ಜಮ್ಮು, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರಿ ಮಳೆ, ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತದಿಂದ ಜಮ್ಮು-ಕಾಶ್ಮೀರದ ಹಲವೆಡೆ ಉಂಟಾದ ಹಾನಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಜಮ್ಮು ಪ್ರವಾಸದಲ್ಲಿದ್ದಾರೆ.
ಇಂದು ಅವರು ಕತ್ರಾ, ಶ್ರೀ ಮಾತಾ ವೈಷ್ಣೋದೇವಿ ದೇಗುಲದ ಮೂಲ ಶಿಬಿರ ಹಾಗೂ ಕಿಶ್ತ್ವಾರ್ ಪ್ರದೇಶಗಳ ಮೇಲೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಈ ಭಾಗಗಳಲ್ಲಿ ಜೀವಹಾನಿ, ಆಸ್ತಿ ಹಾನಿ ಮತ್ತು ಮೂಲಸೌಕರ್ಯ ಕುಸಿತ ಭಾರಿ ಪ್ರಮಾಣದಲ್ಲಿ ದಾಖಲಾಗಿದೆ. ಮಚೈಲ್ ಮಾತಾ ಹಾಗೂ ವೈಷ್ಣೋದೇವಿ ಯಾತ್ರಿಕರಿಗೂ ವಿಪತ್ತು ಭಾರಿ ಅನಾಹುತ ತಂದಿದೆ.
ಸಮೀಕ್ಷೆಯ ನಂತರ, ಶಾ ಅವರು ಜಮ್ಮು ರಾಜಭವನದಲ್ಲಿ ಉನ್ನತ ಮಟ್ಟದ ಸಭೆಗೆ ಅಧ್ಯಕ್ಷತೆ ವಹಿಸಲಿದ್ದು, ಪರಿಹಾರ, ರಕ್ಷಣಾ ಹಾಗೂ ಪುನರ್ವಸತಿ ಕಾರ್ಯಚಟುವಟಿಕೆಗಳ ಸ್ಥಿತಿ ಪರಿಶೀಲಿಸಲಿದ್ದಾರೆ.
ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ವಿಪತ್ತು ನಿರ್ವಹಣಾ ಅಧಿಕಾರಿಗಳು ಹಾಗೂ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa