ಬೆಂಗಳೂರು, 28 ಜುಲೈ (ಹಿ.ಸ.) :
ಆ್ಯಂಕರ್ : ಮೈಸೂರಿನಲ್ಲಿ ಡ್ರಗ್ ಮಾಫಿಯಾ ತಲೆ ಎತ್ತಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್ ಮಾಫಿಯಾ ತಲೆ ಎತ್ತಿದೆ. ಇವರನ್ನು ಯತೀಂದ್ರ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಹೋಲಿಸಿದ್ದಾರೆ. ಮೈಸೂರಿನಲ್ಲಿ ಮಾದಕ ವಸ್ತುಗಳ ಫ್ಯಾಕ್ಟರಿಯೇ ಇರುವಾಗ ಗೃಹ ಇಲಾಖೆ ಏನು ಮಾಡುತ್ತಿದೆ? ಸರ್ಕಾರ ಇದುವರೆಗೂ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಮಾಲೀಕ ಯಾರು? ಜಮೀನು ಕೊಟ್ಟವರು ಯಾರು? ನೂರಾರು ಕೋಟಿಯ ದಂಧೆಗೆ ಅವಕಾಶ ನೀಡಿದವರು ಯಾರು? ಸರ್ಕಾರ ಈ ವಿಚಾರದಲ್ಲಿ ಮೈ ಮರೆತಿದೆ. ಇದೇ ಸಿದ್ದರಾಮಯ್ಯನವರ ಕೊಡುಗೆ ಎಂದಿದ್ದಾರೆ.
ಜೆಡಿಎಸ್ನಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್ನಲ್ಲೇ ಇದ್ದ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿಲ್ಲ. ಆದ್ದರಿಂದಲೇ ಖರ್ಗೆ ಸಿಎಂ ಆಗದಿರುವ ಬಗ್ಗೆ ಹೇಳಿದ್ದಾರೆ. ಈಗಲಾದರೂ ನನ್ನನ್ನು ಸಿಎಂ ಮಾಡಿ ಋಣ ತೀರಿಸಿ ಎಂದು ಅವರು ಹೇಳಿದ್ದಾರೆ. ಸಚಿವ ರಾಜಣ್ಣ ಈಗಾಗಲೇ ಕ್ರಾಂತಿಯ ಬಗ್ಗೆ ಹೇಳಿದ್ದಾರೆ. ಖರ್ಗೆಯವರಯು ಸರಿಯಾದ ಸಮಯಕ್ಕೆ ಮಾವಿನ ಹಣ್ಣಿಗೆ ಕಲ್ಲು ಹೊಡೆದಿದ್ದಾರೆ. ಅಕ್ಟೋಬರ್ ವೇಳೆಗೆ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದರು.
ಎಸ್.ಎಂ.ಕೃಷ್ಣ ನಿಧನದ ನಂತರ ಅವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತಾಡುತ್ತಿದ್ದಾರೆ. ಎಸ್.ಎಂ.ಕೃಷ್ಣ ಐಟಿ ಬಿಟಿಗೆ ನೀಡಿದ ಕೊಡುಗೆಯಿಂದಲೇ ಇಷ್ಟು ಆದಾಯ ರಾಜ್ಯಕ್ಕೆ ಬರುತ್ತಿದೆ. ನಾನು ಜ್ಯೋತಿಷ್ಯ ಹೇಳಲ್ಲ. ಆದರೆ ಖಚಿತವಾಗಿ ಒಪ್ಪಂದ ಆಗಿದೆ ಎಂದು ಶಾಸಕರೇ ಹೇಳಿದ್ದಾರೆ. ಎಲ್ಲ ಜಿಲ್ಲೆಗಳ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಅವರಿಗೆ ದೇವರೇ ಗತಿ. ಯಾವ ದೇವರು ವರ ನೀಡುತ್ತಾರೆ ಎಂದು ಅವರು ನೋಡಿದ್ದಾರೆ ಎಂದರು.
ಸಿದ್ದರಾಮಯ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲ್ಲ. ಸಿದ್ದರಾಮಯ್ಯ ಮೈಸೂರಿನಲ್ಲಿ ಒಂದೇ ಒಂದು ಕೆರೆ ಕಟ್ಟಿಸಿಲ್ಲ. ಆದರೂ ಅವರನ್ನು ಮಹಾರಾಜರಿಗೆ ಹೋಲಿಕೆ ಮಾಡುತ್ತಾರೆ. ಶಾಸಕರ ಜೊತೆ ಇವರು ಅಭಿವೃದ್ಧಿ ಬಗ್ಗೆ ಚರ್ಚೆಯೇ ಮಾಡಲ್ಲ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa