ಕೊಪ್ಪಳ, 23 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ಅಂಗಡಿಗಳ ಮಾಲೀಕರು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮತ್ತು ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು ಮಾಡಬಾರದು ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ರಸಗೊಬ್ಬರ ತೈಯಾರಕ ಕಂಪನಿಯ ಮಾರ್ಕೆಟಿಂಗ್ ಅಧಿಕಾರಿಗಳು, ಕರ್ನಾಟಕ ಮಾರ್ಕೆಟಿಂಗ್ ಫೆಡರೇಶನ್ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದ ಅಧಿಕಾರಿಗಳು ಹಾಗೂ ರಸಗೊಬ್ಬರ, ಕೀಟನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷರಿಗೆ ಕರೆದ ಸಭೆಯಲ್ಲಿ ಮಾತನಾಡಿದರು.
ರಸಗೊಬ್ಬರದ ಜೊತೆಗೆ ಜೈವಿಕ ಉತ್ತೇಜಕಗಳು, ಕೀಟನಾಶಕ ಹಾಗೂ ಉಪ ಪೋಷಕಾಂಶಗಳನ್ನು ಲಿಂಕ್ ಮಾಡಬಾರದು. ನಿಯಮಾನುಸಾರವೆ ಅವುಗಳ ಮಾರಾಟ ಮಾಡಬೇಕು. ನಾನು ಕನಕಗಿರಿ, ಕಾರಟಗಿ ಹಾಗೂ ಕುಷ್ಟಗಿ ಭಾಗದಲ್ಲಿ ಹೋದಾಗ ರೈತರು ಹೆಚ್ಚಿನ ಹಣ ಪಡೆದು ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದವು. ಹಾಗಾಗಿ ಯಾರು ನಿಯಮ ಬಿಟ್ಟು ಮಾರಾಟ ಮಾಡಬಾರದು ಎಂದು ಹೇಳಿದರು.
ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ರೈತರ ಬೇಡಿಕೆಯಂತೆ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ ಕಳೆದ ಒಂದು ವಾರದಲ್ಲಿ ಜಿಲ್ಲೆಗೆ 3150 ಮೇಟ್ರಿಕ್ ಟನ್ ಯೂರಿಯಾ ಬಂದಿದೆ. ಇನ್ನೂ ಒಂದು ವಾರದಲ್ಲಿ 5 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬರಲಿದೆ. ಜಿಲ್ಲೆಯ ರೈತರು ಯಾವುದೇ ಕಾರಣಕ್ಕೆ ಆತಂಕ ಪಟ್ಟು ರಸಗೊಬ್ಬರ ಸ್ಟಾಕ್ ಮಾಡಬಾರದು ಎಂದರು.
ನ್ಯಾನೋ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಬಳಕೆಗೆ ರೈತರು ಒತ್ತು ಕೊಡಬೇಕು. ಈ ಕುರಿತು ರಸಗೊಬ್ಬರ ಕಂಪನಿಯಗಳು ಕೃಷಿ ಇಲಾಖೆಯ ಜೊತೆಗೂಡಿ ರೈತರಿಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಕೆಲಸ ಮಾಡಬೇಕು. ಇನ್ನೂ ಬಹಳಷ್ಟು ರೈತರಿಗೆ ನ್ಯಾನೋ ಯೂರಿಯಾ ಹಾಗೂ ಡಿಎಪಿ ಉಪಯೋಗಿಸುವ ಕುರಿತು ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಅವರಿಗೆ ತಿಳಿ ಹೇಳಬೇಕೆಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ರಸಗೊಬ್ಬರ ತೈಯಾರಕ ಕಂಪನಿಯ ಮಾರ್ಕೆಟಿಂಗ್ ಅಧಿಕಾರಿಗಳು, ಕರ್ನಾಟಕ ಮಾರ್ಕೆಟಿಂಗ್ ಫೆಡರೇಶನ್ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದ ಅಧಿಕಾರಿಗಳು, ರಸಗೊಬ್ಬರ, ಕೀಟನಾಶಕಗಳ ಮಾರಾಟಗಾರರ ಸಂಘದ ಅಧ್ಯಕ್ಷರು ಸೇರಿದಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್