ಬಳ್ಳಾರಿ, 21 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯಲ್ಲಿರುವ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ಸಿಗರಿಗೆ ಹೇಳುವುದು `ಕೋಣದ ಮುಂದೆ ನಾವು (ಪ್ರತಿ ಪಕ್ಷದವರು) ಕಿನ್ನರಿ ಬಾರಿಸಿದಂತೆ' ಆಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಮೀನಳ್ಳಿ ತಾಯಣ್ಣ ಅವರು ಆರೋಪಿಸಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪತ್ರಕರ್ತರ ಜೊತೆ ಶನಿವಾರ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಸಾರಿಗೆ ಮತ್ತು ಪೊಲೀಸ್ ವೈಫಲ್ಯದ ಕಾರಣ ರಸ್ತೆ ಸಂಚಾರ ಸಾಕಷ್ಟು ತೊಂದರೆಗೆ ಈಡಾಗಿದೆ. ಬಳ್ಳಾರಿಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಆಡಳಿತ ಸಂಪೂರ್ಣ ವಿಫಲವಾಗಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು.
ಗಾಂಜಾ ಹಾವಳಿ, ಅನಧಿಕೃತ ಕ್ಲಬ್ಗಳು, ಮಟಕಾ ಜೂಟಾಟ, ಕ್ರಿಕೆಟ್ ಬೆಟ್ಟಿಂಗ್, ಇನ್ನಿತರೆ ಅಕ್ರಮಗಳು ಎಲ್ಲವೂ ಭ್ರಷ್ಟಾಚಾರದಲ್ಲಿ ಮರೆಯಾಗಿವೆ. ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ದಶಕಗಳಿಂದಲೂ ಬಳ್ಳಾರಿಯಲ್ಲಿಯೇ ಬೀಡುಬಿಟ್ಟಿದ್ದಾರೆ. ಉದಾಹರಣೆಗೆ ಜಿಲ್ಲಾ ಸರ್ಜನ್ ಡಾ. ಬಸಿರೆಡ್ಡಿ, ಡಾ. ಬಿ. ಗಂಗಾಧರಗೌಡ ಇನ್ನಿತರರು ಅನೇಕರ ಸಾಲೇ ಇಲ್ಲಿ ಸಿಗಲಿದೆ. ಇವರ ವಿರುದ್ಧ ದೂರುಗಳಿದ್ದರೂ, ಜನಪ್ರತಿನಿಧಿಗಳ ಒಡನಾಟದ ಕಾರಣ ಅವರು ಅದೇ ಹುದ್ದೆಯಲ್ಲಿ ಮುಂದುವರೆಯುತ್ತಿರುವುದು ದೊಡ್ಡ ವಿಪರ್ಯಾಸ ಎಂದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಜೆಡಿಎಸ್ ಮುಂದಿನ ದಿನಗಳಲ್ಲಿ, ಹಂತಗಳಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯ ಮೂಲಕ ಅಧಿಕಾರಿಗಳು - ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್