ಕೊಪ್ಪಳ, 06 ಜುಲೈ (ಹಿ.ಸ.) :
ಆ್ಯಂಕರ್ : ವಚನ ಸಾಹಿತ್ಯ ಬದುಕಿನ ಮೌಲ್ಯವನ್ನು ಹೆಚ್ಚಿಸುವ ದಿವ್ಯ ಔಷಧಿಯಾಗಿದೆ ಎಂದು ವಚನ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಗೋನಾಳ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಚನ ಸಾಹಿತ್ಯ ಪರಿಷತ್ತಿನ ಕೊಪ್ಪಳ ತಾಲೂಕು ಘಟಕ ಅಧ್ಯಕ್ಷ ಭಾಗ್ಯನಗರದ ಶಿಕ್ಷಕ ಮೈಲಾರಪ್ಪ ಉಂಕಿ ಅವರ ಮನೆಯಲ್ಲಿ ಭಾನುವಾರ ನಡೆದ `ಮನೆ ಮನೆಯಲ್ಲಿ ವಚನ’ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬೆಳಗಿನ ಜಾವ ನಡೆಯುವ ಪ್ರಾರ್ಥನೆಯಲ್ಲಿ ಒಂದು ವಚನವನ್ನು ವಿದ್ಯಾರ್ಥಿಗಳಿಂದ ಹೇಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಬಸವಾನುಯಾಯಿ ವೈ.ಎಚ್. ಹಳ್ಳಿಕೇರಿ ಅವರು, ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ಬಸವಣ್ಣನವರು ನಿಜವಾದ ಸಾಮಾಜಿಕ ನ್ಯಾಯದ ಹರಿಕಾರರು ಎಂದರು.
ಸಾಹಿತಿ ಶಿ.ಕಾ. ಬಡಿಗೇರ ಅವರು ಪ್ರತಿ ತಿಂಗಳು ವಚನ ಗೋಷ್ಟಿ, ವಚನ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.
ಮಕ್ಕಳ ಸಾಹಿತಿ ಎ.ಪಿ. ಅಂಗಡಿ, ಗವಿಸಿದ್ದಪ್ಪ ಬಾರಕೇರ, ಸುರೇಶ ಕುಂಬಾರ ಹಾಗೂ ಪ್ರದೀಪ ಹದ್ದಣ್ಣವರ ವಚನಕಾರರ ಒಂದೊಂದು ವಚನ ಓದಿದರು. ಮೈಲಾರಪ್ಪ ಉಂಕಿ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್