀಮೆ ಎಣ್ಣೆ ಕಷಾಯವನ್ನು ಬೇವು ಜನ್ಯ ಕೀಟನಾಶಕದೊಂದಿಗೆ (2.5 ಮಿ.ಲೀ. ಪ್ರತಿ ಲೀಟರ್ ನೀರಿಗೆ) ಬೆರಸಿ ಅವಶ್ಯವಿದ್ದಾಗ ಸಿಂಪರಣೆ ಮಾಡಬೇಕು.
ಪ್ರಮುಖವಾಗಿ ಮೆಣಸಿನಕಾಯಿಯಲ್ಲಿ ಬೆಳೆಯಲ್ಲಿ ಬರುವ ಥಿಪ್ಸ್, ಮೈಟ್ಸ್, ಬಿಳಿ ನೋಣ ಹಾಗೂ ರಸಹಿರುವ ಕೀಟಗಳ ನಿರ್ವಹಣೆ ಮಾಡುವುದು ಎಲೆ ಮುಟುರು ರೋಗದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕೀಟನಾಶಕಗಲಾದ 0.3 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.2 ಗ್ರಾಂ ಥಯೋಮೆಥಾಕ್ಸಾಮ್ 25 ಡಬ್ಲೂö್ಯ.ಜಿ ಅಥವಾ 1.0 ಮಿ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 1.0 ಗ್ರಾಂ ಡಯಾಫೆನ್ಥಯೂರಾನ್ 50 ಡಬ್ಲೂö್ಯ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
*ಬೂದಿ ರೋಗ:*
ಈ ರೋಗವನ್ನು ಬೂದಿ ಬಣ್ಣದ ಮಚ್ಚೆಗಳನ್ನು ಎಲೆಯಲ್ಲಿ ಕಾಣಬಹುದು. ರೋಗ ಕಂಡುಬAದಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗ ಲಕ್ಷಣಗಳು ಕಡಿಮೆಯಾಗದ್ದಿದಲ್ಲಿ ಇದೇ ಸಿಂಪರಣೆಯನ್ನು 15 ದಿನಗಳ ಹಂತರದಲ್ಲಿ ಇನ್ನೂ ಎರಡು ಬಾರಿ ಕೈಗೊಳ್ಳಬಹುದು ಅಥವಾ 1 ಗ್ರಾಂ ಅಜೋಕ್ಸಿಸ್ಟರೋಬಿನ್ ಶೇ.23 ಎಸ್ಟಿ ರೋಗ ನಾಷಕವನ್ನು ಪ್ರತಿ ಲೀಟರ್ ನೀರಿಗೆ ಬೇರಸಿ ಸಿಂಪಡಿಸಬಹುದಾಗಿದೆ. ಇಲ್ಲವೇ ಹೆಕ್ಸಾಕೊನಜೋಲ್ ಶೇ.2 ಎಸ್ಸಿ ರೋಗ ನಾಷಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.
*ಹಣ್ಣು ಕೊಳೆ ರೋಗ:*
ಈ ರೋಗವನ್ನು ಹಣ್ಣುಗಳ ಮೇಲೆ ವೃತ್ತಾಕಾರದ ತಗ್ಗಾದ ಕಪ್ಪನೆಯ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಒಳಗಿನ ಬಣ್ಣವು ಗುಲಾಬಿ ವರ್ಣದಿಂದ ಕೂಡಿರುತ್ತದೆ. ಆ ಮೇಲೆ ಕಪ್ಪಾಗುತ್ತವೆ. ಮೆಣಸಿನಕಾಯಿ ಬೆಳೆಗೆ ತುದಿ ಸಾಯುವ ರೋಗ, ಹಣ್ಣು ಕೊಳೆಯುವ ರೋಗ ಹಾಗೂ ಬೂದಿ ರೋಗಗಳು ಕಂಡು ಬಂದಾಗ 1 ಗ್ರಾಂ ಕಾರ್ಬಂಡೈಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ನಾಲ್ಕು ಬಾರಿ ಸಿಂಪಡಿಸಬೇಕು.
1 ಗ್ರಾಂ ಅಜೋಕ್ಸಿಸ್ಟರೋಬಿನ್ ಶೇ.23 ಎಸ್ಟಿ ರೋಗ ನಾಷಕವನ್ನು ಪ್ರತಿ ಲೀಟರ್ ನೀರಿಗೆ ಬೇರಸಿ ಸಿಂಪಡಿಸಬಹುದಾಗಿದೆ. ಇಲ್ಲವೇ ಹೆಕ್ಸಾಕೊನಜೋಲ್ ಶೇ.2 ಎಸ್ಸಿ ರೋಗ ನಾಷಕವನ್ನು ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬಹುದು.
ಈ ಮೇಲ್ಕಂಡ ಎಲ್ಲಾ ಅಗತ್ಯವಿರುವ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ರೈತರು ಸಕಾಲದಲ್ಲಿ ಮೆಣಸಿನಕಾಯಿ ಬೆಳೆಗೆ ಔಷಧಿಗಳನ್ನು ಸೂಕ್ತ ರೀತಿಯಲ್ಲಿ ಸಿಂಪಡಿಸಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದಾಗಿದೆ.
ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್