ಕೊಪ್ಪಳ, 23 ಜುಲೈ (ಹಿ.ಸ.) :
ಆ್ಯಂಕರ್ : ಬಸಾಪೂರ ಕೆರೆಯನ್ನು ಬಲ್ಡೋಟಾ ಕಂಪನಿಯಿಂದ ತೆರವುಗೊಳಿಸದ ಕಾರಣ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯು ಜನಜಾನುವಾರು ಹೋರಾಟವನ್ನು ಬುಧವಾರ ನಡೆಸಿತು.
ಜಿಲ್ಲಾಡಳಿತದ ಅನುಮತಿ ಸಿಗದ ಕಾರಣ ಪ್ರತಿಭಟನಾಕಾರರು ಜಾನುವಾರುಗಳನ್ನು ಬಲ್ಡೋಟಾ ಆವರಣದ ಒಳಗಡೆ ಕಳುಹಿಸುವ ಮೂಲಕ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು.
ಕೊಪ್ಪಳ ತಾಲೂಕಿನ ಬಸಾಪೂರ ಗ್ರಾಮದ ಸ.ನಂ. 143ರ 44.35 ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆಯನ್ನು ಅತಿಕ್ರಮಿಸಿ, ಕಾಂಪೌಂಡ್ ನಿರ್ಮಿಸಿ, ರಸ್ತೆ ಬಂದ್ ಮಾಡಿರುವ ಬಲ್ದೋಟಾ ಕಂಪನಿ ಮೇಲೆ ಕ್ರಮ ಜರುಗಿಸಿ, ಕಂಪೌಂಡ್ ತೆರವುಗೊಳಿಸುವಂತೆ ಮನವಿ ಕೊಡಲಾಗಿತ್ತು, ಆದರೆ ತೆರವುಗೊಳಿಸದ ಜಿಲ್ಲಾಡಳಿತ ವಿರುದ್ಧ ಜನಜಾನುವಾರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬಸಾಪುರ ಗ್ರಾಮದ ಸ.ನಂ. 143ರ 44.35 ಎಕರೆ ಕೆರೆ (ತಲಾಬ) ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡಬೇಕು. ರಸ್ತೆ ಬಂದ್ ಮಾಡಿ, ನಿರ್ಮಿಸಿರುವ ಕಾಂಪೌಂಡ್ ತೆರವು ಮಾಡಬೇಕು. ಕೆರೆಯ ಏರಿಗೆ ನೇರವಾಗಿ ಮುಖ್ಯದ್ವಾರದ ಗೇಟ್ (ಆರ್ಚ್) ಅಳವಡಿಸಿ, ಕಂಪನಿಯ ಭಾರಿ ವಾಹನ ಟಿಪ್ಪರಗಳ ಓಡಾಡುತ್ತಿದ್ದು, ಜನ-ಜಾನುವಾರುಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಬಸಾಪುರ ಕೆರೆಯ ಪೂರ್ವ ಮತ್ತು ಉತ್ತರ ಭಾಗದಲ್ಲಿ 10-15 ಎಕರೆ ಕೆರೆಯನ್ನು ಮುಚ್ಚಿ ರಸ್ತೆ ಮಾಡಿರುವುದನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಜಿ. ಗೊಂಡಬಾಳ, ಶರಣುಗಡ್ಡಿ, ಮುದುಕಪ್ಪ ಹೊಸಮನಿ, ಎಸ್.ಎ. ಗಫಾರ್, ಭೀಮಸೇನ ಕಲಕೇರಿ, ಕನಕಪ್ಪ ಪೂಜಾರ, ಲಿಂಗರಾಜ ನವಲಿ, ಗಾಳೆಪ್ಪ ಮುಂಗೋಲಿ, ಮಂಗಳೇಶ ರಾಠೋಡ, ಕಾಶಪ್ಪ ಚಲುವಾದಿ, ಶರಣು ಶೆಟ್ಟರ್, ಮಂಜುನಾಥ ಕವಲೂರ, ಯಮನೂರಪ್ಪ ಹಾಲಳ್ಳಿ, ಪ್ರಕಾಶ ಎಂ, ಭೀಮಪ್ಪ, ಸುಂಕಪ್ಪ ಮೀಸಿ, ಶಿವಪ್ಪ ಹಡಪದ. ಹನುಮೇಶ, ಭರಮಪ್ಪ, ಮಾರುತಿ, ಯಮನೂರಪ್ಪ, ಮೂಕಪ್ಪ ಬಸಾಪೂರ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್