ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ನಿರಂತರ ಮಳೆಯಿಂದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಮೂಲಗಳ ಸುರಕ್ಷತೆಯು ಸಾರ್ವಜನಿಕರ ಆದ್ಯತೆಯೂ ಆಗಿದ್ದು, ಜನರು ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ಬಾಬು ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ ಗೌತಮ್ ನಗರ ಕೊಳಚೆ ಪ್ರದೇಶಕ್ಕೆ ಭೇಟಿ-ಜಾಗೃತಿಯಲ್ಲಿ ಅವರು ಮಾತನಾಡಿದರು.
ಕಲುಷಿತ ನೀರು ಮತ್ತು ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಟೈಫಾಯಿಡ್, ಕಾಲಾರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತವೆ. ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಕುಡಿಯುವ ನೀರಿನ ಮೂಲಗಳು ಕಲುಷಿತವಾಗುವ ಸಾಧ್ಯತೆ ಇರುತ್ತವೆ ಎಂದರು.
ಮನೆಯ ಮುಂದೆ ನಳದ ಪೈಪ್ಗಳು ತಗ್ಗಿನಲ್ಲಿ ಕಂಡುಬರುತ್ತಿದ್ದು, ಇದರಿಂದ ಅನಗತ್ಯ ನೀರು ಸಂಗ್ರಹವಾಗಿ ಪುನಃ ನೀರಿನ ಪೈಪ್ಗಳಲ್ಲಿ ವಾಪಾಸ್ಸು ಹೋಗುವ ಮೂಲಕ ನೀರು ಕಲುಷಿತವಾಗುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ನಳದ ಪೈಪ್ಗಳು ಮನೆಯ ಮುಂದೆ ನೆಲದ ಮೇಲ್ಮಟ್ಟದಲ್ಲಿ ಇರುವಂತೆ ಜಾಗೃತೆ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಿಲ್ಲಾ ಕಾಲಾರ ನಿಯಂತ್ರಣ ತಂಡ ಈಗಾಗಲೇ ನಿರಂತರವಾಗಿ ನೀರಿನ ಮೂಲಗಳ ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಂದ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
*ಓಆರ್ಎಸ್ ಜೀವಜಲ ಬಳಕೆ:*
ವಾಂತಿಭೇದಿ ಉಂಟಾದ ಸಂದರ್ಭದಲ್ಲಿ ದೇಹದ ನಿರ್ಜಲೀಕರಣ ತಡೆಯಲು ಓಆರ್ಎಸ್ ಜೀವಜಲ ದ್ರಾವಣವು ಅತ್ಯಂತ ಪರಿಣಾಕಾರಿಯಾಗಿದ್ದು, ಒಂದು ಲೀಟರ್ ನೀರಿಗೆ ಸಂಪೂರ್ಣ ಒಂದು ಪೊಟ್ಟಣದ ಪುಡಿಯನ್ನು ಸ್ವಚ್ಚವಾದ ಪಾತ್ರೆಯಲ್ಲಿ ಹಾಕುವ ಮೂಲಕ ದ್ರಾವಣ ತಯಾರಿಸಿ ಒಂದು ದಿನದ ಒಳಗಡೆ ಜೀವಜಲ ದ್ರಾವಣ ಕುಡಿಯುವ ಮೂಲಕ ಖಾಲಿ ಮಾಡಬೇಕು. 24 ಗಂಟೆಗಳ ನಂತರ ಪುನಃ ಬಳಸಬಾರದು ಎಂದು ವಿವರವಾಗಿ ತಿಳಿಸಿದರು.
ಗೌತಮ್ ನಗರ ಬಡಾವಣೆಯ ನಮ್ಮ ಕ್ಲಿನಿಕ್ ವೈದ್ಯರಾದ ಡಾ.ಸ್ಯಾಮುವೆಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಹೆಚ್ಐಒ ದುರ್ಗಾಪ್ರಸಾದ್, ಯೋಗಾನಂದ, ಆಶಾಕಾರ್ಯಕರ್ತೆ ಸಾಜಿಯಾ, ಗೀತಾ, ಸುಮಿತ್ರ, ವೀರಭದ್ರ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್