ಕೋಲಾರ, ೨೧ ಜೂನ್ (ಹಿ.ಸ) :
ಆ್ಯಂಕರ್ : ವಿದ್ಯಾರ್ಥಿಗಳಿಗೆ ಮಾನಸಿಕ, ದೈಹಿಕ ಆರೋಗ್ಯ ಉತ್ತಮಗೊಳ್ಳುವ ಮೂಲಕ ಸದಾ ಕಲಿಕೆಯಲ್ಲಿ ಕ್ರಿಯಾಶೀಲತೆಗೆ ತುಂಬಲು ಯೋಗಾಭ್ಯಾಸ ಸಹಕಾರಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ತಿಳಿಸಿದರು.
ಶಾಲೆಯ ಆವರಣದಲ್ಲಿ ಪ್ರಕ್ರಿಯಾ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಬೆಳ್ಳೂರು ರಮಾಮಣಿ ಶಾಲೆ ಹಳೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿಶ್ವಯೋಗದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ನಡೆದ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ನಿರಂತರವಾಗಿ ಯೋಗಾಭ್ಯಾಸ ಮಾಡಿ, ಇತರರಿಗೂ ತಿಳಿಸಿಕೊಡಿ. ನಿಮ್ಮ ಕಲಿಕೆಯಲ್ಲಿ ಸದಾ ಕ್ರಿಯಾಶೀಲತೆ ತುಂಬಲು ಯೋಗ ಸಹಕಾರಿ ಎಂಬುದನ್ನು ಮರೆಯದಿರಿ. ಯೋಗ ಜಾತ್ಯಾತೀತವಾದುದು, ಇದಕ್ಕೆ ಪಕ್ಷ,ಜಾತಿ,ವಯಸ್ಸು, ಲಿಂಗ ಬೇಧವಿಲ್ಲ ಪ್ರತಿಯೊಬ್ಬರೂ ಇದನ್ನು ಕಲಿತು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬಹುದಾಗಿದೆ, ವೈಜ್ಞಾನಿಕವಾಗಿಯೂ ಇಂದು ಯೋಗ ತನ್ನ ಸ್ಥಾನ ಗಟ್ಟಿಪಡಿಸಿಕೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಇಡೀ ವಿಶ್ವವೇ ಸ್ಪಂದಿಸಿದೆ, ೨೦೦ಕ್ಕೂ ಹೆಚ್ಚು ದೇಶಗಳು ಇಂದು ಯೋಗದಿನ ಆಚರಿಸುತ್ತಿವೆ ಎಂದು ತಿಳಿಸಿದರು.
ಪ್ರಕ್ರಿಯಾ ಸಂಸ್ಥೆಯ ಎನ್.ನವೀನ್ ಶಾಂತಿ,ಸಾಮರಸ್ಯ,ಮಾನವ ಹಕ್ಕುಗಳರಕ್ಷಣೆ ನಮ್ಮ ಗುರಿಯಾಗಿದ್ದು, ಶಾಲೆಗಳಲ್ಲಿ ಯೋಗಶಿಕ್ಷಣಕ್ಕೆ ಒತ್ತು ನೀಡಲು ಮನವಿ ಮಾಡಿದರು.
ರಮಾಮಣಿ ಶಾಲೆಯ ಯೋಗಾರ್ಥಿಗಳಾದ ಚೇತನ್, ನವೀನ್ ಬಾಬು ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಟ್ಟು, ನಿರಂತರ ಯೋಗ ಮಾಡಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ,ಶ್ವೇತಾ, ಸುಗುಣ, ಲೀಲಾ, ಸಿ.ಎಲ್.ಶ್ರೀನಿವಾಸಲು, ರಮಾದೇವಿ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿಶ್ವ ಯೋಗದಿನದ ಅಂಗವಾಗಿ ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್