ನವದೆಹಲಿ, 25 ಜುಲೈ (ಹಿ.ಸ.) :
ಆ್ಯಂಕರ್ : ನವೀಕರಿಸಬಹುದಾದ ಇಂಧನ ವಲಯಕ್ಕೆ ಉತ್ತೇಜನ ನೀಡಿದ್ದರ ಫಲವಾಗಿ ₹4 ಲಕ್ಷ ಕೋಟಿ ವೆಚ್ಚ ಉಳಿತಾಯ ಆಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನವದೆಹಲಿಯಲ್ಲಿ ನಡೆದ ಮೆರ್ಕಾಮ್ ಇಂಡಿಯಾ ನವೀಕರಿಸಬಹುದಾದ ಶೃಂಗಸಭೆ ಉದ್ದೇಶಿಸಿ ಮಾತನಾಡಿ, ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ಆದ್ಯತೆ ನೀಡಿದ್ದರಿಂದ ಪಳೆಯುಳಿಕೆ ಇಂಧನ ಆಮದು ತಗ್ಗಿದೆ. ಅಲ್ಲದೇ, ಪರಿಸರ ಮಾಲಿನ್ಯ ಸಂಬಂಧಿತ ವೆಚ್ಚವನ್ನು ಸಹ ತಪ್ಪಿಸಿದೆ. ಈ ಮೂಲಕ ಸುಮಾರು ₹4 ಲಕ್ಷ ಕೋಟಿ ಆರ್ಥಿಕ ಉಳಿತಾಯಕ್ಕೆ ನೆರವಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ಅಧ್ಯಯನದ ಪ್ರಕಾರ ನವೀಕರಿಸಬಹುದಾದ ಇಂಧನದಿಂದಾಗಿ ದೇಶದಲ್ಲಿ $14.9 ಬಿಲಿಯನ್ ಪಳೆಯುಳಿಕೆ ಇಂಧನ ಆಮದು ಕಡಿಮೆಯಾಗಿದೆ. 410.9 ಮಿಲಿಯನ್ ಟನ್ CO₂ ಹೊರಸೂಸುವಿಕೆ ಸಹ ತಗ್ಗಿದೆ ಮತ್ತು $31.7 ಬಿಲಿಯನ್ ಮೌಲ್ಯದಷ್ಟು ಆರೋಗ್ಯ ಮತ್ತು ವಾಯು ಮಾಲಿನ್ಯದಿಂದ ಪ್ರಯೋಜನವಾಗಿದೆ ಎಂದರು.
ಪ್ರಧಾನಮಂತ್ರಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆಯಡಿ 58.7 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಈಗಾಗಲೇ 17.2 ಲಕ್ಷ ಘಟಕಗಳು ಪೂರ್ಣಗೊಂಡಿವೆ. ಈ ವಲಯದಲ್ಲಿ 30 GWh ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಗಾಗಿ ₹5,400 ಕೋಟಿ ಕಾರ್ಯಸಾಧ್ಯತಾ ಅಂತರ ನಿಧಿ ಯೋಜನೆ ಸಹ ಆರಂಭಿಸಲಾಗಿದೆ. ಇದು ₹33,000 ಕೋಟಿಯಷ್ಟು ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ ಎಂದರು.
2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಗ್ರ ಪ್ರಸರಣ ಯೋಜನೆ ಹಾಕಿಕೊಳ್ಳಲಾಗಿದೆ. ವಿದ್ಯುತ್ ಸಚಿವಾಲಯ, ಸಿಇಎ,ಸಿಟಿಯು
ಮತ್ತು ಪವರ್ಗ್ರಿಡ್ ನೊಂದಿಗೆ ಸಮನ್ವಯದಿಂದ ಯೋಜನೆ ರೂಪಿಸಲಾಗಿದೆ. ₹24,000 ಕೋಟಿ ವೆಚ್ಚದ ʼಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಯೋಜನೆ ʼ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದರು.
*8.6 ಲಕ್ಷ ಟನ್ ಹಸಿರು ಹೈಡ್ರೋಜನ್ಗೆ ಅನುಮೋದನೆ:* ಎಂಎಸ್ಎಂಇ ಮತ್ತು ನವೋದ್ಯಮಗಳಿಗೆ ಶುದ್ಧ ಇಂಧನ ನಾವೀನ್ಯತೆಗಾಗಿ ಅಧಿಕಾರ ನೀಡಲಾಗುತ್ತಿದೆ. ಅಲ್ಲದೇ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ₹19,744 ಕೋಟಿ ವೆಚ್ಚ, 3,000 ಮೆಗಾವ್ಯಾಟ್ ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಹಂಚಿಕೆ ಮತ್ತು ವರ್ಷಕ್ಕೆ 8.6 ಲಕ್ಷ ಟನ್ಗೂ ಹೆಚ್ಚು ಹಸಿರು ಹೈಡ್ರೋಜನ್ ಉತ್ಪಾದನೆ ಅನುಮೋದನೆಯೊಂದಿಗೆ ವೇಗದ ಪ್ರಗತಿ ಸಾಧಿಸುತ್ತಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ತನ್ನ ಬದ್ಧತೆ ಪೂರೈಸುತ್ತಿದೆ. 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯತ್ತ ಸಾಗಿದೆ. ಕಾಲಮಿತಿಗಿಂತ 5 ವರ್ಷ ಮೊದಲೇ ಶೇ.50ರಷ್ಟು ಪಳೆಯುಳಿಕೆಯೇತರ ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸಿದೆ. ಪ್ರಸ್ತುತ 245 GW ಮೀರಿದೆ. 116 GW ಸೌರ ವಿದ್ಯುತ್ ಮತ್ತು 52 GW ಪವನ ವಿದ್ಯುತ್ ಉತ್ಪಾದನೆ ಸಹ ಸಾಧಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿವರಿಸಿದರು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa