ಕೊಪ್ಪಳ, 27 ಜೂನ್ (ಹಿ.ಸ.) :
ಆ್ಯಂಕರ್ : ಜನರ ಆರ್ಶಿವಾದದಿಂದ 2024ರ ಜೂನ್ನಲ್ಲಿ ಸಂಸದನಾಗಿ ಆಯ್ಕೆಯಾದ ನಂತರ ಕೊಪ್ಪಳ ಲೋಕ ಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದ್ದಾರೆ.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವದಲ್ಲಿರುವ ಲೋಕಸಭಾ ಸದಸ್ಯರ ಕಛೇರಿಯಲ್ಲಿ ತಾವು ಸಂಸದರಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎನ್.ಹೆಚ್.ಎ.ಐ ರಸ್ತೆಗಳಲ್ಲಿ ಕೆಲವು ಸಮಸ್ಯೆಗಳಿದ್ದು, ವಿಶೇಷವಾಗಿ ಎನ್.ಹೆಚ್-50ರಲ್ಲಿ ಟೋಲ್ಗೇಟ್ ನಿಂದ ಟನಲ್ ಬಳಿ ಬಹಳಷ್ಟು ಅಪಘಾತಗಳಾಗುತ್ತಿದ್ದವು. ಇದರಿಂದ ಪ್ರತಿವರ್ಷ 100 ಜನರ ಸಾವು ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ತಡೆಯಲು ಓವರ್ ಬ್ರಿಡ್ಜ್ ಮಾಡಬೇಕೆಂದು ಮಾಜಿ ಸಂಸದರಾದ ಕರಡಿ ಸಂಗಣ್ಣನವರು ಪ್ರಯತ್ನ ಮಾಡಿದ್ದರು. ನಾನು ಸಂಸದನಾದ ನಂತರ ಟೆಂಡರ್ ಮಾಡಿಸಿ, ಹೊಸಲಿಂಗಾಪುರ ಕ್ರಾಸ್, ಹೊಸಳ್ಳಿ ಕ್ರಾಸ್, ಹಿಟ್ನಾಳ್ ಕ್ರಾಸ್ ಮೆತಗಲ್ ಕ್ರಾಸ್ ಸೇರಿದಂತೆ ರೂ. 1190 ಲಕ್ಷಗಳ ಅನುದಾನದಲ್ಲಿ ನಾಲ್ಕು ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಪ್ರಸ್ತುತ ಅಪಘಾತ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದ್ದು, ರಸ್ತೆ ಅಪಘಾತ ಪ್ರಮಾಣವನ್ನು ಶೂನ್ಯಕ್ಕೆ ತರುವ ಪ್ರಯತ್ನ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ವೇಗ ನಿಯಂತ್ರಣ ಮಾಡಲು ಸೆಕ್ಯೂರಿಟಿ ಸಿಸ್ಟಮ್ & ಸಿಸಿ ಟಿವಿ ಅಳವಡಿಕೆಗಾಗಿ ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದು, ಇದಕ್ಕಾಗಿ ರೂ. 2 ಕೋಟಿಗಳನ್ನು ಮಂಜೂರು ಮಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ. ಈ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಅಂಚೆ ಇಲಾಖೆಯಿಂದ ಇನ್ಸೂರೆನ್ಸ್, ಪಿಂಚಣಿ, ಆರ್.ಡಿ ಸೇರಿದಂತೆ ಹಲವಾರು ಪೊಸ್ಟಲ್ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿವೆ. ಆದರೆ, ಅಂಚೆ ಕಛೇರಿಗೆ ಬರುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ಕೊರೆತೆಯಿದ್ದು, ಸಿ.ಎಸ್.ಆರ್ ಅನುದಾನದಲ್ಲಿ ರೂ. 13.50 ಲಕ್ಷಗಳ ವೆಚ್ಚದಲ್ಲಿ ಪ್ರಾಥಮಿಕ ಹಂತದಲ್ಲಿ ಕುಣಿಕೇರಿ ಮತ್ತು ಹಿರೇಬಗನಾಳ ಗ್ರಾಮಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಮತ್ತು ಗುಳದಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ 182 ಪೋಸ್ಟ್ ಆಫೀಸ್ಗಳಿದ್ದು, ಇವುಗಳ ಅಭಿವೃದ್ಧಿಗಾಗಿ ಜಿಲ್ಲೆಯ ವಿವಿಧ ಕಂಪನಿಗಳಿಗೆ ಮನವಿ ಮಾಡಲಾಗಿದೆ. ಎಕ್ಸ್ ಇಂಡಿಯಾದವರು ಮತ್ತು ಮುಕುಂದ್ಸ್ ಕಂಪನಿಯವರು ತಲಾ ಎರಡು ಅಂಚೆ ಕಛೇರಿಯ ಕಟ್ಟಡಗಳನ್ನು ಮಾಡುತ್ತಿದ್ದಾರೆ ಹಾಗೂ ಕಿರ್ಲೋಸ್ಕರ್ ಮತ್ತು ಕಲ್ಯಾಣಿ ಕಂಪನಿಯವರು ತಲಾ 15 ಅಂಚೆ ಕಛೇರಿಯ ಕಟ್ಟಡಗಳನ್ನು ಮಾಡುವುದಾಗಿ ಹೇಳಿದ್ದಾರೆ. ಈ ವರ್ಷ ಸುಮಾರು 35 ರಿಂದ 40 ಪೋಸ್ಟ್ ಆಫೀಸ್ ಕಟ್ಟಡಗಳನ್ನು ನಿರ್ಮಾಣ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಎಂ.ಜಿ.ಎನ್.ಆರ್.ಇ.ಜಿ ಅನುದಾನದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ದತ್ತುಗ್ರಾಮ ಯೋಜನೆಯ ಮೊದಲ ಹಂತದಲ್ಲಿ ಕಾಮನೂರ ಮತ್ತು ಮೋರನಾಳ ಗ್ರಾಮಗಳನ್ನು ದತ್ತು ತಗೆದುಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಎರಡನೇ ಹಂತದಲ್ಲಿ ಜಿಲ್ಲೆಯ ಆಯಾ ವಿಧಾನಸಭಾ ವ್ಯಾಪ್ತಿಯಲ್ಲಿ ಕುಷ್ಟಗಿ ತಾಲ್ಲೂಕಿನ ಹುಯಿಲಗೇರಿ ಮತ್ತು ಮುದೇನೂರ, ಗಂಗಾವತಿ ತಾಲ್ಲೂಕಿನ ಸಂಗಾಪೂರ, ಕಾರಟಗಿ ತಾಲ್ಲೂಕಿನ ಬೇನ್ನೂರ ಮತ್ತು ಕಕ್ಕರಗೋಳ್ಳ, ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಹಾಗೂ ಕೊಪ್ಪಳ ತಾಲ್ಲೂಕಿನ ಮಾದಿನೂರ, ಈ ಎಲ್ಲಾ ಗ್ರಾಮಗಳನ್ನು ದತ್ತು ಗ್ರಾಮಗಳಾಗಿ ಆಯ್ಕೆ ಮಾಡಲಾಗಿದ್ದು, ಕ್ರೀಯಾ ಯೋಜನೆ ಅನುಮೋದನೆಗೆ ಬಾಕಿ ಇರುತ್ತದೆ ಎಂದರು.
]
ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯ ಫಲಿತಾಂಶವು ಕಡಿಮೆಯಿದ್ದು, ಈ ಪ್ರಮಾಣವನ್ನು ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏಕ ಮಾದರಿಯ ತರಗತಿ ಮತ್ತು ಸ್ಮಾರ್ಟ ಕ್ಲಾಸ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಬಿ.ಎಸ್.ಎನ್.ಎಲ್ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮನವಿ ಮಾಡಿದ್ದೇವೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ 43 ಶಾಲೆಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಬಾಕಿ ಶಾಲೆಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸಲು ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದರು.
ರೈಲ್ವೆ ನಿಲ್ದಾಣಗಳ ಹೆಸರು ಬದಲಾವಣೆ ಮಾಡಲು ಭಾನಾಪೂರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧಿ, ಗಂಗಾವತಿ ರೈಲು ನಿಲ್ದಾಣಕ್ಕೆ ಕಿಷ್ಕಿಂದಾ ಮತ್ತು ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೇಮ್ಮದೇವಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲು ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಹೋಗಬೇಕಿದೆ. ಈ ಹೆಸರುಗಳಿಂದ ಐತಿಹಾಸಿಕ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಹುಲಿಗೇಮ್ಮದೇವಿ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ಪ್ರವಾಸೋದ್ಯೋಮ ಇಲಾಖೆಯಿಂದ ಕೇಂದ್ರ ಸರ್ಕಾರದ ಪ್ರಸಾದ್-2 ಯೋಜನೆಯಡಿ 169 ಕೋಟಿ ರೂ.ಗಳ ಅನುದಾನದಲ್ಲಿ ವಿಸೃತ ಯೋಜನಾ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ಹೇಳಿದರು.
ಸಿಂಧನೂರ ಪಟ್ಟಣದಲ್ಲಿ ಹೊಸ ಕೇಂದ್ರಿಯ ವಿದ್ಯಾಲಯ 2025-26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಅನುಮೋದನೆಯಾಗಿದೆ. ಇದರ ಜೊತೆಗೆ ಬಾಗಲಕೋಟ-ಗಂಗಾವತಿ ಹೊಸ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ 2025-26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಅನುಮೋದನೆ ದೊರೆತಿದೆ. ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಡಿ ಕೇಲವು ರಸ್ತೆ ಮತ್ತು ಪೇವರ್ಸ್ ಅಳವಡಿಸುವ ಕಾಮಗಾರಿಗಳು ಮುಕ್ತಾಯಗೊಂಡಿರುತ್ತವೆ. ಕೊಪ್ಪಳ ಪಟ್ಟಣದ ಉಪ ಪ್ರಾದೇಶಿಕ ಕೇಂದ್ರದಲ್ಲಿ ತಾತ್ಕಾಲಿಕ ಕೌಶಲ್ಯಾಭಿವೃದ್ಧಿ ಕೇಂದ್ರ ನಿರ್ಮಾಣ ಕಾಮಗಾರಿಯಡಿ ಕೆ.ಆರ್.ಐ.ಡಿ.ಎಲ್ ಮೂಲಕ ಕೃತಕ ಬುದ್ದಿಮತ್ತೆ ತರಬೇತಿ ಕೇಂದ್ರ ಕಾಮಗಾರಿ ಭೂಮಿ ಪೂಜೆ ಮಾಡುವುದು ಬಾಕಿ ಇದೆ ಎಂದರು.
ಪವರ್ ಗ್ರಿಡ್ ಕಾರ್ಪೋರೇಷನ್ ಇವರಿಂದ ಸಿ.ಎಸ್.ಆರ್ ಅನುದಾನದಡಿ 2 ಮಾದರಿ ಶಾಲೆಗಳ ನಿರ್ಮಾಣ, ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ-150ಎ ರಲ್ಲಿ 7 ಮೇಲ್ಸೆತುವೆ ನಿರ್ಮಾಣ ಕಾಮಗಾರಿಗಳಿಗೆ ರೂ. 23.88 ಕೋಟಿ ಅನುದಾನದಡಿ ಗುಡದೂರ, ರಂಗಾಪೂರ, ಮುದ್ದಾಪೂರ ಕ್ರಾಸ್, ಎಲೆಕುಡ್ಲಗಿ, ಬಸಾಪೂರ, ಕಲ್ಲೂರ ಮತ್ತು ಸಿಂಧನೂರಗಳಲ್ಲಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತದೆ. ಇದರ ಭೂಮಿ ಪೂಜೆ ಮಾಡುವುದು ಬಾಕಿ ಇರುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಿರಗುಪ್ಪ ಪಟ್ಟಣದಲ್ಲಿ ಒನ್ ಟೈಮ್ ಇಂಪ್ರುಮೆಂಟ್ ರೋಡ್ ( One time improvement Road) ನಿರ್ಮಾಣ ಕಾಮಗಾರಿಗಾಗಿ ರೂ. 60 ಕೋಟಿ ವೆಚ್ಚದಲ್ಲಿ ಕೊಪ್ಪಳದಲ್ಲಿ ಈಗಾಗಲೇ ನಿರ್ಮಾಣ ಮಾಡಲಾಗಿರುವ ಸಿಮೆಂಟದ ರಸ್ತೆ ಮಾದರಿಯಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ನಬಾರ್ಡ ವತಿಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೆತಗಲ್ ಗ್ರಾಮದಲ್ಲಿ ಆಹಾರ ಸಂಸ್ಕರಣ ಘಟಕವನ್ನು 4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸುವುದು ಬಾಕಿ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದರ ಆಪ್ತ ಸಹಾಯಕರಾದ ಅರುಣ, ವೀರಭದ್ರಪ್ಪ ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ್ ಜಿ. ಸೇರಿದಂತೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್