ರಾಯಚೂರು, 17 ಜೂನ್ (ಹಆ್ಯಂಕರ್ : ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಕ್ಲೆರೋಸಿಸ್, ಆಟಿಸಂ, ಬೌದ್ಧಿಕ ವಿಕಲತೆ ಹಾಗೂ ಶ್ರವಣ ಮತ್ತು ದೃಷ್ಟಿನ್ಯೂನತೆ ಸೇರಿದಂತೆ ಬಹುವಿಧದ ಅಂಗವಿಕಲತೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಮಾಸಿಕ 1000 ರೂ. ನಷ್ಟು ಗೌರವಧನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಆದೇಶನುಸಾರ ವಿಶೇಷ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಅರ್ಜಿ ಆಹ್ವಾನಿಸಿದೆ.
ಅಂಗವಿಕಲತೆಯಿಂದ ಬಳಲುತ್ತಿರುವ ವಿಕಲಚೇತನರ ಆರೈಕೆದಾರರು ಜೂನ್ 30ರೊಳಗಾಗಿ ಅರ್ಜಿ ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ರಾಯಚೂರು ಜಿಲ್ಲಾ ಕಚೇರಿಯಿಂದ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು: ಭಾವಚಿತ್ರ, ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರುವ ತಹಶೀಲ್ದಾರರು ನೀಡುವ ವಾಸಸ್ಥಳ ಪ್ರಮಾಣಪತ್ರ, ಶೇಕಡಾ 75 ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣಪತ್ರ (ಯುಡಿಐಡಿ ಕಾರ್ಡ್), ಬ್ಯಾಂಕ್ ಉಳಿತಾಯ ಖಾತೆಯ ಪಾಸ್ಬುಕ್ ನಕಲು ಮತ್ತು ಇತರ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
ಈ ಯೋಜನೆಯಡಿಯಲ್ಲಿ ಯಾವುದೇ ಆದಾಯ ಮಿತಿಯೂ ಇಲ್ಲದೆ ಹಾಗೂ ವಯೋಮಿತಿಯೂ ಇಲ್ಲದೆ ಅರ್ಹರಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ದಾಖಲೆಗಳೆಲ್ಲವನ್ನು ಲಗತ್ತಿಸದೆ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 08532-200992 ಅಥವಾ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳ ಎಂ.ಆರ್.ಡಬ್ಲ್ಯೂ ಕಾರ್ಯಕರ್ತರನ್ನು ಸಂಪರ್ಕಿಸಬಹುದು.
ರಾಯಚೂರುಗೆ ಅಮರೇಶ್ ಯಾದವ್ 9972237508, ಮಾನವಿಗೆ ರಾಘವೇಂದ್ರ 9740203769, ಸಿಂಧನೂರಿಗೆ ಬಸವರಾಜ 9900298217, ದೇವದುರ್ಗಕ್ಕೆ ಲೋಕಪ್ಪ ನೂರ್ ನಾಯ್ಕೆ 9945207693 ಹಾಗೂ ಲಿಂಗಸೂಗೂರಿಗೆ ನಾಗರಾಜ್ 9739668380 ಎಂಬ ಎಂ.ಆರ್.ಡಬ್ಲ್ಯೂ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್