ಕೊಪ್ಪಳ, 27 ಜೂನ್ (ಹಿ.ಸ.) :
ಆ್ಯಂಕರ್ : ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಸುರಕ್ಷಿತಗೊಳಿಸಲು ಹಾಗೂ ಸುಳ್ಳು ದಾಖಲೆ ಸೃಷ್ಠಿಸುವುದನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೂ ಒಟ್ಟು 73,07,700 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನಲ್ಲಿ ಒಟ್ಟು 37,994 ಕಡತಗಳಲ್ಲಿ(ಫೈಲ್) 13,869 ಕಡತಗಳ 9,77,904 ಪುಟಗಳನ್ನು ಹಾಗೂ ಒಟ್ಟು 11,684 ವಹಿಗಳಲ್ಲಿ(ರಿಜಿಸ್ಟರ್) 2,882 ವಹಿಗಳ 45,679 ಪುಟಗಳು ಸೇರಿದಂತೆ ಒಟ್ಟು 10,23,583 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ಒಟ್ಟು 48,375 ಕಡತಗಳಲ್ಲಿ 40,857 ಕಡತಗಳ 14,69,295 ಪುಟಗಳನ್ನು ಹಾಗೂ ಒಟ್ಟು 5,321 ವಹಿಗಳಲ್ಲಿ 499 ವಹಿಗಳ 60,151 ಪುಟಗಳು ಸೇರಿದಂತೆ ಒಟ್ಟು 15,29,446 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಕುಕನೂರು ತಾಲ್ಲೂಕಿನಲ್ಲಿ ಒಟ್ಟು 25,000 ಕಡತಗಳಲ್ಲಿ 19,471 ಕಡತಗಳ 2,79,881 ಪುಟಗಳನ್ನು ಹಾಗೂ ಒಟ್ಟು 5,000 ವಹಿಗಳಲ್ಲಿ 911 ವಹಿಗಳ 2,06,002 ಪುಟಗಳು ಸೇರಿದಂತೆ ಒಟ್ಟು 4,85,883 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಕನಕಗಿರಿ ತಾಲ್ಲೂಕಿನಲ್ಲಿ ಒಟ್ಟು 26,300 ಕಡತಗಳಲ್ಲಿ 18,402 ಕಡತಗಳ 4,53,988 ಪುಟಗಳನ್ನು ಹಾಗೂ ಒಟ್ಟು 3,200 ವಹಿಗಳಲ್ಲಿ 1,823 ವಹಿಗಳ 3,67,942 ಪುಟಗಳು ಸೇರಿದಂತೆ ಒಟ್ಟು 8,21,930 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ ಒಟ್ಟು 54,300 ಕಡತಗಳಲ್ಲಿ 36,641 ಕಡತಗಳ 9,05,242 ಪುಟಗಳನ್ನು ಹಾಗೂ ಒಟ್ಟು 1,949 ವಹಿಗಳಲ್ಲಿ 708 ವಹಿಗಳ 1,67,654 ಪುಟಗಳು ಸೇರಿದಂತೆ ಒಟ್ಟು 10,72,896 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ಒಟ್ಟು 34,572 ಕಡತಗಳಲ್ಲಿ 16,138 ಕಡತಗಳ 4,45,141 ಪುಟಗಳನ್ನು ಹಾಗೂ ಒಟ್ಟು 3,083 ವಹಿಗಳಲ್ಲಿ 2,104 ವಹಿಗಳ 4,58,374 ಪುಟಗಳು ಸೇರಿದಂತೆ ಒಟ್ಟು 9,03,488 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಒಟ್ಟು 2,26,491 ಕಡತಗಳಲ್ಲಿ 1,45,378 ಕಡತಗಳ 45,31,451 ಪುಟಗಳು ಹಾಗೂ ಒಟ್ಟು 30,237 ವಹಿಗಳಲ್ಲಿ 8,927 ವಹಿಗಳ 13,05,775 ಪುಟಗಳು ಸೇರಿದಂತೆ ಒಟ್ಟು 58,37,226 ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಬಾಕಿ ಉಳಿದ ಕಡತಗಳು ಹಾಗೂ ವಹಿಗಳ ಡಿಜಿಟಲೀಕರಣ ಕಾರ್ಯವು ಪ್ರಗತಿಯಲ್ಲಿದೆ.
ಜಿಲ್ಲೆಯ ಕಾರಟಗಿಯನ್ನು ಸರ್ಕಾರವು 2024 ರಲ್ಲಿ ತಾಲ್ಲೂಕನ್ನಾಗಿ ಪರಿಗಣಿಸಿ ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಆದೇಶ ನೀಡಿತ್ತು. ಅದರಂತೆ ರಾಜ್ಯದಲ್ಲಿ ಮೊದಲನೆಯದಾಗಿ ಕಾರಟಗಿ ತಾಲ್ಲೂಕಿನ ಎಲ್ಲಾ ದಾಖಲೆಗಳ ಡಿಜಿಟಲೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿರುತ್ತದೆ. ಕಾರಟಗಿ ತಾಲ್ಲೂಕಿನ ಒಟ್ಟು 42,688 ಕಡತಗಳ 7,95,700 ಪುಟಗಳು ಹಾಗೂ ಒಟ್ಟು 4,361 ವಹಿಗಳ 6,74,774 ಪುಟಗಳು ಸೇರಿದಂತೆ ಒಟ್ಟು 14,70,474 ಪುಟಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಾದ್ಯಂತ ಈವರೆಗೆ ಎಲ್ಲ ತಾಲ್ಲೂಕುಗಳ ಒಟ್ಟು 73,07,700 ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಯೋಜನೆಯ ಭಾಗವಾಗಿ ಉಳಿದ ತಾಲ್ಲೂಕುಗಳಿಗೆ ಜನವರಿ 2025 ರಿಂದ ಆ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕಾರ್ಯವನ್ನು ಉದ್ಘಾಟಿಸಲಾಗಿದ್ದು, ಡಿಜಿಟಲೀಕರಣಗೊಂಡ ಕಡತಗಳು ಮತ್ತು ವಹಿಗಳಲ್ಲಿನ ದಾಖಲೆಗಳ ನಕಲುಗಳನ್ನು 2025 ರ ಜುಲೈ 01 ರಿಂದ ಕಡ್ಡಾಯವಾಗಿ ಡಿಜಿಟಲ್ ಮಾದರಿಯಲ್ಲಿ ತಾಲ್ಲೂಕುವಾರು ತಹಶೀಲ್ದಾರ ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ರೆಕಾರ್ಡ್ ರೂಂ ನ ತಂತ್ರಾಂಶದ ಮೂಲಕವೇ ಡಿಜಿಟಲ್ ದಾಖಲೆಯನ್ನು ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯನ್ನು ಪ್ರಾರಂಭಿಸುವಂತೆ ಕಂದಾಯ ಆಯುಕ್ತಾಲಯ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಿದೆ.
ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಡಿಜಿಟಲ್ ದಾಖಲೆಯನ್ನು ನೀಡುವ ಕಾರ್ಯವನ್ನು ಪ್ರಾರಂಭಿಸಿದ್ದು, ಈವರೆಗೆ ಡಿಜಿಟಲೀಕರಣಗೊಂಡ ಕಡತಗಳು ಮತ್ತು ವಹಿಗಳಲ್ಲಿನ ದಾಖಲೆಗಳ ನಕಲುಗಳನ್ನು ಸಾರ್ವಜನಿಕರು ಅಭಿಲೇಖಾಲಯದ https://recordroom.karnataka.gov.in/ERECORDROOM/ ತಂತ್ರಾಂಶದ ಮೂಲಕ ನಿಗದಿತ ಶುಲ್ಕ ಪಾವತಿಸಿ ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದರೊಂದಿಗೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್