ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್‌ನವರು ಸೂಕ್ತ ಮಾರ್ಗದರ್ಶನ ನೀಡಲಿ : ಸಂಸದ ಬಸವರಾಜ ಬೊಮ್ಮಾಯಿ
ಗದಗ, 17 ಜುಲೈ (ಹಿ.ಸ.) : ಆ್ಯಂಕರ್ : ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್‌ನವರು ಸಾಲ ಒದಗಿಸುವಲ್ಲಿ ಸೂಕ್ತ ಕ್ರಮ ವಹಿಸಿ ಮಾರ್ಗದರ್ಶನ ನೀಡಬೇಕು. ಕೈಗಾರಿಕೆ ಕ್ಷೇತ್ರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಸಾಲ ನೀಡಿಕೆಯಾದರೆ ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಿ ಯ
ಪೋಟೋ


ಗದಗ, 17 ಜುಲೈ (ಹಿ.ಸ.) :

ಆ್ಯಂಕರ್ : ಸಣ್ಣ ಕೈಗಾರಿಕೆ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್‌ನವರು ಸಾಲ ಒದಗಿಸುವಲ್ಲಿ ಸೂಕ್ತ ಕ್ರಮ ವಹಿಸಿ ಮಾರ್ಗದರ್ಶನ ನೀಡಬೇಕು. ಕೈಗಾರಿಕೆ ಕ್ಷೇತ್ರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಸಾಲ ನೀಡಿಕೆಯಾದರೆ ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಿ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳೂ ಸಹ ಲಭಿಸಲಿವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್‌ದ ( ಡಿಸಿಸಿ ಮತ್ತು ಡಿಎಲ್‌ಆರ್‌ಸಿ) ಸಲಹಾ ಸಮಿತಿ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಬ್ಯಾಂಕ್ ನವರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದರೆ ಜಿಲ್ಲೆಯು ಶೀಘ್ರವಾಗಿ ಅಬಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಸಣ್ಣ ಕೈಗಾರಿಕೆ ಸೇರಿದಂತೆ ಕೈಗಾರಿಕೆ ಉದ್ದಿಮೆಗಳಿಗೆ ಬ್ಯಾಂಕ್‌ನವರು ಸಾಲ ನೀಡುವ ಪ್ರಕ್ರಿಯೆಯಲ್ಲಿ ಏನಾದರೂ ಸಮಸ್ಯೆಗಳೇನಾದರೂ ಎದುರಾದಲ್ಲಿ ಜಿಲ್ಲಾಡಳಿತ ಹಾಗೂ ಇಲಾಖೆಗಳೊಂದಿಗೆ ಸೂಕ್ತ ರೀತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರದಿಂದ ಜಾರಿಗೊಂಡಿರುವ ವಿವಿಧ ಜನಪರ ಯೋಜನೆಗಳ ಆರ್ಥಿಕ ಸೌಲಭ್ಯವನ್ನು ಬ್ಯಾಂಕ್‌ಗಳ ಮುಖಾಂತರ ನಿಗದಿತ ಕಾಲಮಿತಿಯಲ್ಲಿಯೇ ದೊರಕಿಸಿದರೆ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಬಡಜನರು ಹಾಗೂ ರೈತರಿಗೆ ಬ್ಯಾಂಕ್‌ನವರ ಸರಿಯಾದ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿದೆ‌ ಎಂದು ಹೇಳಿದರು.

ಗದಗ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ರೈತರಿಗೆ ಸಾಲ ನೀಡುವಾಗ ವಿನಾಕಾರಣ ವಿಳಂಬ ಮಾಡಬಾರದು. ಗದಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಪ್ರೋತ್ಸಾಹವಿದೆ. ಈ ನಿಟ್ಟಿನಲ್ಲಿ ಆಯಾ ಸಂಬಂಧಿತ ಇಲಾಖೆಯವರೊಂದಿಗೆ ಯೋಜನೆಯ ಅನುಷ್ಟಾನಕ್ಕೆ ಪೂರಕವಾಗುವಂತೆ ಸಭೆ ಜರುಗಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖಾಂತರ ಹಣ ಜಮೆಯಾಗುತ್ತಿದ್ದರೆ ಅಂತಹ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕ್‌ ನಿಂದ ಸಾಲ ನೀಡಿಕೆಯ ಹಣದೊಂದಿಗೆ ಹೊಂದಾಣಿಕೆ ಮಾಡಬಾರದು. ಬ್ಯಾಂಕ್‌ ನಿಂದ ಯೋಜನೆಗಳ ಸೌಲಭ್ಯ ಪಡೆಯವ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಂದಾಗ ವಿನಾ ಕಾರಣ ಅರ್ಜಿಯನ್ನು ತಿರಸ್ಕರಿಸದೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅರ್ಜಿಯನ್ನು ಸ್ವೀಕರಿಸಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಬ್ಯಾಂಕ್ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತಾಗಲಿ ಎಂದರು.

ಬ್ಯಾಂಕ್‌ನವರು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಿದರೆ ಯೊಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಕೃಷಿ ಕ್ಷೇತ್ರಕ್ಕೆ ಸಾಲ ನೀಡಿಕೆಗೆ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದ ಸಂಸದವರು ( ಎಂಎಸ್‌ಎಂಇ ) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕೆಂದು ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ, ಬ್ಯಾಂಕ್ ನವರಿಗೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಿಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದರೆ ಜಿಲ್ಲಾಡಳಿತ ಮತ್ತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ ಮಾತನಾಡಿ, ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್‌ನ 182 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಜೂನ್ 2025 ರ ಅಂತ್ಯಕ್ಕೆ ಸಾಲ ಠೇವಣಿ ಅನುಪಾತ 98.16 % ಆಗಿರುತ್ತದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲ ಯೋಜನೆಯಡಿ 30-6-2025 ರವರೆಗೆ ಕೃಷಿ ವಲಯಕ್ಕೆ 85461.97 ಲಕ್ಷ ರೂ ಸಾಲ ನೀಡಿಕೆಯಾಗಿದೆ. ತಾಲೂಕಾವಾರು ವಿವರ ಇಂತಿದೆ ( ಲಕ್ಷ ರೂ.ಗಳಲ್ಲಿ) : ಗದಗ – 31186.12 ರೂ, ಗಜೇಂದ್ರಗಡ- 5260.25, ಲಕ್ಷ್ಮೇಶ್ವರ- 5005.72 , ಮುಂಡರಗಿ-7612.03, ನರಗುಂದ- 11916.55 ರೂ, ರೋಣ- 16473.70 ರೂ, ಶಿರಹಟ್ಟಿ -8007.60 ಸಾಲ ನೀಡಿಕೆಯಾಗಿದೆ ಎಂದರು.

ಕೃಷಿ, ಎಂಎಸ್‌ಎಂಇ, ಶಿಕ್ಷಣ, ಹೌಸಿಂಗ್, ಇತರೆ ಸೇರಿದಂತೆ ಆದ್ಯತಾ ವಲಯಕ್ಕೆ 128065.08 ಲಕ್ಷ ರೂ. ಸಾಲ ನೀಡಿಕೆಯಾಗಿದೆ. ತಾಲೂಕಾವಾರು ವಿವರ ಇಂತಿದೆ (ಲಕ್ಷ ಗಳಲ್ಲಿ) ಗದಗ –58450.64 , ಗಜೇಂದ್ರಗಡ-6786.15, ಲಕ್ಷ್ಮೇಶ್ವರ– 7076.77, ಮುಂಡರಗಿ- 10236.22, ನರಗುಂದ-16310.93, ರೋಣ-19382.60 ಶಿರಹಟ್ಟಿ- 9821.77 ಸಾಲ ನೀಡಿಕೆಯಾಗಿದೆ ಎಂದು ಮಾಹಿತಿ‌ ನೀಡಿದರು.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಶಿಶು ಯೋಜನೆಯಲ್ಲಿ 38696 ಅರ್ಜಿಗಳು ಸ್ವೀಕರಿಸಿ 8142 ಲಕ್ಷ ರೂ, ಕಿಶೋರ ಯೋಜನೆಯಡಿ 33748 ಅರ್ಜಿಗಳು ಸ್ವೀಕರಿಸಿ 31742.94 ಲಕ್ಷ ರೂ. ಹಾಗೂ ತರುಣ ಯೋಜನೆಯಡಿ 1796 ಅರ್ಜಿಗಳನ್ನು ಸ್ವೀಕರಿಸಿ 10935.22 ಲಕ್ಷ ರೂ. ವಿತರಿಸಲಾಗಿದೆ ಎಂದು ಸಭೆಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಅವರು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಉದ್ಯೊಗಿನಿ, ಪಿಎಂಇಜಿಪಿ (ಪ್ರೈಮ್ ಮಿನಿಸ್ಟರ್ ಎಂಪ್ಲಾಯಮೆಂಟ್ ಜನರೇಶನ್ ಪ್ರೋಗ್ರಾಮ್), ಪಿಎಂ ಸ್ವನಿಧಿ, ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶಿಲನೆ ನಡಸಲಾಯಿತು.

ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ / ಜಿಲ್ಲಾ ಸಾಲ ಯೋಜನೆ ( ಎಸಿಪಿ/ಡಿಸಿಪಿ ) ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿಸಿ.ಎನ್.ಶ್ರೀಧರ್, ಎಸ್.ಬಿ.ಐ ಆರ್.ಬಿ.ಓ ಪ್ರಾದೇಶಿಕ ವ್ಯವಸ್ಥಾಪಕ ನಾಗಸುಬ್ಬಾ ರೆಡ್ಡಿ ಬಿ, ಆರ್.ಬಿ.ಐ ದ ಎಜಿಎಂ (ಎಲ್.ಡಿ.ಓ) ಸೂರಜ್ ಎಸ್, ನಬಾರ್ಡ ದ ಎ.ಜಿ.ಎಂ.( ಡಿ.ಡಿ.ಎಂ) ಮಯೂರ ಕಾಂಬಳೆ, ಜಿ.ಪಂ. ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ್ರ ಕೊಟ್ಟೂರ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ಜಿ.ಪಂ. ಯೋಜನಾಧಿಕಾರಿ ಚಳಗೇರಿ, ಮಹಿಳಾ ಮತ್ತು ಮಕ್ಕಳ ಇಲಾಖೆ ನಿರುಪಣಾಧಿಕಾರಿ ರಾಧಾ ಮಣ್ಣೂರ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande