ಬಳ್ಳಾರಿ, 16 ಜುಲೈ (ಹಿ.ಸ.) :
ಆ್ಯಂಕರ್ : ಸುರಕ್ಷತೆ, ಭದ್ರತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಕೌಶಲ್ಯಗಳನ್ನು ಹೆಚ್ಚಿಸಲು ಐಯುಎಸಿ (ಅಂತರ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ)ಯು ವಿನೂತನ ಸಂಶೋಧನಾ ಮಾರ್ಗಗಳಿಗೆ ಶ್ರಮಿಸುತ್ತಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಂ.ಟಿ. ಲಗಾರೆ ಅವರು ತಿಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಅಂತತವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ `ಐಯುಎಸಿ ಪರಿಚಯ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಐಯುಎಸಿ ನಲ್ಲಿರುವ ಪೆಲ್ಲೆಟ್ರಾನ್ ವೇಗವರ್ಧಕ ಪ್ರಯೋಗಾಲಯವು 1991 ರಿಂದ ಕಾರ್ಯನಿರ್ವಹಿಸುತ್ತಿದೆ. ನಂತರ ಭಾರತ ಮತ್ತು ವಿದೇಶಗಳಿಂದ 400 ಕ್ಕೂ ಹೆಚ್ಚು ಬಳಕೆದಾರರಿಗೆ ಆಯಾನ್ ಕಿರಣಗಳನ್ನು ಒದಗಿಸುತ್ತಿದೆ. ವೇಗವರ್ಧಕ ಭೌತಶಾಸ್ತ್ರವು ಕಣ ವೇಗವರ್ಧಕಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸಿದ ಭೌತಶಾಸ್ತ್ರದ ವಿಶೇಷ ಕ್ಷೇತ್ರವಾಗಿದ್ದು, ಇದರ ಜೊತೆಯಲ್ಲೆ ಪರಮಾಣು ಭೌತಶಾಸ್ತ್ರವು ಪರಮಾಣು ನ್ಯೂಕ್ಲಿಯರ್ಸ್ಗಳ ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮೂಲಭೂತ ಶಕ್ತಿಗಳು ಮತ್ತು ಅವುಗಳಿಗೆ ಒಳಗಾಗುವ ಪ್ರತಿಕ್ರಿಯೆಗಳು, ವಿಕಿರಣಶೀಲ ಕೊಳೆತ, ವಿದಳನ ಮತ್ತು ಸಮ್ಮಿಳನಗಳನ್ನು ನೀಡುತ್ತವೆ. ಇವುಗಳ ಹೆಚ್ಚಿನ ಅಧ್ಯಯನಕ್ಕೆ ಹಾಗೂ ಸಂಶೋಧನೆಗೆ ಐಯುಎಸಿ ಕೇಂದ್ರವು ವೇದಿಕೆಯಾಗಿದೆ ಎಂದು ತಿಳಿಸಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿಜ್ಞಾನದ ಎಲ್ಲ ಕ್ಷೇತ್ರವು ಭೌತಶಾಸ್ತ್ರದ ಮೇಲೆ ಅವಲಂಬನೆಯಾಗಿದೆ. ವಿಶ್ವವಿದ್ಯಾಲಯದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ನಿರ್ಮಿಸಲಾಗುವುದು ಎಂದರು.
ನವದೆಹಲಿಯ ಐಯುಎಸಿ ವಿಜ್ಞಾನಿ ಹಾಗೂ ಪ್ರೋಗ್ರಾಂ ಲೀಡರ್ ಡಾ. ಫೌರನ ಸಿಂಗ್ ಅವರು, ವೇಗವರ್ಧಕ ಮಾಸ್ ಸ್ಪೆಕ್ಟ್ರೋಮೆಟ್ರಿ ಮತ್ತು ಭೂಕಾಲಗಣನೆಯ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಮೊದಲನೆ ಕೇಂದ್ರವಾಗಿ ಐಯುಎಸಿ ಕಾರ್ಯನಿರ್ವವಹಿಸುತ್ತಿದೆ. ಈ ಕೇಂದ್ರದ ಪ್ರಯೋಜನ ಪಡೆಯಲು ಯುವ ಸಂಶೋಧಕರು ಹೊಸ ಸಂಶೋಧನೆಗಳೊಂದಿಗೆ ಬರಬೇಕು ಎಂದು ಕರೆ ನೀಡಿದರು.
ಐಯುಎಸಿ ಕೇಂದ್ರದ ವಿಜ್ಞಾನಿ ಹಾಗೂ ಕೇಂದ್ರದ ಸಂಚಾಲಕರಾದ ರಾಜೀವ್ ಮೆಹ್ತಾ ಅವರು, ಅಂತರ ವಿಶ್ವವಿದ್ಯಾಲಯ ವೇಗವರ್ಧಕ ಕೇಂದ್ರವು ಅತ್ಯಾಧುನಿಕ ಸಂಶೋಧನೆ ನಡೆಸಲು ಅಗತ್ಯವಿರುವ ಆಧುನಿಕ ಉಪಕರಣಗಳೊಂದಿಗೆ ವಿಜ್ಞಾನ ಸಮುದಾಯಕ್ಕೆ ಅನುಕೂಲವಾಗುವಂತೆ ನಿರ್ಮಿತವಾಗಿದೆ. ಅಲ್ಲದೇ, ಕೇಂದ್ರವು 400 ಅಂಗ ಸಂಸ್ಥೆಗಳನ್ನು, 1200 ಸಂಶೋಧನಾ ವಿದ್ಯಾರ್ಥಿಗಳನ್ನು ಹೊಂದಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎ.ಪಿ. ಜ್ಞಾನಪ್ರಕಾಶ ಅವರು, ಉನ್ನತ ಮಟ್ಟದ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಐಯುಎಸಿ ಹೊಂದಿದೆ. ವಿಎಸ್ಕೆಯುನಲ್ಲಿ ಭೌತಶಾಸ್ತ್ರ ವಿಭಾಗವು ಹಲವು ವೈವಿಧ್ಯತೆಗಳನ್ನು ಹೊಂದಿದ್ದು, ರಾಜ್ಯದಲ್ಲಿನ ಉಳಿದ ವಿವಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯಗಳ 100ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್.ಎಂ.ಸಾಲಿ, ವಿವಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ತಿಪ್ಪೇರುದ್ರಪ್ಪ ಜೆ, ಡಾ. ಕೊಟ್ರೇಶ್ ಎಂ.ಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್