ಗದಗ, 21 ಜೂನ್ (ಹಿ.ಸ.) :
ಆ್ಯಂಕರ್ : ದಿನನಿತ್ಯ ಒತ್ತಡದಲ್ಲಿರುವ ಮನುಷ್ಯ ಒತ್ತಡದಿಂದ ಹೊರಬರಲು ಯೋಗಾಸನ ಮೈಗೂಡಿಸಿಕೊಳ್ಳಬೇಕು. ಒತ್ತಡರಹಿತ ಜೀವನಕ್ಕೆ ಮನುಷ್ಯನಿಗೆ ಯೋಗಾಸನ ಅತ್ಯವಶ್ಯಕ ಎಂದು ರಾಜೂರು ಗ್ರಾಮ ಪಂಚಾಯತ ಅಧ್ಯಕ್ಷೆ ಕಳಕವ್ವ ಜೋಳ್ಳಿ ಅಭಿಪ್ರಾಯಪಟ್ಟರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮ ಪಂಚಾಯತ ವ್ಯಾಪ್ತಿಯ ಬೈರಾಪೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿಯ ಸಮುದಾಯ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರ್ಮಿಕರು ಭಾಗವಹಿಸಿದ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನಿಕ ಜೀವನದಲ್ಲಿ ಮನುಷ್ಯ ಶಾರೀರಿಕವಾಗಿ ಸದೃಢರಾಗಿರಲು ಅನೇಕ ದೈಹಿಕ ಕಸರತ್ತು ನಡೆಸುತ್ತಾನೆ. ನಗರಪಟ್ಟಣದ ಜನರು ಜಿಮ್, ಏರೋಬಿಕ್, ಗರಡಿ ಮನೆಯಂತಹ ಪರಿಕರಗಳನ್ನು ಬಳಸಿಕೊಂಡು ಶಾರೀರಿಕ ಕಸರತ್ತ ನಡೆಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಜನರು ಯೋಗಾಸನವನ್ನು ಜೀವನದಲ್ಲಿ ಪ್ರತಿನಿತ್ಯ ರೂಢಿಸಿಕೊಂಡರೆ ಜೀವನದಲ್ಲಿ ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹೊಲದಲ್ಲಿ ಎಷ್ಟೇ ದೈಹಿಕವಾಗಿ ದುಡಿದರೂ ಮನಸ್ಸಿನ ನೆಮ್ಮದಿಗೆ ಮತ್ತು ಏಕಾಗ್ರತೆಗಾಗಿ ಯೋಗಾಸನ ಅತ್ಯವಶ್ಯಕ. ಹೀಗಾಗಿ ಇಡೀ ವಿಶ್ವಕ್ಕೆ ಭಾರತದ ದೇಶ ಯೋಗವನ್ನು ಕೊಡುಗೆಯಾಗಿ ನೀಡಿದೆ. ಜೂನ್ ೨೧ ರ ಯೋಗ ಡೇ ನಮಗೆಲ್ಲ ನವಚೈತನ್ಯವನ್ನು ತಂದುಕೊಡಲಿ ಎಂದು ಯೋಗದ ಮಹತ್ವವನ್ನು ತಿಳಿಸಿದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ನರೇಗಾ ಯೋಜನೆಯಡಿ ಕೈಗೊಂಡ ಸಮುದಾಯ ಕಂದಕ ಬದು ನಿರ್ಮಾಣ ಕೆಲಸದಲ್ಲಿ ಬೈರಾಪೂರು ಗ್ರಾಮದ ೧೫೦ ಕ್ಕೂ ಅಧಿಕ ನರೇಗಾ ಕೂಲಿಕಾರ್ಮಿಕರು ಯೋಗಾಸನ ಕೈಗೊಂಡರು. ಸೂರ್ಯನಮಸ್ಕಾರ, ಅರ್ಧಚಕ್ರಾಸನ, ಪದ್ಮಾಸನ, ವಜ್ರಾಸನ ಸೇರಿದಂತೆ ಹಲವು ಬಗೆಯ ಆಸನಗಳನ್ನು ಯೋಗ ಡೇ ಅಂಗವಾಗಿ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ರಾಜೂರು ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮ ಕಾಯಕಮಿತ್ರ ಬಾಳಮ್ಮ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿ ವರ್ಗ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP