ಗದಗ, 09 ಜೂನ್ (ಹಿ.ಸ.) :
ಆ್ಯಂಕರ್ : ನಾಡಿನ ಹಿರಿಯ ಸ್ವಾಮಿಗಳು, ಚಿಂತಕರು, ಸಾಹಿತಿಗಳಾದ ನಾಡೋಜ ಡಾ. ಅನ್ನದಾನೀಶ್ವರ ಪೂಜ್ಯರ ಆದರ್ಶಗಳು, ಚಿಂತನೆಗಳು ಕಿರಿಯ ಸ್ವಾಮೀಜಿಗಳಿಗೆ ಮಾದರಿ ಎಂದು ಅವ್ವ ಸೇವಾ ಟ್ರಸ್ಟನ ಗದಗಜಿಲ್ಲಾ ಸಂಚಾಲಕರಾದ ಡಾ.ಬಸವರಾಜ ಧಾರವಾಡ ಅಭಿಪ್ರಾಯಪಟ್ಟರು.
ಗದಗ ಜಿಲ್ಲೆಯ ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ದಿನಾಂಕ 11 ರಂದು ನಡೆಯುವ ಅವ್ವನ ಕುರಿತು ವಿಷೇಶ ಶಿವಾನುಭವ, ಪ್ರತಿಭಾಪುರಸ್ಕಾರ ಹಾಗೂ ವಿದಾಯಕ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಜ.ಅನ್ನದಾನೀಶ್ವರ ವಿದ್ಯಾಸಮಿತಿ ಶತಮಾನದ ಹಿರಿಮೆಯನ್ನು ಹೊಂದಿಗೆ ಆರು ದಶಕಗಳಿಗೂ ಹೆಚ್ಚು ಕಾಲ ಶ್ರೀಮಠದ ಸೇವಾ ಕೈಂಕರ್ಯಗಳಲ್ಲಿ ಪ್ರಸ್ತುತ ಪೂಜ್ಯ ಶ್ರೀಗಳು ತಮ್ಮನ್ನು ಅಳವಡಿಸಿಕೊಂಡಿದ್ದಾರೆ.
ಅವರ ಆದರ್ಶ ಚಿಂತನೆಗಳು ಪ್ರಸ್ತುತ ಕಿರಿಯ ಶ್ರೀಗಳಿಗೆ ಮಾದರಿ. ಸ್ವತಃ ಶ್ರೀಗಳು 160ಕ್ಕೂ ಹೆಚ್ಚು ಪ್ರಕಾರಗಳ ಗ್ರಂಥಗಳನ್ನು ರಚನೆ ಮಾಡಿ ನಾಡಿಗೆ ನೀಡಿದ್ದಾರೆ. 270ಕ್ಕೂ ಹೆಚ್ಚು ಗ್ರಂಥಗಳ ಮುದ್ರಣಕ್ಕೆ ಸಹಕರಿಸಿ ಸಾಹಿತಿಗಳಿಗೆ ಬರಹಗಾರರ ಬೆನ್ನು ತಟ್ಟಿದ್ದಾರೆ. ಶ್ರೀಮಠದ ಬೆಲೆ ಬಾಳುವ ಜಮೀನನ್ನು ಸಂಘ ಸಂಸ್ಥೆಗಳಿಗೆ ನೀಡುವ ಮೂಲಕ ಅವರುಗಳಿಗೆ ಸ್ವಂತ ಸೂರನ್ನು ಕಲ್ಪಿಸಿ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಹೋಗಲು ಪ್ರೋತ್ಸಾಹಿಸಿದ್ದಾರೆ.
ಯಾವುದೇ ಫಲಾಪೇಕ್ಷೆ ಇಲ್ಲದೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನ ಗಮನದಲ್ಲಿಟ್ಟುಕೊಂಡು ಹಳ್ಳಿ ಹಳ್ಳಿಗಳಲ್ಲಿ 33 ಶಾಲಾ ಕಾಲೇಜುಗಳನ್ನು ತೆರೆಯುವ ಮೂಲಕ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸಿದ್ದಾರೆ. ಇಂತಹ ಶ್ರೀಗಳ ನಡೆ,ನುಡಿ, ಆಚಾರಗಳು ಅವರ ಸಮಾಜಮುಖಿ ಕಳಕಳಿ ಇಂದಿನ ಕಿರಿಯ ಶ್ರೀಗಳಿಗೆ ಮಾದರಿ.ಇತ್ತೀಚೆಗೆ ಜಾತಿಗೊಂದು ಮಠ ಸ್ಥಾಪಿಸುವ ಮೂಲಕ ಅವುಗಳ ನೇತ್ರತ್ವ ವಹಿಸಿಕೊಂಡಂತಹ ಕಿರಿಯ ಸ್ವಾಮಿಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಅವರ ವೈಭವೋಪೇತ ದೈನಂದಿನ ಜೀವನ ಅಧ್ಯಯನಶೀಲದ ಕೊರತೆ ಆಚಾರ ವಿಚಾರಗಳ ಚೌಕಟ್ಟನ್ನು ಮೀರಿ ನಡೆದುಕೊಳ್ಳುವ ರೀತಿಗಳು ಇತ್ತೀಚಿನ ಕೆಲ ಶ್ರೀಗಳ ನಡೆಗಳಿಂದ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ನೋವಿನ ಸಂಗತಿ. ಇವರುಗಳಿಗೆ ಇಂತಹ ಹಿರಿಯ ಶ್ರೀಗಳ ಮಾರ್ಗದರ್ಶನ ಅತ್ಯವಶ್ಯವಿದೆ. ಅವರ ಆದರ್ಶಗಳನ್ನು ಇಂದಿನ ಕಿರಿಯ ಶ್ರೀಗಳು ಅಳವಡಿಸಿಕೊಂಡರೆ ಮಠಮಂದಿರಗಳ ಮೇಲೆ ಸಮಾಜ ಇಟ್ಟಂತಹ ವಿಶ್ವಾಸ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದರು. 11ರ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಸವಿಸ್ತಾರವಾಗಿ ಸಭೆಯ ಗಮನ ಸೆಳೆದರು.
ಸಾನಿಧ್ಯ ವಹಿಸಿದ ಶ್ರೀಗಳು ಮಾತನಾಡಿ 11ರಂದು ನಡೆಯುವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಬೇಕು. ಯಾವುದಕ್ಕೂ ಕೊರತೆಯಾಗದಂತೆ ಶ್ರೀಮಠ ನೋಡಿಕೊಳ್ಳುತ್ತದೆ. ಹಿರಿಯರನ್ನು ಗೌರವಿಸುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಕೂಡ ವಿಶೇಷವಾಗಿ ನಡೆಯಲಿದೆ ಎಂದು
ಹೇಳಿದರು.
ಶ್ರಿ ಜ.ಅ.ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ, ಎಸ್.ಎಂ.ಅಗಡಿ, ಎಸ್.ಎಸ್.ಗಡ್ಡದ, ಎಂ.ಎಚ್.ಪೂಜಾರ, ಎಸ್.ಜಿ.ಕೋಲ್ಮಿ, ಎಸ್.ಬಿ.ಗಿಂಡಿಮಠ, ಹಾಲಯ್ಯ ಹಿರೇಮಠ, ಕೊಟ್ರಯ್ಯ ಹಿರೇಮಠ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP