ಕೊಪ್ಪಳ, 17 ಜೂನ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರ ಬೆಳೆವಿಮೆ ನೊಂದಾಯಿಸಿಕೊಳ್ಳುವಂತೆ ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್ ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ನೀರಾವರಿ ಹತ್ತಿ ಮತ್ತು ಮಳೆಯಾಶ್ರಿತ ಹೆಸರು ಬೆಳೆಗಳಿಗೆ ನೋಂದಾಯಿಸಲು ಜುಲೈ 15 ಹಾಗೂ ಇತರೆ ಅಧಿಸೂಚಿತ ಎಲ್ಲಾ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ.
ರೈತರು ಬೆಳೆವಿಮೆ ನೋಂದಾಯಿಸಿ ಬೆಳೆವಿಮೆ ಪರಿಹಾರ ಲಾಭ ಪಡೆಯಬೇಕು. ರೈತರು ಕಡ್ಡಾಯವಾಗಿ ಎಫ್ಐಡಿ ಯನ್ನು ಹೊಂದಿರಬೇಕು. ರೈತರು ಬಿತ್ತನೆ ಮಾಡುವ ಬೆಳೆಯನ್ನೆ ನೋಂದಾಯಿಸಬೇಕು ಮತ್ತು ತಮ್ಮ ಬೆಳೆಯನ್ನು ತಾವೇ ಖುದ್ದಾಗಿ ಬೆಳೆ ಸಮೀಕ್ಷೆಯನ್ನು ಮಾಡಬೇಕು.
ರೈತರು ತಮ್ಮ ದಾಖಲಾತಿಗಳಾದ ಪಹಣಿ, ಆಧಾರಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಜರಾಕ್ಸ ಇನ್ನೊಬ್ಬರಿಗೆ ಯಾವುದೇ ಕಾರಣಕ್ಕೂ ನೀಡಬಾರದು. ತಾವೇ ಖುದ್ದಾಗಿ ಬೆಳೆವಿಮೆ ನೋಂದಾಯಿಸಬೇಕು. ಒಂದು ವೇಳೆ ಬೇರೆ ರೈತರ ದಾಖಲಾತಿಗಳನ್ನು ಉಪಯೋಗಿಸಿಕೊಂಡು ಬೆಳೆವಿಮೆ ವಿಮೆ ನೋಂದಾಯಿಸಿದ್ದು, ಕಂಡು ಬಂದರೆ ಅಂತವರ ವಿವರಗಳನ್ನು ಕೂಡಲೇ ಕೃಷಿ ಇಲಾಖೆಗೆ ತಿಳಿಸಲು ಸೂಚಿಸಿದೆ.
ಅಧಿಸೂಚಿತ ಬೆಳೆಗಳ ವಿವರ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳ ವಿವರ ಇಂತಿದೆ. ಗಂಗಾವತಿ ತಾಲ್ಲೂಕಿನ ನೀರಾವರಿ ಭತ್ತ, ಕೊಪ್ಪಳ ಮತ್ತು ಕುಷ್ಟಗಿ ತಾಲ್ಲೂಕಿನ ಮಳೆಯಾಶ್ರಿತ ಮುಸಕಿನಜೋಳ ಹಾಗೂ ಸಜ್ಜೆ, ಯಲಬುರ್ಗಾ ತಾಲ್ಲೂಕಿನ ಮಳೆಯಾಶ್ರಿತ ಹೆಸರು, ಮುಸುಕಿನಜೋಳ ಬೆಳೆ ಸೇರಿದೆ.
ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಾದ ಮಳೆಯಾಶ್ರಿತ ಅಥವಾ ನೀರಾವರಿ ಬೆಳೆಗಳಾದ ಭತ್ತ, ಜೋಳ, ಮುಸಕಿನ ಜೋಳ, ಸಜ್ಜೆ, ಸೂರ್ಯಕಾಂತಿ, ತೊಗರಿ, ನಲೆಗಡಲೆ (ಶೇಂಗಾ), ಹತ್ತಿ, ಈರುಳ್ಳಿ, ಹಾಗೂ ಮಳೆಯಾಶ್ರಿತ ಅಲಸಂದಿ, ನವಣೆ, ಹೆಸರು, ಹುರಳಿ, ಎಳ್ಳು ಬೆಳೆ ಮತ್ತು ಟಮೆಟೊ ಬೆಳೆ ಈ ಯೋಜನೆಯಡಿ ಒಳಗೊಂಡಿದೆ.
ಪ್ರಸಕ್ತ ಸಾಲಿಗೆ ಟಾಟಾ ಎಐಜಿ ಇನ್ಸೂರೇನ್ಸ ಕೋ ಲೀಮಿಟೆಡ್ ಆಯ್ಕೆಯಾಗಿದ್ದು, ರೈತರು ಹೆಚ್ಚಿನ ಮಾಹಿತಿಗಾಗಿ ಇನ್ಸೂರೇನ್ಸ ಕಂಪನಿಯ ಪ್ರತಿನಿಧಿ ಅಥವಾ ಟೋಲ್ ಪ್ರೀ ನಂಬರ-18002093536 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ್ ಒನ್ ಅಥವಾ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್