ರಾಯಚೂರು, 09 ಜೂನ್ (ಹಿ.ಸ.) :
ಆ್ಯಂಕರ್ : ಭಾರತೀಯ ಸೇನೆಯ ಅಧಿಕಾರಿಗಳಾದ ಮೇಜರ್ ಬಸವ ಪ್ರಭು ಹಾಗೂ ಸಂಜೀವ್ ಸಾಧುನವರ್ ಅವರ ನೇತೃತ್ವದ ತಂಡವು, ರಾಯಚೂರ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳಿಗೆ ಇತ್ತೀಚಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹಮಾಮಾನ ಇಲಾಖೆ ವರದಿ ನೀಡಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಂಡವು ಈ ಕಾರ್ಯಕ್ರಮ ನಡೆಸಿತು.
ರಾಯಚೂರಿನ ತಾಲೂಕಿನ ಆತ್ಮರು, ಕುರ್ವಕರ್ದಾ, ಕುರ್ವಕಲಾ, ದೊಂಗರಾಂಪುರ, ಕಾಡೂರು ಹಾಗೂ ಗುರ್ಜಾಪೂರ, ಗುರ್ಜಾಪೂರ ಬ್ರಿಡ್ಜ್ ಕಮ್ ಬ್ಯಾರೇಜ ಹಾಗೂ ದೇವದುರ್ಗ ತಾಲೂಕಿನ ಅಪ್ರಾಳ, ಬಸವಂತಪುರ, ಹಿರೇರಾಯಕುಂಪಿ, ಚಿಕ್ಕರಾಯಕುಂಪಿ, ಗೂಗಲ್, ಗೂಗಲ್ ಬ್ರಿಡ್ಜ್ ಕಮ್ ಬ್ಯಾರೇಜ್ ಸೇರಿದಂತೆ ಶಕ್ತಿನಗರದ ಹೆಲಿಪ್ಯಾಡ್ ಈ ಎಲ್ಲಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ರಾಯಚೂರಿನ ಅಗ್ನಿಶಾಮಕ ದಳದ ಕಚೇರಿಗೆ ಭೇಟಿ ನೀಡಿ ಪ್ರವಾಹದ ಸಂದರ್ಭದಲ್ಲಿ ಉಪಯೋಗಿಸುವ ರಕ್ಷಣಾ ಸಾಮಗ್ರಿಗಳ ಬಗ್ಗೆ ಪರಿಶೀಲನೆ ನಡೆಸಿ, ಒಂದು ವೇಳೆ ಪ್ರವಾಹದ ಬಂದಲ್ಲಿ ಸಕಲ ರೀತಿಯಲ್ಲಿ ಸಜ್ಜಾಗಿರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೇನಾ ಅಧಿಕಾರಿ ಅಭಯ ಕುಮಾರ್ ಹಾಗೂ ಸಂಜೀವ್ ಸಾಧುನವರ್ ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಹಾಗೂ ದೇವದುರ್ಗ ತಾಲೂಕಿನ ತಹಶೀಲ್ದಾರರು, ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ವಿಪತ್ತು ಪರಿಣಿತರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್