ಬಳ್ಳಾರಿ, 21 ಜೂನ್ (ಹಿ.ಸ.) :
ಆ್ಯಂಕರ್ : ಪ್ರತಿಯೊಬ್ಬರೂ ಸ್ವ ಉದ್ಯೋಗ, ಸ್ವಾವಲಂಬನೆ ಮತ್ತು ಸ್ವ ದುಡಿಮೆಗಾಗಿ ಉದ್ಯೋಗ ಸೃಷ್ಟಿಸುವಂತರಾಗಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರು ಕರೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬಳ್ಳಾರಿ ಚೇಂಬರ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲ್ಯಾಭಿವೃದ್ಧಿ ಇಲಾಖೆ, ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಅಡಿಯಲ್ಲಿ ತರಬೇತಿ ಪಡೆದಿರುವ ಟ್ಯಾಲಿ ಪ್ರೈಮ್ ಮತ್ತು ಹೋಟಲ್ ಮೇನೇಜ್ಮೆಂಟ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ಶನಿವಾರ ವಿತರಣೆ ಮಾಡಿ, ಮಾತನಾಡಿದರು.
ನೀವೆಲ್ಲರೂ ದೇಶದ ಭವಿಷ್ಯ. ನೀವುಗಳು ಉದ್ಯೋಗಕ್ಕಾಗಿ ಕಾಯವುದು ಬಿಟ್ಟು ಮುಕ್ತ ಮತ್ತು ತೆರೆದ ಮನಸ್ಸಿನಿಂದ ಹೊಸತನಕ್ಕೆ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ದೊಡ್ಡ ದೊಡ್ಡ ಸಾಧನೆಗಳನ್ನು ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನಿಸಿ ಮುಂದಿನ ಪೀಳಿಗೆಗೆ ಆದರ್ಶರು – ಮಾರ್ಗದರ್ಶಕರು ಮತ್ತು ಪ್ರೇರಣೆ ನೀಡುವವರು ಆಗಬೇಕು ಎಂದರು.
ಈ ಹಿಂದೆ ಮಾಹಿತಿಯ ಕೊರತೆ ಸಾಕಷ್ಟಿತ್ತು. ಇಂಟರ್ನೆಟ್ ಮತ್ತು ಸ್ಮಾರ್ಟ್ ಮೊಬೈಲ್ಗಳು ಮಾಹಿತಿಯ ಕೊರತೆಯನ್ನು ನೀಗಿಸಿದ್ದು, ಮೆಟ್ರೋ ಸಿಟಿಯ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲಾ ಮಾಹಿತಿ, ಜ್ಞಾನ ಹಳ್ಳಿಯ ವಿದ್ಯಾರ್ಥಿಗಳಿಗೂ ಸುಲಭವಾಗಿ ಸಿಗುತ್ತಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಟ್ಯಾಲಿಪ್ರೈಂ, ಬೇಸಿಕ್ ಕಂಪ್ಯೂಟರ್ಸ್ನಲ್ಲಿ 200 ಅಭ್ಯರ್ಥಿಗಳು, ಹೋಟಲ್ ಮೇನೇಜ್ಮೆಂಟ್ನಲಿ 50 ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಆಸಕ್ತರಿಗೆ ಅಪ್ರೆಂಟಿಶಿಫ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಸಂಡೂರು ಪಟ್ಟಣದಲ್ಲಿ ನಮ್ಮ ಸಂಸ್ಥೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಜಿಲ್ಲಾಡಳಿತ ಪರವಾನಿಗೆ ನೀಡಬೇಕು ಎಂದು ಕೋರಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು, ಹೋಟಲ್ ಮೇನೇಜ್ಮೆಂಟ್ ಕೋರ್ಸ್ನ ತರಬೇತಿ ಪಡೆದಲ್ಲಿ `ನಿರುದ್ಯೋಗ’ ಸಮಸ್ಯೆಯೂ ಇರುವುದಿಲ್ಲ, ಈ ಕ್ಷೇತ್ರದಲ್ಲಿ ಅವಕಾಶಗಳಿಗೆ ಕೊನೆಯಿಲ್ಲ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಟ್ಯಾಕ್ಸೇಷನ್ ಕಮಿಟಿ ಚೇರ್ಮೆನ್ ಆಗಿರುವ ಸಿಎ ಕೆ. ರಾಜಶೇಖರ್ ಭವಿಷ್ಯದಲ್ಲಿ ವೃತ್ತಿಪರ ಕೋರ್ಸ್ಗಳಿಗೆ ಬೇಡಿಕೆ ಇದೆ. ಕಾರಣ ವಿದ್ಯಾರ್ಥಿಗಳು ಕೇವಲ ಕ್ಲಾಸ್ರೂಂಗೆ ಸೀಮಿತಗೊಳ್ಳದೇ ವೃತ್ತಿಪರ ಕೋರ್ಸ್ಗಳಿಗೆ ಸೇರಿ ಆಯಾ ವೃತ್ತಿಯ ಕೌಶಲ್ಯ – ನೈಪುಣ್ಯತೆಯನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.
ತರಬೇತಿ ಪಡೆದ ಅಭ್ಯರ್ಥಿಗಳಾದ ಮೊಬಿನ, ಇಂದು, ಮಣಿಕಂಠ, ಖುಕ್ಸಾನಾ ಬೇಗಂ, ಉಮಾಭಾರತಿ, ಹೊನ್ನೂರು ಬಿ., ಮೋಕ ಮುದುಮಲ್ಲಯ್ಯ ಅವರು ತರಬೇತಿಯನ್ನು ಮೆಚ್ಚಿ, ಪ್ರಸ್ತುತ ಸನ್ನಿವೇಶದಲ್ಲಿ ಕೌಶಲ್ಯದ ಅನಿವಾರ್ಯತೆಗಳ ಕುರಿತು ಮಾತನಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ, ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಚೇಂಬರ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ನಾಗಳ್ಳಿ ರಮೇಶ್, ವಿಶೇಷ ಆಹ್ವಾನಿತರಾದ ಕೆ. ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್