ನಾಲ್ಕು ವರ್ಷಗಳ ನೋವಿಗೆ ಅಂತ್ಯ ಹಾಡಿದ 11 ಗಂಟೆಗಳ ಶಸ್ತ್ರಚಿಕಿತ್ಸೆ
ದಾವಣಗೆರೆಯಲ್ಲಿ ಯುವಕನಿಗೆ 'ಹೊಸ ಜೀವನ' ಕೊಟ್ಟ ಎಸ್‌ಎಸ್‌ ನಾರಾಯಣ ಆಸ್ಪತ್ರೆ ವೈದ್ಯರು
Operation


ದಾವಣಗೆರೆ, 19 ಜೂನ್ (ಹಿ.ಸ.) :

ಆ್ಯಂಕರ್ : ನಾಲ್ಕು ವರ್ಷಗಳ ಕಾಲ ಪದೇ ಪದೇ ತೀವ್ರವಾದ ಹೊಟ್ಟೆನೋವು, ಜ್ವರ, ಬಳಲಿಕೆಯಿಂದ ನರಳಿದ 26 ವರ್ಷದ ಯುವಕನಿಗೆ ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ವೈದ್ಯರು ಅಕ್ಷರಶಃ ಜೀವದಾನ ಮಾಡಿದ್ದಾರೆ!

ಅಪರೂಪವಾದ, ಅತ್ಯಂತ ಸಂಕೀರ್ಣವಾದ ಲೀವರ್‌ (ಯಕೃತ್ತ)ನ ರಕ್ತದ ಹರಿವಿನ ಸಮಸ್ಯೆಯಾದ ಎಕ್ಸ್‌ಟ್ರಾಹೆಪಾಟಿಕ್ ಪೋರ್ಟಲ್ ವೀನಸ್ ಅಬ್ಸ್ಟ್ರಕ್ಷನ್ (EHPVO) ನಿಂದ ಬಳಲುತ್ತಿದ್ದ ಈ ರೋಗಿಯ ಪ್ರಾಣ ಉಳಿಸಲು, ವೈದ್ಯರು ಬರೋಬ್ಬರಿ 11 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಈ ಯುವಕನಿಗೆ ಹೊಟ್ಟೆ ನೋವು, ಪದೇ ಪದೇ ಬರುವ ಜ್ವರ, ದೇಹದ ನಿಶ್ಶಕ್ತಿ, ಮತ್ತು ಏನನ್ನೂ ತಿನ್ನಲು ಆಗದಿರುವ ಸಮಸ್ಯೆಗಳು ದಿನನಿತ್ಯದ ಸಂಗತಿಯಾಗಿದ್ದವು. ತನ್ನ ರೋಗಕ್ಕೆ ಚಿಕಿತ್ಸೆ ಹುಡುಕಿಕೊಂಡು ಅದೆಷ್ಟೋ ಆಸ್ಪತ್ರೆಗಳಿಗೆ ಅಲೆದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ, ಅವನಿಗೆ ಜಾಂಡೀಸ್ ಕಾಣಿಸಿಕೊಂಡು, ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿ, ಮೈ ನಡುಗುವಿಕೆ ಶುರುವಾಗಿತ್ತು. ಬದುಕಿನ ಆಸೆಯೇ ದೂರವಾಗಿ, ನಿರಂತರ ಆಸ್ಪತ್ರೆ ಭೇಟಿಗಳಿಂದ ಹತಾಶನಾಗಿದ್ದ ಆ ಯುವಕ, ಕೊನೆಗೆ ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ತನ್ನ ಭರವಸೆಯನ್ನು ಕಂಡುಕೊಂಡ.

ಅವರು ಎಸ್‌ಎಸ್ ನಾರಾಯಣ ಹೆಲ್ತ್‌ ಸೂಪರ್ ಸ್ಪೆಷಾಲಿಟಿ ಸೆಂಟರ್‌ಗೆ ಭೇಟಿ ನೀಡಿದಾಗ, ಸರ್ಜಿಕಲ್‌ ಗ್ಯಾಸ್ಟ್ರೋಎಂಟರೋಲಾಜಿಸ್ಟ್‌ ಡಾ. ಆರ್.ಕೆ. ಹನುಮಂತ್ ನಾಯ್ಕ್‌ ನೇತೃತ್ವದ ವೈದ್ಯರ ತಂಡವು ರೋಗಿಯ ಪೋರ್ಟಲ್ ವೇನ್ (ಕರುಳಿನಿಂದ ಯಕೃತ್ತಿಗೆ ರಕ್ತವನ್ನು ಕೊಂಡೊಯ್ಯುವ ಮುಖ್ಯ ರಕ್ತನಾಳ) ಹಳೆಯ ರಕ್ತ ಹೆಪ್ಪುಗಟ್ಟುವಿಕೆಯಿಂದ ರಕ್ತ ಸಂಚಾರ ನಿರ್ಬಂಧವಾಗಿರುವದನ್ನು ಪತ್ತೆಹಚ್ಚಿತು. ಇದರಿಂದಾಗಿ, ರಕ್ತದ ಹರಿವನ್ನು ಮುಂದುವರೆಸಲು ದೇಹವು ಸಣ್ಣ ಬೈಪಾಸ್ ರಕ್ತನಾಳಗಳನ್ನು (ಕಾವರ್ನಸ್ ಟ್ರಾನ್ಸ್‌ಫಾರ್ಮೇಶನ್ ಎಂದು ಕರೆಯಲ್ಪಡುವ ಸ್ಥಿತಿ) ಸೃಷ್ಟಿಸಿತ್ತು. ಆದಾಗ್ಯೂ, ಇದು ಗುಲ್ಮ(Spleen)ದ ಊತ (ಸ್ಪ್ಲೆನೋಮೆಗಾಲಿ), ಪಿತ್ತನಾಳಗಳ ಹಿಗ್ಗುವಿಕೆ ಮತ್ತು ಯಕೃತ್ತಿನ ರಕ್ತನಾಳಗಳಲ್ಲಿ ಅಧಿಕ ಒತ್ತಡಕ್ಕೆ (ಪೋರ್ಟಲ್ ಹೈಪರ್ಟೆನ್ಷನ್) ಕಾರಣವಾಗಿತ್ತು. ಇದು ಹೊಟ್ಟೆ ಮತ್ತು ಪಿತ್ತ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ರಕ್ತಸ್ರಾವದ ಅಪಾಯಗಳು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಿತ್ತು.

ಇದಕ್ಕೆ ಚಿಕಿತ್ಸೆ ನೀಡಲು, ವೈದ್ಯಕೀಯ ತಂಡವು “ಪ್ರಾಕ್ಸಿಮಲ್ ಸ್ಪ್ಲೆನೋರೆನಲ್ ಶಂಟ್” ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಸರಳವಾಗಿ ಹೇಳುವುದಾದರೆ, ಶಸ್ತ್ರಚಿಕಿತ್ಸಕರು ಸ್ಪ್ಲೆನಿಕ್ ವೇನ್ (ಗುಲ್ಮದಿಂದ) ಅನ್ನು ಎಡ ಮೂತ್ರಪಿಂಡದಿಂದ ಸಂಪರ್ಕಿಸಿ, ನಿರ್ಬಂಧಿತ ಪೋರ್ಟಲ್ ವೇನ್ ಅನ್ನು ಬೈಪಾಸ್ ಮಾಡಲು ರಕ್ತಕ್ಕೆ ಹೊಸ ಮಾರ್ಗವನ್ನು ಸೃಷ್ಟಿಸಿದರು. ಇದು ಯಕೃತ್ತಿನ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ಮತ್ತು ಮುಂದಿನ ತೊಡಕುಗಳನ್ನು ನಿವಾರಿಸುತ್ತದೆ.

ರೋಗಿಯ ಬಗ್ಗೆ ಮಾತನಾಡಿದ ಡಾ. ನಾಯ್ಕ, ರೋಗಿಯನ್ನು ದಾಖಲಿಸಿದಾಗ ಅವರ ಹಿಮೋಗ್ಲೋಬಿನ್ ಮಟ್ಟ, ಡಬ್ಲ್ಯೂಬಿಸಿ, ಪ್ಲೇಟ್‌ಲೆಟ್ ಸಂಖ್ಯೆಗಳು ತುಂಬಾ ಕಡಿಮೆ ಇದ್ದವು ಇದರಿಂದಾಗಿ ಅವರಿಗೆ ಆಗಾಗ್ಗೆ ಸೋಂಕು ತಗುಲುತ್ತಿತ್ತು, ಅವರ ರಕ್ತನಾಳಗಳು, ಪಿತ್ತನಾಳಗಳು ಹಿಗ್ಗಿದ್ದವು. ಶಸ್ತ್ರಚಿಕಿತ್ಸೆ ಮಾಡದಿದ್ದರೆ ರಕ್ತನಾಳಗಳು ಛಿದ್ರಗೊಂಡು ಮಾರಣಾಂತಿಕವಾಗುವ ಸಾಧ್ಯತೆ ಇತ್ತು ಎಂದರು.

ಶಸ್ತ್ರಚಿಕಿತ್ಸೆಯ ನಂತರ, ರೋಗಿಯು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಶಕ್ತಿ ಮತ್ತು ಸಾಮಾನ್ಯ ಹಸಿವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ. ರೋಗಿಯು ಆಸ್ಪತ್ರೆಯಿಂದ ಗುಣಮುಖರಾಗಿ ಇತ್ತೀಚೆಗೆ ಮನೆಗೆ ಹಿಂತಿರುಗಿದ್ದಾರೆ ಎಂದರು..

ಡಾ. ನಾಯ್ಕ್ ಅವರು, ಆರಂಭಿಕ ರೋಗನಿರ್ಣಯ ಮತ್ತು ವಿಶೇಷ ಚಿಕಿತ್ಸೆಯು ರೋಗಿಯ ಜೀವವನ್ನು ಉಳಿಸಿದೆ ಮತ್ತು ಅವರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದು ಹೇಳಿದರು.

ಈ ಪ್ರಕರಣವು ದೀರ್ಘಕಾಲದ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಗಮನ ಕೊಡುವುದು ಮತ್ತು ತಜ್ಞ ವೈದ್ಯರ ಸಹಾಯ ಪಡೆಯುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಇಮೇಜಿಂಗ್‌ನಲ್ಲಿನ ಪ್ರಗತಿಯೊಂದಿಗೆ, EHPVO ನಂತಹ ಅಪರೂಪದ ಯಕೃತ್ತಿನ ಅಸ್ವಸ್ಥತೆಗಳಿಗೂ ಈಗ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂದು ಅವರು ಹೇಳಿದರು.

ಎಸ್‌ ಎಸ್‌ ನಾರಾಯಣ ಹೆಲ್ತ್‌ ಸೂಪರ್‌ ಸ್ಪೇಷಾಲಿಟಿ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುನೀಲ್‌ ಭಂಡಾರಿಗಲ್‌ ಅವರು ಅತಿ ಕ್ಲೀಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ವೈದ್ಯಕೀಯ ತಂಡವನ್ನು ಅಭಿನಂದಿಸಿದ್ದು. ಇದು ನಾರಾಯಣ ಹೆಲ್ತ್‌ನಲ್ಲಿ ಅತಿ ಕ್ಲೀಷ್ಟಕರವಾದ ಆರೋಗ್ಯ ಸಮಸ್ಯೆಗಳಿಗೆ ಆಧುನಿಕ ಚಿಕಿತ್ಸೆ ಲಭ್ಯವಿದೆ ಎಂಬುದನ್ನು ಸಾರುತ್ತದೆ ಎಂದರು.

ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದ ವೈದ್ಯರ ತಂಡದಲ್ಲಿ ಅರಿವಳಿಕೆ ತಜ್ಞರಾದ ಡಾ. ಸಾಗರ್ ಎಸ್‌ ಎಂ ಮತ್ತು ಡಾ. ಜಯಶ್ರೀ ಪಾಟೀಲ, ಇಂಟೆನ್ಸಿವಿಸ್ಟ್ ಡಾ. ವಿಶ್ವಾಸ್ ಜಿಕೆ ಮತ್ತು ಡಾ. ಕಿರಣ್ ಬಿಆರ್‌ ಇದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande